ಜ.15ರ ಒಳಗಡೆ ಕೋವಿಡ್‌ಗೆ ಬಲಿಯಾದ ವ್ಯಕ್ತಿಯ ಕುಟುಂಬಕ್ಕೆ ಪರಿಹಾರ: ಗೋಪಾಲಯ್ಯ

ಬೆಂಗಳೂರು: ಕೋವಿಡ್‌ನಿಂದ ಮೃತಪಟ್ಟ ವ್ಯಕ್ತಿಯ ಕುಟುಂಬಗಳಿಗೆ ಜನವರಿ 15ರೊಳಗೆ ಸರ್ಕಾರದ ಪರಿಹಾರ ಧನ ಸಂದಾಯವಾಗುವಂತೆ ಕ್ರಮಕೈಗೊಳ್ಳಲು ಅಧಿಕಾರಿಗಳಿಗೆ ಅಬಕಾರಿ ಸಚಿವ ಕೆ.ಗೋಪಾಲಯ್ಯ ಸೂಚಿಸಿದರು.

ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ನಾಗಪುರ ವಾರ್ಡ್ ನಲ್ಲಿರುವ ಶಾಸಕರ ಭವನದಲ್ಲಿ ಹಮ್ಮಿಕೊಂಡಿದ್ದ ಕೋವಿಡ್ – 19ನಿಂದ ಮೃತಪಟ್ಟ 105 ವ್ಯಕ್ತಿಗಳ ಕುಟುಂಬದವರಿಗೆ ಪರಿಹಾರ ವಿತರಿಸಿದ ಅವರು, ಮನೆಯ ಸದಸ್ಯರನ್ನು ಕಳೆದುಕೊಂಡ ಕುಟುಂಬದವರು ಸಾಕಷ್ಟು ನೋವಿನಲ್ಲಿ ಇದ್ದಾರೆ. ಇಂತಹ ಕುಟುಂಬಗಳಿಗೆ ಆತ್ಮಸ್ಥೈರ್ಯ ತುಂಬುವುದು ಮತ್ತು ಪರಿಹಾರ ನೀಡುವುದು ನಮ್ಮ ಕರ್ತವ್ಯವಾಗಿದ್ದು, ಇದನ್ನು ಅಧಿಕಾರಿ ವರ್ಗ ತ್ವರಿತವಾಗಿ ಮಾಡಬೇಕು ಎಂದು ತಿಳಿಸಿದರು.

ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದಲ್ಲಿ ಕೋವಿಡ್‌ನಿಂದ ಮೃತರಾದ ವ್ಯಕ್ತಿಯ ಕುಟುಂಬಗಳ ಆರೋಗ್ಯದ ಬಗ್ಗೆ ಆಶಾ ಕಾರ್ಯಕರ್ತೆಯರ ಮೂಲಕ ಪತ್ತೆ ಹಚ್ಚಿ ಜನವರಿ 15 ರೊಳಗೆ ಎಲ್ಲಾ ಕುಟುಂಬಗಳಿಗೆ ಪರಿಹಾರ ಕೊಡಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದರು.

ಕೊರೊನಾ ಸಂದರ್ಭದಲ್ಲಿ ಅನೇಕರು ನೋವಿನಿಂದ ಕರೆ ಮಾಡಿ ಬೆಡ್ ಕೇಳುತ್ತಿದ್ದರು. ಈ ಸಮಯದಲ್ಲಿ ಕ್ಷೇತ್ರದ ಎಲ್ಲರಿಗೂ ಸ್ಪಂದಿಸಲಾಗಿದೆ. ಹೋಂ ಕ್ವಾರಂಟೈನ್‌ನಲ್ಲಿದ್ದ 7 ಸಾವಿರ ಜನರಿಗೆ ಮೆಡಿಕಲ್ ಕಿಟ್ ವಿತರಿಸಲಾಗಿದೆ. ಉಸ್ತುವಾರಿ ಜಿಲ್ಲೆಯಾದ ಹಾಸನಕ್ಕೆ 4 ಸಾವಿರ ಜನರಿಗೆ ಮೆಡಿಕಲ್ ಕಿಟ್ ಉಚಿತವಾಗಿ ಕಳುಹಿಸಿಕೊಡಲಾಗಿದೆ. ವೈದ್ಯರ ಸಲಹೆ ಮೇರೆಗೆ 350 ಆಕ್ಸಿಜನ್ ಸಿಲಿಂಡರ್ ಗಳನ್ನು ಮತ್ತು 100 ಕಾನ್ಸಟ್ರೇಟರ್‌ಗಳನ್ನು ಖರೀದಿಸಿ ಅಗತ್ಯ ಇರುವವರಿಗೆ ನೀಡಲಾಗಿದೆ ಎಂದರು. ಇದನ್ನೂ ಓದಿ: ಸ್ಪುಟ್ನಿಕ್ ಲಸಿಕೆ ಓಮಿಕ್ರಾನ್‌ಗೆ ಪರಿಣಾಮಕಾರಿ – ರಷ್ಯಾ

ಜನವರಿ 1ರ ನಂತರ ವಾರ್ಡ್ ನಲ್ಲಿ 60ಕ್ಕೂ ಹೆಚ್ಚು ಕಡೆಗಳಲ್ಲಿ ಲಸಿಕಾ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ಲಸಿಕೆ ಪಡೆಯದೆ ಇದ್ದವರು ಕಡ್ಡಾಯವಾಗಿ ಪಡೆಯಬೇಕೆಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ಸ್ಪೆಷಲ್ ಕಮಿಷನರ್ ದೀಪಕ್, ಜಾಯಿಂಟ್ ಕಮಿಷನರ್ ಶಿವಮಣಿ, ಆರೋಗ್ಯಾಧಿಕಾರಿ ಡಾ. ಮಂಜುಳಾ ಇಂಜಿನಿಯರ್ ತಿಮ್ಮರುಸು ಇತರರಿದ್ದರು. ಇದನ್ನೂ ಓದಿ: ತಮಿಳ್ ತಾಯ್ ವಾಳ್ತ್ ಈಗ ತಮಿಳುನಾಡಿನ ಅಧಿಕೃತ ನಾಡಗೀತೆ

Comments

Leave a Reply

Your email address will not be published. Required fields are marked *