ಕುರುಕ್ಷೇತ್ರ ಸಿನಿಮಾ ನಿರೀಕ್ಷೆಯಲ್ಲಿ ಇರುವ ಅಭಿಮಾನಿಗಳಿಗೆ ಗುಡ್ ನ್ಯೂಸ್

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಅದ್ಧೂರಿ ವೆಚ್ಚದಲ್ಲಿ ನಿರ್ಮಾಣವಾಗಿರುವ `ಕುರುಕ್ಷೇತ್ರ’ ಚಿತ್ರ ಆರಂಭದಿಂದಲೂ ಕುತೂಹಲ ಮೂಡಿಸಿದೆ.

ಬಹು ತಾರಾಗಣದಲ್ಲಿ ನಿರ್ಮಾಣವಾಗಿರುವ ‘ಕುರುಕ್ಷೇತ್ರ’ ದರ್ಶನ್ ಅಭಿನಯದ 50 ನೇ ಚಿತ್ರವಾಗಿದೆ. ಹೈದರಾಬಾದ್ ರಾಮೋಜಿ ಫಿಲಂ ಸಿಟಿಯಲ್ಲಿ ವಿಶೇಷವಾದ ಸೆಟ್ ಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಈ ಚಿತ್ರಕ್ಕೆ ಮುನಿರತ್ನ ಅವರ ಬಂಡವಾಳ ಹಾಕಿದ್ದು, ಅವರ ನಿರ್ಮಾಣದಲ್ಲಿ ಚಿತ್ರ ಮೂಡಿಬರುತ್ತಿದೆ.

ಈಗಾಗಲೇ `ಕುರುಕ್ಷೇತ್ರ’ ಚಿತ್ರದ ಆಡಿಯೋ ದುಬಾರಿ ಬೆಲೆಗೆ ಮಾರಾಟವಾಗಿದ್ದು, ಇದೇ ತಿಂಗಳಲ್ಲಿ ಆಡಿಯೋ ಬಿಡುಗಡೆ ಮಾಡುವ ಚಿತ್ರತಂಡ ತಯಾರಿ ನಡೆಸುತ್ತಿದೆ ಎಂದು ತಿಳಿದು ಬಂದಿದೆ. ಅಷ್ಟೇ ಅಲ್ಲದೇ ಏಪ್ರಿಲ್ ಅಂತ್ಯಕ್ಕೆ `ಕುರುಕ್ಷೇತ್ರ’ ಹಾಡುಗಳು ನಿಮ್ಮ ಮುಂದೆ ಬರಬಹುದು.

ವಿ.ಹರಿಕೃಷ್ಣ ಈ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದು, ವಿ.ನಾಗೇಂದ್ರ ಪ್ರಸಾದ್ ಸಾಹಿತ್ಯ ಬರೆದಿದ್ದಾರೆ. ಚಿತ್ರಕ್ಕೆ ತಕ್ಕಂತೆ ಹಾಡುಗಳು ಮತ್ತು ಶ್ಲೋಕ, ಪದ್ಯಗಳನ್ನು ಚಿತ್ರದಲ್ಲಿ ಕಾಣಬಹುದಾಗಿದೆ.

ಈಗಾಗಲೇ ಚಿತ್ರದ ಡಬ್ಬಿಂಗ್ ಕೆಲಸವೂ ಪೂರ್ತಿಯಾಗಿದ್ದು, ಚಿತ್ರದ ಪೋಸ್ಟ್ ಪ್ರೋಡಕ್ಷನ್ ಕೆಲಸಗಳು ನಡೆಯುತ್ತಿರುವುದರಿಂದ ಚಿತ್ರ ತೆರೆಗೆ ಬರಲು ವಿಳಂಬವಾಗುತ್ತಿದೆ. ಲಹರಿ ಕಂಪನಿ ದೊಡ್ಡ ಮೊತ್ತಕ್ಕೆ ಚಿತ್ರ ಆಡಿಯೋ ಹಕ್ಕುಗಳನ್ನು ಖರೀದಿಸಿದ್ದು, ಏಪ್ರಿಲ್ ತಿಂಗಳಾಂತ್ಯಕ್ಕೆ ಆಡಿಯೋ ಬಿಡುಗಡೆಗೆ ಪ್ಲಾನ್ ಮಾಡಲಾಗಿದೆ.

ಅರ್ಜುನ್ ಸರ್ಜಾ (ಕರ್ಣ), ರವಿಚಂದ್ರನ್ (ಶ್ರೀಕೃಷ್ಣ), ಅಂಬರೀಶ್ (ಭೀಷ್ಮ), ಸೋನು ಸೂದ್ (ಅರ್ಜುನ), ನಿಖಿಲ್ ಕುಮಾರ್ (ಅಭಿಮನ್ಯು), ಮೇಘನಾ ರಾಜ್ (ಭಾನುಮತಿ), ಸ್ನೇಹಾ (ದ್ರೌಪದಿ) ಸೇರಿದಂತೆ ಹಲವರು ಅಭಿನಯಿಸುತ್ತಿದ್ದಾರೆ. `ಕುರುಕ್ಷೇತ್ರ’ ಸಿನಿಮಾವನ್ನು ಚಿತ್ರವನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು, ಸಿನಿರಸಿಕರು ಕಾತರರಾಗಿದ್ದಾರೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ, ಈ ವೇಳೆಗಾಗಲೇ `ಕುರುಕ್ಷೇತ್ರ’ ತೆರೆಗೆ ಬರಬೇಕಿತ್ತು.

Comments

Leave a Reply

Your email address will not be published. Required fields are marked *