ದಲಿತರಿಗೆ ಬಾವಿ ಮುಟ್ಟಲು, ಹೆಣ ಸುಡಲು ಅವಕಾಶ ಮಾಡಿಕೊಡಿ: ತೊಗಾಡಿಯಾ

ಉಡುಪಿ: ದಲಿತರು ಭಾರತದ ಸ್ವಾಭಿಮಾನಿಗಳು, ಮುಸ್ಲಿಂ ದೊರೆಗಳು ದಾಳಿ ಮಾಡಿದಾಗ ತಲೆಯೆತ್ತಿ ಹೋರಾಡಿ ಸೋತವರು. ಹೊಂದಾಣಿಕೆ ಮಾಡಿಕೊಳ್ಳದೆ ಅವರು ದಲಿತರಾದರು. ಅಂತಹ ದಲಿತರಿಗೆ ಬಾವಿ ಮುಟ್ಟಲು, ಹೆಣ ಸುಡಲು ಅವಕಾಶ ಮಾಡಿಕೊಡಿ ಎಂದು ವಿಶ್ವ ಹಿಂದೂ ಪರಿಷದ್ ಅಂತಾರಾಷ್ಟ್ರೀಯ ಕಾರ್ಯದರ್ಶಿ ಪ್ರವೀಣ್ ಭಾಯ್ ತೊಗಾಡಿಯಾ ಹೇಳಿದ್ದಾರೆ.

ಉಡುಪಿಯ ಧರ್ಮ ಸಂಸದ್‍ನಲ್ಲಿ ಅಸ್ಪೃಶ್ಯತೆ ಬಗ್ಗೆ ಕುರಿತಂತೆ ದಿಕ್ಸೂಚಿ ಭಾಷಣ ಮಾಡಿದ ತೊಗಾಡಿಯಾ, ಅಸ್ಪೃಶ್ಯತೆ ವೇದ ಸಮ್ಮತವಲ್ಲ. ವೇದದಲ್ಲಿ ಅಸ್ಪೃಶ್ಯತೆಗೆ ಅವಕಾಶ ಇಲ್ಲ. ಅದನ್ನು ಆಚರಣೆ ಮಾಡಿದರೆ ಅದು ಅಸ್ಪೃಶ್ಯತೆ ಸನಾತನ ಧರ್ಮಕ್ಕೆ ಮಾಡುವ ಅಪಮಾನ ಎಂದು ಆಕ್ರೋಶದಿಂದ ಹೇಳಿದರು.

ಮುಸ್ಲಿಂ ದೊರೆಗಳ ದಾಳಿಯಲ್ಲಿ ವೀರವೇಶದಿಂದ ಹೋರಾಡಿ ಸೋತವರು ಭಾರತದಲ್ಲಿ ದಲಿತರಾದರು. ಹಿಂದೂ ಧರ್ಮದಲ್ಲಿ ಅವರು ಸ್ವಾಭಿಮಾನಿಗಳಂತೆ ಉಳಿದರು. ಅವರು ಸೋತು ಶರಣಾಗಲಿಲ್ಲ. ಇನ್ನೂ ಉಳಿದವರು ಸೋಲಿಗೆ ಹೆದರಿ ಜಾತಿ ಬದಲಾಯಿಸಿಕೊಂಡರು ಎಂದರು.

ಎಲ್ಲರಲ್ಲೂ ಭಗವಂತ ಇರುವಾಗ ದಲಿತರಲ್ಲಿ ಯಾಕೆ ಇಲ್ಲ? ಧರ್ಮ ಸಂಸದ್ ನಂತರ ದೇಶದಲ್ಲಿ ಅಸ್ಪೃಶ್ಯತೆ ಇಲ್ಲವಾಗಲಿ. ಮಂದಿರಕ್ಕೆ, ದೇವಸ್ಥಾನಕ್ಕೆ ಎಲ್ಲರ ಪ್ರವೇಶಕ್ಕೆ ಅವಕಾಶವಾಗಲಿ. ದೇಶದಲ್ಲಿ ಪಂಕ್ತಿಬೇಧವಿಲ್ಲದೆ ಭೋಜನ ವ್ಯವಸ್ಥೆಯಾಗಬೇಕು ಎಂದು ಒತ್ತಾಯಿಸಿದರು.

ಬಾವಿಯ ನೀರಿಗೆ ಅಸ್ಪೃಶ್ಯತೆ ಬರಬಾರದು, ಸತ್ತು ಸ್ವರ್ಗ ಸೇರಿದ ಮೇಲೆ ಸ್ಮಶಾನದಲ್ಲಿ ಹೆಣ ಸುಡಲು ಜಾತಿ ಪದ್ಧತಿ ಅಡ್ಡಬರಬಾರದು ಎಂದು ಭಾಷಣ ಮಾಡಿ ಸಾವಿರಾರು ಸಂತರಿಗೆ ಕರೆ ನೀಡಿದರು.

ಇದನ್ನು ಓದಿ: ಏನಿದು ಧರ್ಮ ಸಂಸದ್? ಈ ಬಾರಿ ಏನು ಚರ್ಚೆ ಆಗುತ್ತೆ? ಕರ್ನಾಟಕದ ಮೇಲೆ ಪರಿಣಾಮ ಬೀರುತ್ತಾ?

Comments

Leave a Reply

Your email address will not be published. Required fields are marked *

More posts