ಪೊಲೀಸರಿಗೆ ರಾಖಿ ಕಟ್ಟಿ ಮದುವೆಗೆ ಬೇಡಿಕೆಯಿಟ್ಟ ಯುವತಿ!

ಲಕ್ನೋ: ರಕ್ಷಾಬಂಧನ ಹಬ್ಬದಂದು ಪೊಲೀಸರಿಗೆ ರಾಖಿ ಕಟ್ಟಿ ಉತ್ತರ ಪ್ರದೇಶದ ಯುವತಿಯೊಬ್ಬಳು ತನ್ನ ಮದುವೆಗೆ ಬೇಡಿಕೆಯಿಟ್ಟು ಸುದ್ದಿಯಾಗಿದ್ದಾಳೆ.

ನರ್ಗೀಸ್ ಶಹಾಜಪುರ್ ನಿವಾಸಿ ರಾಜುನನ್ನು ಪ್ರೀತಿಸುತ್ತಿದ್ದಳು. ರಾಜು ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದನು. ಅಲ್ಲದೇ ಇಬ್ಬರ ಕುಟುಂಬದವರು ಸಂಬಂಧಿಕರಾಗಿದ್ದು, ಇಬ್ಬರು ಒಬ್ಬರನೊಬ್ಬರು ಪ್ರೀತಿಸುತ್ತಿದ್ದರು.

ನಾಲ್ಕು ತಿಂಗಳ ಹಿಂದೆ ಇಬ್ಬರ ಕುಟುಂಬದವರು ಒಪ್ಪಿ ಮದುವೆಯನ್ನು ನಿಶ್ಚಯಿಸಿದ್ದರು. ದೀಪಾವಳಿ ಮೊದಲು ಇಬ್ಬರ ಮದುವೆಯಾಗಬೇಕಿತ್ತು. ಆದರೆ ಮದುವೆ ಮೊದಲು ಇಬ್ಬರು ಓಡಾಡುವುದು ನೋಡಿ ನರ್ಗೀಸ್ ಪೋಷಕರು ಮದುವೆಯನ್ನು ಕ್ಯಾನ್ಸಲ್ ಮಾಡಿದ್ದರು. ಅಲ್ಲದೇ ಆಕೆಯ ಮೇಲೆ ಹಲ್ಲೆ ಮಾಡಲು ಶುರು ಮಾಡಿದ್ದರು. ಶನಿವಾರ ಒತ್ತಾಯಪೂರ್ವಕವಾಗಿ ಬೇರೆ ಯುವಕನೊಂದಿಗೆ ನರ್ಗೀಸ್ ಮದುವೆ ಮಾಡಲು ಮುಂದಾಗಿದ್ದರು.

ಮದುವೆ ನಿಶ್ಚಯ ಆಗುವ ಮೊದಲು ನರ್ಗೀಸ್ ತಂದೆ ರಾಜುವಿಗೆ ನೋಯ್ಡಾದಲ್ಲಿ ಒಂದು ಮನೆಯನ್ನು ಕಟ್ಟಿಸಬೇಕೆಂದು ಷರತ್ತು ಹಾಕಿದ್ದರು. ಈ ಮನೆ ಕಟ್ಟಲು ಒಂದು ವರ್ಷ ಅವಧಿಯನ್ನು ಕೂಡ ನೀಡಿದ್ದರು. ಆದರೆ ರಾಜುಗೆ ಸೈಟ್ ಖರೀದಿಸಿ ಮನೆ ಕಟ್ಟಲು ಹಣವಿರಲಿಲ್ಲ. ಇದ್ದರಿಂದ ನರ್ಗೀಸ್ ತಂದೆ ಬೇಸರಗೊಂಡು ಮದುವೆ ಮುರಿದ್ದರು. ಅಲ್ಲದೇ ತನ್ನ ಮಗಳನ್ನು ಬೇರೆ ಯುವಕನ ಜೊತೆ ಮದುವೆ ಮಾಡಿಸಲು ಮುಂದಾಗಿದ್ದರು.

ಈ ವಿಚಾರ ತಿಳಿಯುತ್ತಿದ್ದಂತೆ ರಾಜುವನ್ನೇ ಮದುವೆಯಾಗಬೇಕೆಂದು ನರ್ಗೀಸ್ ಹಠ ಹಿಡಿದು ರಾತ್ರೋರಾತ್ರಿ ಮನೆಯಿಂದ ಓಡಿ ಹೋಗಿ ಪರಿಚಿತರ ಮನೆಯಲ್ಲಿ ರಾತ್ರಿ ಕಳೆದಿದ್ದಾಳೆ. ನಂತರ ಬೆಳಗ್ಗೆ ರಾಜುವನ್ನು ಕರೆದುಕೊಂಡು ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾಳೆ. ನರ್ಗೀಸ್, ರಾಜು ಜೊತೆ ಸೆಕ್ಟರ್ 49 ಪೊಲೀಸ್ ಠಾಣೆಗೆ ಹೋಗಿ ಕ್ಷೇತ್ರಾಧಿಕಾರಿ ಶ್ವೇತಾಬ್ ಪಾಂಡೆ ಹಾಗೂ ಅಲ್ಲಿದ್ದ ಎಲ್ಲ ಪೊಲೀಸರಿಗೆ ರಾಖಿ ಕಟ್ಟಿದ್ದಾಳೆ. ಪೊಲೀಸರಿಗೆ ರಾಖಿ ಕಟ್ಟಿ ನರ್ಗೀಸ್ ತನ್ನ ಪೋಷಕರು ಇಷ್ಟವಿಲ್ಲದ ಮದುವೆ ಮಾಡಿಸುತ್ತಿದ್ದಾರೆ. ಹೀಗಾಗಿ ನಮಗೆ ರಕ್ಷಣೆ ನೀಡಿ ಎಂದು ಕೇಳಿಕೊಂಡಿದ್ದಾಳೆ.

ನಂತರ ಪೊಲೀಸರು ಇಬ್ಬರ ಕುಟುಂಬದವರನ್ನು ಠಾಣೆಗೆ ಕರೆಸಿ ಬುದ್ಧಿ ಹೇಳಿದ್ದಾರೆ. ಎರಡು ಕುಟುಂಬದವರು ಈ ಮದುವೆಗೆ ಒಪ್ಪಿದ ಬಳಿಕ ರಾಜು ಮತ್ತು ನರ್ಗೀಸ್ ಮನೆಗೆ ತೆರಳಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *