ಹಾವು ಕಚ್ಚಿದ್ದಕ್ಕೆ ಚಿಕಿತ್ಸೆಯಲ್ಲಿರಬೇಕಾದರೆ ಮತ್ತೊಂದು ಹಾವು ಕಚ್ಚಿ ಯುವತಿ ಸಾವು!

ಕೊಲ್ಲಂ: ಹಾವಿನ ದ್ವೇಷ ಹನ್ನೆರಡು ವರ್ಷ ಎಂಬ ಒಂದು ಮಾತಿದೆ. ಈ ಮಾತು ನಿಜಾನೋ ಸುಳ್ಳೋ ಗೊತ್ತಿಲ್ಲ. ಆದರೆ ಕೇರಳದ ಈ ಯುವತಿಯ ಪಾಲಿಗೆ ಮಾತ್ರ ಹಾವೇ ದಾರುಣ ಯಮಪಾಶವಾಗಿದೆ.

ಹೌದು, ಕೇರಳದ ಕೊಲ್ಲಂ ಜಿಲ್ಲೆಯ ಅಂಚಲ್ ಎಂಬಲ್ಲಿ ಹಾವು ಕಡಿದು ಚಿಕಿತ್ಸೆ ಪಡೆಯುತ್ತಿದ್ದ ಯುವತಿಯೊಬ್ಬರು 2ನೇ ಬಾರಿ ಹಾವು ಕಚ್ಚಿ ಸಾವನ್ನಪ್ಪಿದ್ದಾರೆ. ಏರಂ ವೆಳ್ಳಾಶೇರಿಯ ವಿಜಯಸೇನ ಹಾಗೂ ಮಣಿಮೇಘಲ ದಂಪತಿಯ ಪುತ್ರಿ 25 ವರ್ಷ ಉತ್ತರ ಸಾವನ್ನಪ್ಪಿದ್ದಾರೆ. ಮೂರು ತಿಂಗಳ ಹಿಂದೆ ಉತ್ತರಾಗೆ ಪತಿಯ ಮನೆಯಲ್ಲಿ ಹಾವು ಕಚ್ಚಿತ್ತು. ಇದಕ್ಕೆ ಅವರು ಚಿಕಿತ್ಸೆಯನ್ನೂ ಪಡೆಯುತ್ತಿದ್ದರು.

ಅಡೂರು ಪರಕೋಡ್ ಸೂರಜ್ ಭವನ್‍ನ ಸೂರಜ್‍ನನ್ನು ಮದುವೆಯಾಗಿದ್ದ ಉತ್ತರಾಗೆ ಮೂರು ತಿಂಗಳ ಹಿಂದೆ ಹಾವು ಕಚ್ಚಿತ್ತು. ಈ ಹಿನ್ನೆಲೆಯಲ್ಲಿ ಆಕೆ ತನ್ನ ತವರು ಮನೆಗೆ ಬಂದು ಚಿಕಿತ್ಸೆ ಪಡೆಯುತ್ತಿದ್ದರು.

ನಿನ್ನೆ ಬೆಳಗ್ಗೆ ಉತ್ತರ ನಿದ್ದೆಯಿಂದ ಎದ್ದಿರಲಿಲ್ಲ. ಹೀಗಾಗಿ ಪೋಷಕರು ಹೋಗಿ ಆಕೆಯನ್ನು ಎಚ್ಚರಿಸಲು ಪ್ರಯತ್ನಿಸಿದಾಗ ಪ್ರಜ್ಞಾಹೀನ ಸ್ಥಿತಿಯಲ್ಲಿರುವುದು ಗೊತ್ತಾಗಿದೆ. ತಕ್ಷಣ ಅಂಚಲ್‍ನಲ್ಲಿರುವ ಆಸ್ಪತ್ರೆಗೆ ಸೇರಿಸಲು ಯತ್ನಿಸಿದರೂ ಅಷ್ಟರಲ್ಲಾಗಲೇ ಉತ್ತರಾ ಪ್ರಾಣಪಕ್ಷಿ ಹಾರಿ ಹೋಗಿತ್ತು. ಇದೇ ವೇಳೆ ಆಕೆಯ ಕೊಠಡಿಯನ್ನು ಪರಿಶೋಧಿಸಿದಾಗ ಅಲ್ಲಿ ಹಾವು ಕಾಣಿಸಿಕೊಂಡಿದೆ. ಹಾವು ಕಡಿತದಿಂದಲೇ ಸಾವು ಸಂಭವಿಸಿರುವುದು ಖಚಿತವಾಗಿದೆ.

Comments

Leave a Reply

Your email address will not be published. Required fields are marked *