ಸರ್ಕಾರ ಬಿದ್ದೋಗುತ್ತೋ ಅನ್ನೋ ಭೀತಿಯಿಂದ ಮುಖಂಡರ ಫೋನ್ ಕದ್ದಾಲಿಕೆ: ಬಿಎಸ್‍ವೈ

ಬೆಂಗಳೂರು: ಸಮ್ಮಿಶ್ರ ಸರ್ಕಾರ ಎಲ್ಲಿ ಬಿದ್ದು ಹೋಗುತ್ತದೆಯೋ ಎನ್ನುವ ಭೀತಿಯಿಂದ ರಾಜ್ಯಸರ್ಕಾರ ನನ್ನ ಹಾಗೂ ಸಿದ್ದರಾಮಯ್ಯನವರ ಫೋನ್‍ಗಳನ್ನು ಕದ್ದಾಲಿಕೆ ಮಾಡುತ್ತಿವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪನವರು  ಗಂಭೀರವಾಗಿ ಆರೋಪಿಸಿದ್ದಾರೆ.

ಬಿಜೆಪಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಕಾಂಗ್ರೆಸ್ಸಿನ ಮಾಜಿ ಸಚಿವ ಬಾಬುರಾವ್ ಚಿಂಚನೂರು ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಚಿಂಚನಸೂರು ಸೇರ್ಪಡೆಯಿಂದ ಬಿಜೆಪಿ ಆನೆ ಬಲ ಬಂದಂತಾಗಿದೆ. ಇವರಷ್ಟೇ ಅಲ್ಲದೇ ಕಾಂಗ್ರೆಸ್ಸಿನ ಹಿರಿಯ ನಾಯಕರು ನನ್ನ ಸಂಪರ್ಕದಲ್ಲಿದ್ದಾರೆ. ಲೋಕಸಭಾ ಚುನಾವಣಾ ವೇಳೆಗೆ ಯಾವ ಯಾವ ನಾಯಕರು ಸೇರುತ್ತಾರೆ ಎಂಬುದು ಎಲ್ಲರಿಗೂ ಗೊತ್ತಾಗುತ್ತದೆ ಎಂದು ತಿಳಿಸಿದರು.

ಇದರಿಂದಾಗಿ ಎಲ್ಲಿ ನಮ್ಮ ಸಮ್ಮಿಶ್ರ ಸರ್ಕಾರ ಬಿದ್ದು ಹೋಗುತ್ತದೆಯೋ ಎಂಬ ಭಯದಿಂದ, ನನ್ನದೂ ಸೇರಿದಂತೆ ಸಿದ್ದರಾಮಯ್ಯ ಹಾಗೂ ಹಲವು ಪ್ರತಿಪಕ್ಷಗಳ ಮುಖಂಡರ ಫೋನ್ ಕರೆಗಳನ್ನು ರಾಜ್ಯ ಸರ್ಕಾರ ಕದ್ದಾಲಿಕೆ ಮಾಡುತ್ತಿದೆ. ಈ ಕುರಿತು ಉನ್ನತ ಮಟ್ಟದಲ್ಲಿ ತನಿಖೆಯಾಗಬೇಕು. ಹೆಚ್ಚಿನ ರೀತಿಯಲ್ಲಿ ಕದ್ದಾಲಿಕೆ ನಡೆಸುತ್ತಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ ಎಂದು ಹೇಳಿದರು.

ಏನಿದು ಫೋನ್ ಟ್ಯಾಪಿಂಗ್?
ಬಿ.ಎಸ್.ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ಫೋನ್ ಟ್ಯಾಪಿಂಗ್‍ಗೆ ವಿರೋಧದ ನಡುವೆಯೂ ಕರ್ನಾಟಕ ಸೇರಿದಂತೆ ಆರು ರಾಜ್ಯಗಳಿಗೆ ಅಂದಿನ ಕಾಂಗ್ರೆಸ್ ಸರ್ಕಾರ ಅನುಮತಿ ನೀಡಿತ್ತು. ಹೀಗಾಗಿ ಅತ್ಯಾಧುನಿಕ ತಂತ್ರಜ್ಞಾನದ ದೂರವಾಣಿ ಕರೆ ಹಾಗೂ ಸಂಭಾಷಣೆಗಳ ಸಂಪೂರ್ಣ ಮಾಹಿತಿ ನೀಡುವ ಎರಡು ಸಾಧನಗಳನ್ನು ಖರೀದಿ ಮಾಡಲಾಗಿತ್ತು. ಅವುಗಳಲ್ಲಿ ಒಂದನ್ನು ರಾಜ್ಯ ಗುಪ್ತಚರ ಇಲಾಖೆಯಲ್ಲಿ ಇರಿಸಿದ್ದಾರೆ. ಇಂತಿಷ್ಟು ಮೀಟರ್ ಪರಿಧಿಯಲ್ಲಿ ಈ ಸಾಧನವನ್ನು ಅಳವಡಿಸಿ ಅದರಲ್ಲಿ ನಿಗಧಿತ ಫೋನ್ ನಂಬರ್ ಗಳನ್ನು ನಮೂದಿಸಿದರೆ, ಆ ನಂಬರಿಗೆ ಬರುವ  ಒಳ ಮತ್ತು ಹೊರ ಕರೆಗಳ ಸಂಭಾಷಣೆಗಳನ್ನು ಯಥಾವತ್ತಾಗಿ ಕೇಳಬಹುದಾಗಿದೆ. ಅಲ್ಲದೇ ಅವುಗಳನ್ನು ಧ್ವನಿಮುದ್ರಿಕೆ ಕೂಡ ಮಾಡಬಹುದಾಗಿದೆ.

ಮಾಹಿತಿಗಳ ಪ್ರಕಾರ ಕಾಂಗ್ರೆಸ್‍ನ 15 ಶಾಸಕರು, ಒಬ್ಬ ಸಚಿವರು ಸೇರಿದಂತೆ ಇಬ್ಬರು ಜೆಡಿಎಸ್ ಹಾಗೂ ಮೂವರು ಮಾಜಿ ಶಾಸಕರ ಫೋನ್ ಕದ್ದಾಲಿಕೆ ನಡೆದಿದೆ. ಸಂಭಾಷಣೆಯಲ್ಲಿ ಸಂಪುಟ ವಿಸ್ತರಣೆ ಗಣೇಶ ಹಬ್ಬಕ್ಕೆ ಮೊದಲು ಆಗದಿದ್ದರೆ, ಲೋಕಸಭಾ ಚುನಾವಣೆಗೂ ಮುನ್ನವೇ ಸರ್ಕಾರಕ್ಕೆ ಆಪತ್ತು ಬರುವ ಸೂಚನೆ ಇದೆ. ಸಾಧ್ಯವಾದರೆ ಬದಲಿ ಸರ್ಕಾರವನ್ನು ರಚನೆ ಮಾಡಿ, ಇಲ್ಲವೇ ಹೊಸದಾಗಿ ಚುನಾವಣೆ ಎದುರಿಸುವ ಕುರಿತ ಮಾಹಿತಿ ದಾಖಲಾಗಿದೆ ಎನ್ನಲಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *