ಗ್ರಾ.ಪಂ ಸದಸ್ಯನಿಂದ ದೋಖಾ- ಮದ್ವೆಯಾಗುವುದಾಗಿ ಹೇಳಿ ಅತ್ಯಾಚಾರ ಮಾಡಿ ಸ್ವಂತ ಮಗು ಮಾರಿದನೇ?

ಶಿವಮೊಗ್ಗ: ಗ್ರಾಮ ಪಂಚಾಯತಿ ಸದಸ್ಯನೊಬ್ಬ ತನ್ನ ಸಂಬಂಧಿ ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿ ಮೋಸ ಮಾಡಿದ್ದಾನೆ. ಅಲ್ಲದೆ, ತನ್ನದೇ ಮಗುವನ್ನು ಮಾರಾಟ ಮಾಡಿದ್ದಾನೆ ಎಂಬ ಆರೋಪಕ್ಕೂ ತುತ್ತಾಗಿದ್ದಾನೆ.

ಈ ಘಟನೆ ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ರಿಪ್ಪನ್ ಪೇಟೆಯಲ್ಲಿ ನಡೆದಿದೆ. ರಿಪ್ಪನ್‍ಪೇಟೆ ಗ್ರಾ.ಪಂ ಗೆ ಮಳವಳ್ಳಿ ಕ್ಷೇತ್ರದಿಂದ ಆಯ್ಕೆಯಾಗಿರುವ ಸದಸ್ಯ ಕೆ.ಚಂದ್ರಶೇಖರ್ ಈ ರೀತಿ ವಂಚನೆ ಮಾಡಿರುವ ವ್ಯಕ್ತಿ. ಮನೆಯಲ್ಲಿ ಯಾರೂ ಇಲ್ಲದಾಗ ಸಂಬಂಧಿ ಯುವತಿ ಮೇಲೆ ಬಲಾತ್ಕಾರದಿಂದ ಅತ್ಯಾಚಾರ ಮಾಡಿದ್ದ ಚಂದ್ರಶೇಖರ್ ತನ್ನ ಚಾಳಿಯನ್ನು ಮುಂದುವರೆಸಿದ್ದ.

ಯುವತಿ ಗರ್ಭಿಣಿಯಾದಾಗ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ ಹೆರಿಗೆ ಮಾಡಿಸಿದ್ದ. ಆದ್ರೆ ಅವಧಿಗೆ ಮುಂಚೆ ಮಗು ಜನಿಸಿದ್ದರಿಂದ ಚಿಕಿತ್ಸೆಗೆ ಎಂದು ನನ್ನ ಬಳಿ ಸಹಿ ಹಾಕಿಸಿಕೊಂಡು ಮಗುವನ್ನು ಮಾರಾಟ ಮಾಡಿದ್ದಾನೆ ಎಂದು ನೊಂದ ಯುವತಿ ಪೊಲೀಸರಿಗೆ ದೂರು ನೀಡಿದ್ದಾರೆ.

ಹೆರಿಗೆ ನಂತರವೂ ಮದುವೆಗೆ ಒಪ್ಪದಿದ್ದಾಗ ಗ್ರಾಮದ ಹಿರಿಕರು ಪಂಚಾಯತಿ ಮಾಡಿ, ಈತನನ್ನು ಒಪ್ಪಿಸಲು ಪ್ರಯತ್ನಿಸಿದ್ದಾರೆ. ಆದರೆ, ಆತ ಮತ್ತು ಆತನ ತಂದೆ ಸೇರಿ ಯುವತಿಯನ್ನು ಕೊಲ್ಲಲು ಯತ್ನಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ರಾಜಕೀಯವಾಗಿ ಹಾಗೂ ಆರ್ಥಿಕವಾಗಿ ಪ್ರಬಲನಾಗಿರುವ ಚಂದ್ರಶೇಖರ್ ವಿರುದ್ಧ ಸಂತ್ರಸ್ತೆ ಯುವತಿ ಹಾಗೂ ಆಕೆಯ ಸಂಬಂಧಿಗಳು, ಗ್ರಾಮಸ್ಥರು ಸೇರಿ ಶಿವಮೊಗ್ಗ ಜಿಲ್ಲಾ ರಕ್ಷಣಾಧಿಕಾರಿ ಅಭಿನವ್ ಖರೆ ಅವರಿಗೆ ಈ ಬಗ್ಗೆ ದೂರು ಸಲ್ಲಿಸಿದ್ದಾರೆ. ಶಿವಮೊಗ್ಗ ಮಹಿಳಾ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

ಚಂದ್ರಶೇಖರ್ ಮಗುವನ್ನು ಏನು ಮಾಡಿದ? ಈತ ಮದುವೆ ಆಗುವುದಾಗಿ ನಂಬಿಸಿ ಅತ್ಯಾಚಾರವೆಸಗಿದ್ದು ನಿಜವೇ? ಮೋಸ ಹೋದ ಯುವತಿಗೆ ನ್ಯಾಯ ಸಿಗುತ್ತದೆಯೇ? ಈ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಸಿಗಲು ಪೊಲೀಸರ ತನಿಖೆ ನಡೆಯಬೇಕಿದೆ.

Comments

Leave a Reply

Your email address will not be published. Required fields are marked *