ನಿನ್ನೆ ಭಾವಿ ಪತಿಯೊಂದಿಗೆ ತೆರಳಿದ್ದ ಯುವತಿ ಇಂದು ಶವವಾಗಿ ಪತ್ತೆ

ಹಾಸನ: ಇಂದು ಮುಂಜಾನೆ ಹಾಸನ ಬೇಲೂರು ಮಾರ್ಗ ಮಧ್ಯೆ ಇರುವ ಕಲ್ಕೆರೆ ಗ್ರಾಮದ ಬಳಿ ರಸ್ತೆ ಪಕ್ಕದಲ್ಲಿ ಯುವತಿಯ ಶವವೊಂದು ಪತ್ತೆಯಾಗಿದ್ದು, ಇದು ಕೊಲೆ ಎಂದು ಅನುಮಾನ ಮೂಡಿದೆ.

ಇಂದು ಬೆಳಿಗ್ಗೆ ರಸ್ತೆ ಪಕ್ಕದಲ್ಲಿ ಪತ್ತೆಯಾಗಿದ್ದ ಯುವತಿ ಶವ ಬೇಲೂರು ತಾಲುಕಿನ ಹಗರೆ ಗ್ರಾಮದ ಶಶಿಕಲಾ(22) ಳದ್ದು ಎಂದು ಗುರುತಿಸಲಾಗಿದೆ. ಕಲ್ಕೆರೆ ಗ್ರಾಮದ ಬಳಿ ರಸ್ತೆ ಪಕ್ಕದಲ್ಲಿ ಶಶಿಕಲಾ ಮೃತದೇಹ ಪತ್ತೆಯಾಗಿದ್ದು, ಯುವತಿಯ ಸಾವಿನ ಬಗ್ಗೆ ಹಲವು ಅನುಮಾನಗಳು ಮೂಡಿದ್ದು, ಕುತ್ತಿಗೆ ಬಿಗಿದು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.

ಯುವತಿ ಹಗರೆ ಗ್ರಾಮದ ಲಕ್ಕಯ್ಯ ಎಂಬವರ ಪುತ್ರಿ ಎಂದು ತಿಳಿದು ಬಂದಿದೆ. ಲಕ್ಕಯ್ಯಗೆ ಇಬ್ಬರು ಪತ್ನಿಯರಿದ್ದು, ಮೃತ ಯುವತಿ ಮೊದಲ ಪತ್ನಿ ಮಗಳು. ಹಾಸನ ನಗರದಲ್ಲಿರುವ ಮಂಜುನಾಥ ಆರ್ಥೋ ಹಾಸ್ಪಿಟಲ್ ನಲ್ಲಿ ಉದ್ಯೋಗಿಯಾಗಿ ಕೆಲಸ ಮಾಡುತ್ತಿದ್ದಳು.

ಒಂದು ವರ್ಷದ ಹಿಂದಷ್ಟೇ ಬೇಲೂರು ತಾಲೂಕಿನ ಪುರ ಗ್ರಾಮದ ಮಹೇಶ್ ನೊಂದಿಗೆ ಶಶಿಕಲಾಗೆ ನಿಶ್ಚಿತಾರ್ಥ ಮಾಡಲಾಗಿತ್ತು. ಮಹೇಶ್ ಟ್ರ್ಯಾಕ್ಟರ್ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದನು. ಗುರುವಾರ ಶಶಿಕಲಾ ತನ್ನ ಭಾವಿ ಪತಿಯೊಂದಿಗೆ ತೆರಳಿದ್ದಳು. ಆದರೆ ಇಂದು ಶವವಾಗಿ ಪತ್ತೆಯಾಗಿದ್ದಾಳೆ.

ಶಶಿಕಲಾಳನ್ನು ಕತ್ತು ಹಿಸುಕಿ ಕೊಂದಿರುವ ಶಂಕೆ ವ್ಯಕ್ತವಾಗಿದೆ. ಸದ್ಯಕ್ಕೆ ಶವವನ್ನು ಮರಣೋತ್ತರ ಪರಿಕ್ಷೆಗೆ ರವಾನಿಸಲಾಗಿದ್ದು, ಈ ಬಗ್ಗೆ ಬೇಲೂರು ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Comments

Leave a Reply

Your email address will not be published. Required fields are marked *