ಡಿಸಿಎಂ ಬೇಡ ಎಂಬ ಕೂಗಿಗೆ ಗೋವಿಂದ ಕಾರಜೋಳ ಕಿಡಿ

ಬೆಂಗಳೂರು: ಡಿಸಿಎಂ ಬೇಡ ಎಂಬ ಸಹಿ ಸಂಗ್ರಹಕ್ಕೆ ಪರ – ವಿರೋಧ ಚರ್ಚೆಯಾಗುತ್ತಿದೆ. ಡಿಸಿಎಂ ಬೇಡ ಎಂಬ ಕೂಗಿಗೆ ಡಿಸಿಎಂ ಗೋವಿಂದ ಕಾರಜೋಳ ಕೆಂಡಾಮಂಡಲವಾಗಿದ್ದಾರೆ. ಶಾಸಕ ರೇಣುಕಾಚಾರ್ಯ ಸಹಿತ ಡಿಸಿಎಂ ಹುದ್ದೆ ವಿರೋಧಿಗಳಿಗೆ ನಯವಾಗಿಯೇ ಟಾಂಗ್ ಕೊಟ್ಟಿದ್ದಾರೆ.

ವಿಧಾನಸೌಧದಲ್ಲಿ ಮಾತನಾಡಿದ ಡಿಸಿಎಂ ಗೋವಿಂದ ಕಾರಜೋಳ, ಡಿಸಿಎಂ ಹುದ್ದೆ ರದ್ದು ಮಾಡುವ ಬಗ್ಗೆ ರಸ್ತೆಯಲ್ಲಿ ಚರ್ಚೆ ಆಗುತ್ತಿದೆ ಅಷ್ಟೇ. ಪಕ್ಷದ ವೇದಿಕೆಯಲ್ಲಿ ಈ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ. ಪಕ್ಷದ ವೇದಿಕೆಯಲ್ಲಿ ಇಂಥ ವಿಚಾರಗಳು ಚರ್ಚೆ ಆದರೆ ಅದಕ್ಕೊಂದು ಗೌರವ ಅಂತಾ ಕಿಡಿಕಾರಿದರು. ಇದನ್ನೂ ಓದಿ: ಒಂದು ಎಂಎಲ್‍ಸಿ ಸ್ಥಾನಕ್ಕೆ ಇಬ್ಬರ ಮಧ್ಯೆ ಪೈಪೋಟಿ 

ಯಾರೋ ಎಲ್ಲೋ ಮಾತನಾಡಿದರೆ ಅದಕ್ಕೆ ವಿಶೇಷ ಮಾನ್ಯತೆ ನೀಡಬೇಕಾಗಿಲ್ಲ. ಉಪಮುಖ್ಯಮಂತ್ರಿ ಹುದ್ದೆ ರದ್ದು ಮಾಡುವುದಾಗಲಿ ಅಥವಾ ಸಂಖ್ಯೆ ಹೆಚ್ಚಿಸುವುದಾಗಲಿ ಪಕ್ಷದ ವೇದಿಕೆಯಲ್ಲಿ ಯಾವುದೂ ಚರ್ಚೆಯಾಗಿಲ್ಲ ಎಂದು ಟಾಂಗ್ ಕೊಟ್ಟರು.

ಪಕ್ಷ ನೀಡಿದ ಯಾವುದೇ ಸೂಚನೆ ಪಾಲಿಸುತ್ತೇನೆ ಎಂದು ಕಾರಜೋಳ ಮುನ್ಸೂಚನೆ ನೀಡಿದ್ರು. ನಾನಂತೂ ಪಕ್ಷದ ಶಿಸ್ತಿನ ಸಿಪಾಯಿ, ಪಕ್ಷ ಸೂಚಿಸಿದ ಯಾವುದೇ ನಿರ್ದೇಶನ ಪಾಲಿಸುವುದು ನನ್ನ ಕರ್ತವ್ಯ. ಸಿಎಂ ಯಡಿಯೂರಪ್ಪ, ಪಕ್ಷಾಧ್ಯಕ್ಷರು, ಬಿಎಲ್ ಸಂತೋಷ್, ಪ್ರಧಾನಿ, ಕೇಂದ್ರದ ಪ್ರಮುಖರು ಸೇರಿ ನನ್ನ ಉಪಮುಖ್ಯಮಂತ್ರಿ ಮಾಡಿದ್ದಾರೆ. ನಾನು ಎಂದೂ ಅಧಿಕಾರಕ್ಕೆ ಜೋತು ಬೀಳುವವನಲ್ಲ ಎಂದು ಡಿಸಿಎಂ ಹುದ್ದೆ ವಿರೋಧಿಸುವ ಪಕ್ಷದೊಳಗಿನ ಬಣಕ್ಕೆ ಟಾಂಗ್ ಕೊಟ್ಟರು.

Comments

Leave a Reply

Your email address will not be published. Required fields are marked *