ಟಿಪ್ಪು ಜಯಂತಿ: ಸಚಿವ ಹೆಗಡೆ ಪತ್ರವನ್ನು ಗಂಭೀರವಾಗಿ ಪರಿಗಣಿಸಿದ ಸರ್ಕಾರ

ಕಾರವಾರ: ಟಿಪ್ಪು ಜಯಂತಿ ಆಹ್ವಾನ ಪತ್ರಿಕೆಯಲ್ಲಿ ಇದೇ ಮೊದಲ ಬಾರಿಗೆ ಕೇಂದ್ರ ಕೌಶಲ್ಯಾಭಿವೃದ್ಧಿ ರಾಜ್ಯ ಸಚಿವ ಅನಂತಕುಮಾರ್ ಹೆಗಡೆ ಹೆಸರನ್ನು ಕೈ ಬಿಡಲಾಗಿದೆ.

ಶಿಷ್ಟಾಚಾರದ ಪ್ರಕಾರ ರಾಜ್ಯ ಸರ್ಕಾರದ ಕಾರ್ಯಕ್ರಮಗಳಲ್ಲಿ ಕೇಂದ್ರ ಸಚಿವರ ಹೆಸರನ್ನು ಹಾಕಬೇಕು. ಹೀಗಾಗಿ ಈ ಹಿಂದಿನ ಟಿಪ್ಪು ಜಯಂತಿ ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ಜಿಲ್ಲಾಡಳಿತ ಅನಂತ್ ಕುಮಾರ್ ಹೆಗಡೆ ಹೆಸರನ್ನು ಪ್ರಕಟಿಸುತಿತ್ತು. ಅನಂತಕುಮಾರ್ ಹೆಗಡೆ ರಾಜ್ಯ ಸರ್ಕಾರಕ್ಕೆ ತನ್ನ ಹೆಸರನ್ನು ಹಾಕದಂತೆ ಪತ್ರ ಬರೆದ ಹಿನ್ನೆಲೆಯಲ್ಲಿ ಸರ್ಕಾರದ ಸೂಚನೆಯಂತೆ ಉತ್ತರ ಕನ್ನಡ ಜಿಲ್ಲೆಯ ಟಿಪ್ಪು ಜಯಂತಿ ಆಹ್ವಾನ ಪತ್ರಿಕೆಯಲ್ಲಿ ಇದೇ ಮೊದಲ ಬಾರಿ ಸಚಿವರ ಹೆಸರನ್ನು ಕೈಬಿಟ್ಟಿದೆ.

ಇದೇ ತಿಂಗಳ 2ರಂದು ಸರ್ಕಾರಕ್ಕೆ ತಮ್ಮ ವಿಶೇಷ ಕರ್ತವ್ಯ ಅಧಿಕಾರಿಯಿಂದ ಪತ್ರ ಕಳುಹಿಸಿದ್ದ ಅನಂತಕುಮಾರ್ ಹೆಗಡೆ ಶಿಷ್ಟಾಚಾರದಲ್ಲಿ ತಮ್ಮ ಹೆಸರು ಕೈಬಿಡುವಂತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಕಳುಹಿಸಿದರಲ್ಲದೇ ಇದರ ಪ್ರತಿಯನ್ನು ಬೆಳಗಾವಿ ಹಾಗೂ ಉತ್ತರ ಕನ್ನಡ ಜಿಲ್ಲಾಧಿಕಾರಿಗಳಿಗೆ ರವಾನಿಸಿದ್ದರು.

ಪತ್ರ ಕಳುಹಿಸಿದ ಕಾರಣ ಶಿಷ್ಟಾಚಾರದಲ್ಲಿ ಹೆಸರು ಕೈ ಬಿಡುವಂತೆ ಸರ್ಕಾರದಿಂದ ಉ.ಕ ಜಿಲ್ಲಾಧಿಕಾರಿ ಎಸ್. ಎಸ್ ನಕುಲ್ ಅವರಿಗೆ ಆದೇಶ ನೀಡಲಾಗಿತ್ತು. ಆದೇಶದಂತೆ ಇದೇ ಮೊದಲ ಬಾರಿಗೆ ಆಹ್ವಾನ ಪತ್ರಿಕೆಯಲ್ಲಿ ಹೆಸರು ಕೈಬಿಡಲಾಗಿದೆ.

ನ.10ರಂದು ಜಿಲ್ಲಾಡಳಿತದಿಂದ ಕಾರವಾರದ ಜಿಲ್ಲಾ ರಂಗಮಂದಿರದಲ್ಲಿ ಜಯಂತಿ ಆಚರಣೆಗೆ ಆಹ್ವಾನ ಪತ್ರಿಕೆ ಮುದ್ರಿಸಿದೆ. ಕಳೆದ ಬಾರಿ ಕೂಡ ಪತ್ರ ಬರೆದರೂ ಶಿಷ್ಟಾಚಾರದ ಪ್ರಕಾರ ಹೆಸರು ಹಾಕಲಾಗಿತ್ತು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *