ಅಜ್ಜನ ಹತ್ಯೆಗೈದಿದ್ದ ಮೊಮ್ಮಗನಿಗೆ ಜೀವಾವಧಿ ಶಿಕ್ಷೆ

ಶಿವಮೊಗ್ಗ: ತನ್ನ ಅಜ್ಜನನ್ನೇ ಕೊಲೆ ಮಾಡಿದ್ದ ಅಪರಾಧಕ್ಕಾಗಿ ಸಾತ್ವಿಕ್‍ಗೆ 5ನೇ ಹೆಚ್ಚುವರಿ ಮತ್ತು ಜಿಲ್ಲಾ ಸೆಷನ್ಸ್ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.

ಜಿಲ್ಲೆಯ ಸಾಗರ ತಾಲೂಕಿನ ಕೆಳದಿ ಗ್ರಾಮದಲ್ಲಿ ಘಟನೆ ನಡೆದಿತ್ತು. ತನ್ನ ಅಜ್ಜ ರಾಮರಾವ್ ಅವರನ್ನು ಸಾತ್ವಿಕ್ ಕೊಲೆ ಮಾಡಿದ್ದ. ಈ ಸಂಬಂಧ ರಾಮರಾವ್ ಪತ್ನಿ ಬಂಗಾರಮ್ಮ ಮೊಮ್ಮಗ ಸಾತ್ವಿಕ್ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದರು.

ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದ ಸಾಗರ ಗ್ರಾಮಾಂತರ ಠಾಣೆ ಪೊಲೀಸರು ತನಿಖೆ ನಡೆಸಿ ಸಾತ್ವಿಕ್ ವಿರುದ್ಧ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಶೋಭಾ, ಆರೋಪಿ ಸಾತ್ವಿಕ್‍ಗೆ ಜೀವಾವಧಿ ಶಿಕ್ಷೆ ವಿಧಿಸಿದ್ದಾರೆ. ಈ ಪ್ರಕರಣದಲ್ಲಿ ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಅಣ್ಣಪ್ಪ ನಾಯ್ಕ್ ವಾದಿಸಿದ್ದರು.

ಸಾತ್ವಿಕ್ ಪೋಲಿ ಹುಡುಗರ ಸಹವಾಸ ಮಾಡಿ ಪ್ರತಿನಿತ್ಯ ಮದ್ಯಪಾನ ಮಾಡಿ ಮನೆಗೆ ಬರುತ್ತಿದ್ದ. ದುಶ್ಚಟ ಹಾಗೂ ದುಷ್ಟ ಸ್ನೇಹಿತರ ಸಹವಾಸ ಕೈ ಬಿಡುವಂತೆ ಅಜ್ಜ ರಾಮರಾವ್ ಮೊಮ್ಮಗನಿಗೆ ಬುದ್ಧಿ ಮಾತು ಹೇಳಿದ್ದರು. ಮಾತು ಕೇಳದ ಸಾತ್ವಿಕ್ 2018ರ ಮೇ 9 ರಂದು ಎಂದಿನಂತೆ ಕುಡಿದು ಮನೆಗೆ ಬಂದಾದಿದ್ದಾನೆ. ಆಗ ಅಜ್ಜ ರಾಮರಾವ್ ಮೊಮ್ಮಗನಿಗೆ ಬುದ್ಧಿಮಾತು ಹೇಳಿದ್ದಾರೆ. ಇದರಿಂದ ಕೆರಳಿದ ಸಾತ್ವಿಕ್ ಹರಿತವಾದ ವಸ್ತುವಿನಿಂದ ತನ್ನ ಅಜ್ಜನ ತಲೆಗೆ ಹೊಡೆದಿದ್ದ. ಪರಿಣಾಮ ರಾಮರಾವ್ ಮೃತಪಟ್ಟಿದ್ದರು.

Comments

Leave a Reply

Your email address will not be published. Required fields are marked *