ನಾಮಕರಣ ಮುಗಿಸಿ ಬಂದ ಯದುವೀರ್ ದಂಪತಿ, ಆದ್ಯವೀರ್ ಗೆ ಮೈಸೂರು ಅರಮನೆಯಲ್ಲಿ ಅದ್ಧೂರಿ ಸ್ವಾಗತ!

ಮೈಸೂರು: ಪುತ್ರ ಆದ್ಯವೀರ್ ಜೊತೆ ಮೈಸೂರು ಅರಮನೆಗೆ ಯದುವೀರ್ ದಂಪತಿ ಆಗಮಿಸಿದ್ದು, ತ್ರಿಷಿಕಾ ಹಾಗೂ ಯದುವೀರ್ ಅವರಿಗೆ ಆರತಿ ಬೆಳಗಿ ಸ್ವಾಗತ ಮಾಡಲಾಗಿದೆ.

ಕಳೆದ ವಾರವಷ್ಟೆ ಬೆಂಗಳೂರು ಅರಮನೆಯಲ್ಲಿ ಯದುವೀರ್ ಪುತ್ರನಿಗೆ ನಾಮಕರಣ ಕಾರ್ಯಕ್ರಮ ನೆರವೇರಿತ್ತು. ಆದ್ಯವೀರ್ ನರಸಿಂಹರಾಜ ಒಡೆಯರ್ ಎಂದು ಮಗುವಿಗೆ ನಾಮಕರಣ ಮಾಡಲಾಗಿತ್ತು. ನಂತರ ಮೈಸೂರು ಅರಮನೆಗೆ ಬಂದ ದಂಪತಿಗೆ ಅರಮನೆಯಲ್ಲಿದ್ದ ಮುತ್ತೈದೆಯರು ಆರತಿ ಬೆಳಗಿ ಸ್ವಾಗತ ಕೋರಿದ್ದಾರೆ.

ಯದುವೀರ್ ಕುಟುಂಬ ನಾಮಕರಣ ಕಾರ್ಯಕ್ರಮ ಮುಗಿಸಿ ಮೈಸೂರು ಅರಮನೆಗೆ ಬಂದಿದ್ದು, ಇದೀಗ ಮೈಸೂರು ಅರಮನೆಯಲ್ಲಿ ಸಂಭ್ರಮದ ವಾತಾವರಣ ಮನೆ ಮಾಡಿದೆ. ಆದ್ಯವೀರ್ ನನ್ನು ನೋಡಿ ಅರಮನೆ ಸಿಬ್ಬಂದಿಗಳು ಸಂತಸ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಮೈಸೂರು ಯದುವಂಶದ ಯುವರಾಜನಿಗೆ ನಾಮಕರಣ

ಆದ್ಯವೀರ್ ತುಂಬಾ ಚೆನ್ನಾಗಿದ್ದಾನೆ. ನಾಮಕರಣ ಮುಗಿಸಿ ಮೈಸೂರಿಗೆ ಆಗಮಿಸಿದ್ದೇವೆ. ಬೆಂಗಳೂರಿನಲ್ಲಿ ನಾಮಕರಣ ಮಾಡಿದ್ದು ನಮ್ಮ ಅನುಕೂಲಕ್ಕಾಗಿ ಅಷ್ಟೇ. ಅದನ್ನು ಹೊರತುಪಡಿಸಿ ಬೇರೆ ಯಾವುದೇ ಉದ್ದೇಶವಿಲ್ಲ ಎಂದು ಮೈಸೂರಿನಲ್ಲಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದ್ದಾರೆ.

ಶೀಘ್ರದಲ್ಲೇ ಚಾಮುಂಡಿ ಬೆಟ್ಟಕ್ಕೆ ಹೋಗಲಿದ್ದೇವೆ. ಆದ್ಯಾ ಎಂದರೆ ದುರ್ಗಿ, ಚಾಮುಂಡಿ ಎಂದರ್ಥ. ಮಗುವಿನ ಒಳಿತಿಗಾಗಿ ಆ ಹೆಸರು ಇಡಲಾಗಿದೆ. ಮಗು ಆದ್ಯವೀರ್ ಚೆನ್ನಾಗಿದ್ದಾನೆ. ಇಂದು ಬೆಂಗಳೂರಿನಿಂದ ಮೈಸೂರಿಗೆ ಕರೆತಂದಿದ್ದೇವೆ. ಮುಂದಿನ ಕಾರ್ಯಕ್ರಮಗಳೆಲ್ಲ ಅಮ್ಮನ ಸೂಚನೆಯಂತೆ ನಡೆಯಲಿದೆ ಎಂದು ಯದುವೀರ್ ತಿಳಿಸಿದ್ದಾರೆ.

ಯದುವೀರ್ ದಂಪತಿ ಶೀಘ್ರದಲ್ಲೇ ಪುತ್ರನ ಜೊತೆ ದೇವಾಲಯಗಳಿಗೆ ಪ್ರವಾಸ ಮಾಡಲಿದ್ದಾರೆ.

Comments

Leave a Reply

Your email address will not be published. Required fields are marked *