ಗೀತಾ: ಕನ್ನಡ ಘಮಲಿನ ಲಿರಿಕಲ್ ವೀಡಿಯೋ ಬಿಡುಗಡೆ!

ಬೆಂಗಳೂರು: ಗೋಲ್ಡನ್ ಸ್ಟಾರ್ ಗಣೇಶ್ ಅವರ ಹೋಂ ಬ್ಯಾನರಿನಲ್ಲಿ ನಿರ್ಮಾಣಗೊಂಡ ಚಿತ್ರವೆಂಬುದೂ ಸೇರಿದಂತೆ `ಗೀತಾ’ ಚಿತ್ರ ಸದಾ ಒಂದಲ್ಲ ಒಂದು ಕಾರಣದಿಂದ ಸುದ್ದಿಯಾಗುತ್ತಿದೆ. ಇತ್ತೀಚೆಗಷ್ಟೇ ಈ ಚಿತ್ರಕ್ಕಾಗಿ ಪುನೀತ್ ರಾಜ್ ಕುಮಾರ್ ಹಾಡಿರೋ ಹಾಡೊಂದು ಬಿಡುಗಡೆಯಾಗಿದೆ ಎಂಬ ಸುದ್ದಿ ಹೊರಬಿದ್ದಿತ್ತು. ಇದೀಗ ಪ್ರತೀ ಕನ್ನಡಿಗರೂ ಥ್ರಿಲ್ ಆಗುವಂಥಾ ಕನ್ನಡದ ಘಮಲಿನ ಆ ಲಿರಿಕಲ್ ವೀಡಿಯೋ ಸಾಂಗ್ ಬಿಡುಗಡೆಯಾಗಿದೆ.

ಕನ್ನಡವೇ ಸತ್ಯ ಎಂಬ ಸಾಲಿನಿಂದ ಶುರುವಾಗೋ ಈ ಹಾಡನ್ನು ಖ್ಯಾತ ನಿರ್ದೇಶಕ ಸಂತೋಷ್ ಆನಂದರಾಮ್ ಅವರು ಬರೆದಿದ್ದಾರೆ. ಇದಕ್ಕೆ ಆ ಸಾಲುಗಳ ಆವೇಗಕ್ಕೆ ತಕ್ಕುದಾದಂತೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಧ್ವನಿಯಾಗಿದ್ದಾರೆ. ನೊಬಿನ್ ಪೌಲ್ ಇದಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಈ ಲಿರಿಕಲ್ ವೀಡಿಯೋ ಬಿಡುಗಡೆಯಾಗಿ ಕೆಲವೇ ಕ್ಷಣಗಳಲ್ಲಿ ಹೆಚ್ಚು ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಳ್ಳುತ್ತಿದೆ. ಅದೇ ರೀತಿ ಕನ್ನಡತನದ ಘನತೆ ಮತ್ತು ಕೆಚ್ಚು ತುಂಬಿಕೊಂಡಂತಿರೋ ಈ ಹಾಡಿಗೆ ಒಳ್ಳೆಯ ಕಮೆಂಟುಗಳೂ ಬರುತ್ತಿವೆ. ಇದು ಗಣೇಶ್ ಸೇರಿದಂತೆ ಚಿತ್ರರಂಡ ಖುಷಿಗೊಳ್ಳುವಂತೆ ಮಾಡಿದೆ.

ಈ ಚಿತ್ರವನ್ನು ಸೈಯದ್ ಸಲಾಮ್ ನಿರ್ಮಾಣ ಮಾಡಿದರೆ, ಗಣೇಶ್ ಮಡದಿ ಶಿಲ್ಪಾ ಗಣೇಶ್ ಸಹ ನಿರ್ಮಾಪಕಿಯಾಗಿ ಸಾಥ್ ನೀಡಿದ್ದಾರೆ. ಗಣೇಶ್ ಅವರನ್ನು ಇದುವರೆಗಿನ ಅಷ್ಟೂ ಚಿತ್ರಗಳಿಗಿಂತಲೂ ಬೇರೆಯದ್ದೇ ರೀತಿಯಲ್ಲಿ ಗೀತಾ ಚಿತ್ರ ಕಾಣಿಸಲಿದೆ ಎಂಬ ಮಾತುಗಳು ಆರಂಭದಿಂದಲೂ ಕೇಳಿ ಬರುತ್ತಿದ್ದವು. ಅದರ ಸ್ಪಷ್ಟ ಸೂಚನೆಗಳು ಈ ಲಿರಿಕಲ್ ವೀಡಿಯೋದಲ್ಲಿ ಕಂಡಿವೆ. ಇಲ್ಲಿ ಗಣೇಶ್ ಕನ್ನಡ ಪರ ಹೋರಾಟಗಾರನಾಗಿಯೂ ಕಾಣಿಸಿಕೊಂಡಿದ್ದಾರೆ. ಈ ಕಥೆಯಲ್ಲಿ ಗೋಕಾಕ್ ಚಳುವಳಿಯ ಬಗೆಗಿನ ಚಿತ್ರಣವೂ ಇದೆಯಂತೆ. ಇಂಥಾ ಎಲ್ಲ ಕಾರಣಗಳಿಂದ ಈಗ ಬಿಡುಗಡೆಯಾಗಿರೋ ಲಿರಿಕಲ್ ವೀಡಿಯೋ ಸಾಂಗ್ ಪ್ರೇಕ್ಷಕರನ್ನು ಸೆಳೆದುಕೊಂಡಿದೆ.

Comments

Leave a Reply

Your email address will not be published. Required fields are marked *