ಒಲಿಂಪಿಕ್ ಕ್ರೀಡಾಕೂಟದಲ್ಲಿ ಕುಸ್ತಿ ಪಟು ಸಾವು – ವಿಮೆ ಇಲ್ಲವೆಂದು ಸರ್ಕಾರದಿಂದ ದೋಖಾ

ಧಾರವಾಡ: ರಾಜ್ಯ ಒಲಿಂಪಿಕ್ ಕ್ರೀಡಾಕೂಟದ ವೇಳೆ ಕುಸ್ತಿ ಆಡುವಾಗ ಗಾಯಗೊಂಡು ಸಾವನ್ನಪ್ಪಿದ ಕುಸ್ತಿ ಪಟು ಸಂತೋಷ ಸಾವಿಗೆ ಯಾವುದೇ ವಿಮೆ ಪಾವತಿ ಆಗಲ್ಲ ಎಂದು ಜಿಲ್ಲಾಡಳಿತ ಹೇಳುತ್ತಿದೆ. ಮೊದಲು ವಿಮೆ ಮಾಡಿಸಿರುವುದಾಗಿ ಹೇಳಿದ್ದ ಜಿಲ್ಲಾಡಳಿತ ಈಗ ಮಾತು ಬದಲಿಸುತ್ತಿದೆ. ಇದರಿಂದ ಕುಸ್ತಿ ಪಟು ಕುಟುಂಬದವರು ಜಿಲ್ಲಾಡಳಿತದ ಮೇಲೆ ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಪರಿಹಾರಕ್ಕಾಗಿ ಪರದಾಡುತ್ತಿದ್ದಾರೆ.

ಫೆಬ್ರವರಿ 3 ರಿಂದ 10 ರವರೆಗೆ ಧಾರವಾಡದಲ್ಲಿ ರಾಜ್ಯ ಒಲಿಂಪಿಕ್ ಕ್ರೀಡಾಕೂಟ ಆಯೋಜಿಸಲಾಗಿತ್ತು. ಫೆಬ್ರವರಿ 8 ರಂದು ಕುಸ್ತಿ ಆಡುವ ವೇಳೆ ಧಾರವಾಡದ ಚಿಕ್ಕಮಲ್ಲಿಗವಾಡ ಗ್ರಾಮದ ಕುಸ್ತಿ ಪಟು ಸಂತೋಷ್ ಕಾಲು ಮುರಿತದಿಂದ ಆಸ್ಪತ್ರೆ ಸೇರಿದ್ದರು. ಅದೇ ವಾರ ಸಂತೋಷ್ ಕಾಲಿನ ಶಸ್ತ್ರಚಿಕಿತ್ಸೆ ಕೂಡಾ ಮಾಡಲಾಗಿತ್ತು. ಆದ್ರೆ ಮಾರನೇ ದಿನ ಸಂತೋಷ ಸಾವನ್ನಪ್ಪಿದರು. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ರಾಜ್ಯ ಒಲಿಂಪಿಕ್ ಕ್ರೀಡಾಕೂಟದ ವೇಳೆ ಹೇಳಿದಂತೆ 10 ಲಕ್ಷ ರೂ. ಹಣವನ್ನ ವಿಮೆ ಪರಿಹಾರವಾಗಿ ನೀಡಬೇಕಿತ್ತು. ಆದರೆ ಜಿಲ್ಲಾಡಳಿತ ತನ್ನ ಮಾತನ್ನ ಬದಲಿಸಿದ್ದು, ಕ್ರೀಡೆ ವೇಳೆ ಕಾಲು ತುಳಿತಕ್ಕೆ ಅಥವಾ ಅಗ್ನಿ ದುರಂತದಲ್ಲಿ ಸಾವಿಗೀಡಾದ್ರೆ ಮಾತ್ರ ಅದಕ್ಕೆ ವಿಮೆ ಪರಿಹಾರ ಬರುತ್ತೆ. ಆದರೆ ಕ್ರೀಡೆ ವೇಳೆ ಸಾವನ್ನಪ್ಪಿದರೆ ಅದಕ್ಕೆ ವಿಮೆ ಹಣ ಸಿಗಲ್ಲ ಅಂತಿದ್ದಾರೆ.

ಇದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಸಂಸದ ಪ್ರಹ್ಲಾದ್ ಜೋಶಿ, ವೈದ್ಯರ ನಿರ್ಲಕ್ಷಕ್ಕೆ ಸಂತೋಷ್ ಸಾವನ್ನಪ್ಪಿದ್ದು, ಇದಕ್ಕೆ ನೈತಿಕವಾಗಿ ಜಿಲ್ಲಾಡಳಿತ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ ಅವರೇ ಕಾರಣ ಎಂದಿದ್ದಾರೆ. ಸಂತೋಷ್ ಕುಟುಂಬದವರನ್ನ ಭೇಟಿ ಮಾಡಿ ಮಾತನಾಡಿದ ಜೋಶಿ, ಸಾವನ್ನಪ್ಪಿದ ಸಂತೋಷ್ ಕುಟುಂಬದವರಿಗೆ ಸರ್ಕಾರ, ಸರ್ಕಾರಿ ನೌಕರಿ ಹಾಗೂ ಹೆಚ್ಚಿನ ಪರಿಹಾರ ನೀಡಬೇಕೆಂದು ಆಗ್ರಹಿಸಿದ್ದಾರೆ.

ಕುಸ್ತಿ ಪಟು ಸಂತೋಷ್ ಕುಟುಂಬದವರು ಕೂಡಾ ಹೆಚ್ಚಿನ ಪರಿಹಾರ ನೀಡಲು ಆಗ್ರಹಿಸಿದ್ದು, ಸಂತೋಷ ಸಾವಿನ ಹಿನ್ನೆಲೆಯಲ್ಲಿ ಕಿಮ್ಸ್ ವೈದ್ಯರ ಮೇಲೆ ಧಾರವಾಡ ಉಪನಗರದಲ್ಲಿ ದೂರು ಕೂಡ ದಾಖಲಿಸಿದ್ದಾರೆ.

Comments

Leave a Reply

Your email address will not be published. Required fields are marked *