ಗೋಕಾಕ್ ಫಾಲ್ಸ್ ಬಳಿ ಸೆಲ್ಫಿ ಕ್ಲಿಕ್ಕಿಸಲು ಹೋಗಿ 140 ಅಡಿ ಕಂದಕಕ್ಕೆ ಬಿದ್ದವ ಪವಾಡ ಸದೃಶ ರೀತಿ ಪಾರು

– ಸ್ನೇಹಿತರಿಗೆ ಲೊಕೇಶನ್ ಶೇರ್ ಮಾಡಿದ್ದ ಯುವಕ

ಬೆಳಗಾವಿ: ಗೋಕಾಕ್ ಜಲಪಾತದ ಬಳಿ ಸೆಲ್ಫಿ ಕ್ಲಿಕ್ಕಿಸಲು ಹೋಗಿ 140 ಅಡಿ ಕಂದಕಕ್ಕೆ ಬಿದ್ದಿದ್ದ ಯುವಕ ಪವಾಡ ಸದೃಶ ರೀತಿ ಪಾರಾಗಿದ್ದು, ಸ್ನೇಹಿತರಿಗೆ ಲೊಕೇಶನ್ ಕಳುಹಿಸಿದ್ದರ ಆಧಾರದ ಮೇಲೆ ರಕ್ಷಿಸಲಾಗಿದೆ.

ಜಿಲ್ಲೆಯ ಗೋಕಾಕ್ ಫಾಲ್ಸ್ ನಲ್ಲಿ ಬಳಿ ಸೆಲ್ಫಿ ಕ್ಲಿಕ್ಕಿಸಲು ಹೋಗಿ ಯುವಕ ಪ್ರದೀಪ್ ಸಾಗರ್ 140 ಅಡಿ ಕಂದಕಕ್ಕೆ ಬಿದ್ದಿದ್ದ. ಯುವಕನನ್ನು ಗೋಕಾಕ್‍ನ ಸಾಮಾಜಿಕ ಕಾರ್ಯಕರ್ತ ಆಯೂಬ್ ಖಾನ್ ರಕ್ಷಿಸಿದ್ದಾರೆ. ಆಯೂಬ್ ಖಾನ್‍ಗೆ ಪ್ರದೀಪ್ ಸಾಗರ್ ಪೋಷಕರು ಅಳುತ್ತಲೇ ಧನ್ಯವಾದ ತಿಳಿಸಿದ್ದಾರೆ. ಇದನ್ನೂ ಓದಿ: ಕಾರು ಬಿಟ್ಟು ಜೆಸಿಬಿಯಲ್ಲಿ ನವ ವಿವಾಹಿತ ದಂಪತಿ ಸವಾರಿ- ವೀಡಿಯೋ ವೈರಲ್

ಕಲಬುರಗಿ ಜಿಲ್ಲೆಯ ಜೇವರ್ಗಿ ಮೂಲದ ಪ್ರದೀಪ್ ಸಾಗರ್ ಬೆಳಗಾವಿಯ ಖಾಸಗಿ ಬ್ಯಾಂಕ್‍ನಲ್ಲಿ ಕೆಲಸ ಮಾಡುತ್ತಿದ್ದ. ನಿನ್ನೆ ರಜೆ ಹಿನ್ನೆಲೆ ಸ್ನೇಹಿತರ ಜೊತೆ ಟ್ರಿಪ್‍ಗೆ ಹೋಗಿದ್ದ. ಈ ವೇಳೆ ಸೆಲ್ಫಿ ಕ್ಲಿಕ್ಕಿಸಲು ಹೋಗಿ 140 ಅಡಿ ಆಳದ ಕಂದಕಕ್ಕೆ ಬಿದ್ದಿದ್ದ. ರಾತ್ರಿ ಇಡೀ ಕಾರ್ಯಾಚರಣೆ ನಡೆಸಿದ್ದ ಗೋಕಾಕ್ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ, ಪ್ರದೀಪ್ ಸಾಗರ್ ಸಿಗದ್ದಕ್ಕೆ ಬರಿಗೈಲಿ ಮರಳಿದ್ದರು. ಕತ್ತಲಾದ ಹಿನ್ನೆಲೆ ಕಾರ್ಯಾಚರಣೆ ಮೊಟಕುಗೊಳಿಸಿ ತೆರಳಿದ್ದರು. ಇದನ್ನೂ ಓದಿ:  ಮೂವರು ಪ್ರಭಾವಿಗಳು ಸೇರಿ 40 ಬಿಜೆಪಿ ಶಾಸಕರು ಶೀಘ್ರವೇ ಕಾಂಗ್ರೆಸ್‍ಗೆ ಬರುತ್ತಾರೆ: ರಾಜು ಕಾಗೆ

ಸ್ನೇಹಿತರು ಹಾಗೂ ರಕ್ಷಣಾ ಕಾರ್ಯಾಚರಣೆ ಸಿಬ್ಬಂದಿ ಪ್ರದೀಪ್ ಸಾಗರ್ ಮೃತಪಟ್ಟಿದ್ದಾನೆ ಎಂದೇ ಭಾವಿಸಿದ್ದರು. ಆದರೆ ಬೆಳಗಿನ ಜಾವ 4 ಗಂಟೆಗೆ ಪ್ರದೀಪ್ ಸಾಗರ್ ಸ್ನೇಹಿತರಿಗೆ ಕರೆ ಮಾಡಿದ್ದ. ಅಲ್ಲದೆ ತನ್ನ ಲೊಕೇಶನ್ ಶೇರ್ ಮಾಡಿದ್ದ. ಬಳಿಕ ಸ್ನೇಹಿತರು ಗೋಕಾಕ್ ಸಾಮಾಜಿಕ ಕಾರ್ಯಕರ್ತ ಆಯೂಬ್ ಖಾನ್‍ಗೆ ಕರೆ ಮಾಡಿದ್ದರು. ಈ ವೇಳೆ ಆಯೂಬ್ ಖಾನ್, ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ 140 ಅಡಿ ಆಳದ ಕಂದಕಕ್ಕೆ ತೆರಳಿ ಪ್ರದೀಪ್ ಸಾಗರ್ ರಕ್ಷಿಸಿದ್ದಾರೆ. ಆಯೂಬ್ ಖಾನ್ ಹಾಗೂ ರಕ್ಷಣಾ ಸಿಬ್ಬಂದಿ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪ್ರದೀಪ್ ಸಾಗರ್ ಸದ್ಯ ಗೋಕಾಕ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

Comments

Leave a Reply

Your email address will not be published. Required fields are marked *