ನನ್ನ ಮಠಕ್ಕೆ 2 ಕೋಟಿ ಅನುದಾನ ಕೊಡಿ, ಇಲ್ಲಾಂದ್ರೆ ಪ್ರೊಟೆಸ್ಟ್ ಮಾಡ್ತೀನಿ- ಸಿಎಂಗೆ ಸ್ವಾಮೀಜಿ ಅವಾಜ್

ಬೆಂಗಳೂರು: ಮಠಕ್ಕೆ 2 ಕೋಟಿ ರೂಪಾಯಿ ಅನುದಾನ ಕೊಡಿ, ಇಲ್ಲಾಂದ್ರೆ ಪ್ರೊಟೆಸ್ಟ್ ಮಾಡ್ತೀನಿ ಅಂತ ಅಖಿಲ ಕರ್ನಾಟಕ ಹಡಪದ ಅಪ್ಪಣ ಮಠದ ಅನ್ನದಾನ ಭಾರತಿ ಸ್ವಾಮಿಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಅವಾಜ್ ಹಾಕಿದ ಘಟನೆ ನಡೆದಿದೆ.

ಬೆಂಗಳೂರಿನ ಶಕ್ತಿ ಭವನದಲ್ಲಿ ನಡೆದ ಬಜೆಟ್ ಪೂರ್ವಭಾವಿ ಸಭೆಗೂ ಮುನ್ನ ಸ್ವಾಮೀಜಿ ಹಾಗೂ ಸಿಎಂ ನಡುವೆ ವಾಗ್ವಾದ ನಡೆಯಿತು. ತಂಗಡಿಗೆಯ ಮಠಕ್ಕೆ ಎರಡು ಕೋಟಿ ರೂ. ಅನುದಾನ ಕೊಡುವಂತೆ ಸ್ವಾಮೀಜಿ ಬೇಡಿಕೆ ಇಟ್ರು. ರೀ ಕೊಡ್ರಿ ಸ್ವಾಮಿ ಎರಡು ಕೋಟಿ, ಇಲ್ಲದಿದ್ದರೆ ಪ್ರತಿಭಟನೆ ಮಾಡ್ತೀನಿ ಅಂತ ಸಿಎಂಗೆ ಎಚ್ಚರಿಕೆ ನೀಡಿದ್ರು.

ಸ್ವಾಮೀಜಿ ಮಾತಿಗೆ ಸಿಟ್ಟಿಗೆದ್ದು ರೇಗಿದ ಸಿಎಂ, ರೀ ಏನ್ರೀ.. ಕೇಳ್ರಿ ಮೊದಲು ಇಲ್ಲಿ, ಸ್ಟ್ರೈಕ್ ಗೀಕ್ ಗೆ ಎಲ್ಲ ಹೆದರಲ್ಲ ನಾವು ಅಂದ್ರು. ಇದಕ್ಕೆ ಪ್ರತಿಯಾಗಿ ಸ್ವಾಮೀಜಿ, ಕಳೆದ ಬಾರಿ ಕೊಡ್ತೀನಿ ಅಂತ ಹೇಳಿ ಕೊಟ್ಟಿಲ್ಲ. ಏನ್ ತಿಳ್ಕೊಂಡಿದ್ದೀರಿ ನೀವು? ಕೊಡಲಿಲ್ಲ ಅಂದ್ರೆ ಪ್ರೊಟೆಸ್ಟ್ ಮಾಡ್ತೀನಿ. ಇಲ್ಲೇ ಈಗಲೇ ಬರೆಯಿರಿ, ಬರೆದು ನನ್ನ ಕೈಯಲ್ಲೇ ಕೊಡ್ರಿ ಅಂತ ಏರು ಧ್ವನಿಯಲ್ಲಿ ಸಿಎಂಗೆ ಕೇಳಿದ್ರು.

ನಂತರ ಮಾತನಾಡಿದ ಸ್ವಾಮೀಜಿ, ಮಠದ ಅಭಿವೃದ್ಧಿಗೆ 2 ಕೋಟಿ ರೂ. ಕೊಡ್ತೀನಿ ಎಂದು ಮಾತು ಕೊಟ್ಟಿದ್ದಾರೆ. ಅವರ ಮೇಲೆ ಭರವಸೆಯೂ ಇದೆ. ಕೊಟ್ಟೇ ಕೊಡ್ತಾರೆ ಅನ್ನೋ ನಂಬಿಕೆ ಇದೆ. ಗಟ್ಟಿಯಾಗೇ ಹೇಳಬೇಕಾದ ಪ್ರಸಂಗ ಬಂತು. ಅದಕ್ಕೆ ಸಿದ್ದರಾಮಯ್ಯ ಅವರು ಒಪ್ಪಿಕೊಂಡಿದ್ದಾರೆ. ಕೊಡ್ತೀನಿ ಎಂದು ಹೇಳಿದ್ದಾರೆ. ಆ ಭರವಸೆ ಮೇಲೆ ಹೋಗ್ತಾ ಇದ್ದೇನೆ ಅಂದ್ರು.

Comments

Leave a Reply

Your email address will not be published. Required fields are marked *