ವಿದೇಶದಿಂದ ವಾಪಸ್ ಬಂದಿದ್ದ ಯುವತಿ- ಬಸ್‍ನಿಂದ ಇಳಿಸಿ ಅಂಬುಲೆನ್ಸ್‌ನಲ್ಲಿ ಆಸ್ಪತ್ರೆಗೆ ಕಳುಹಿಸಿದ ಪ್ರಯಾಣಿಕರು

ಹಾಸನ: ದುಬೈನಿಂದ ಆಗಮಿಸಿದ್ದ ಯುವತಿಯೊಬ್ಬಳು ಬಸ್‍ನಲ್ಲಿ ಸಂಚರಿಸುತ್ತಿರುವುದನ್ನು ನೋಡಿ ಸಾರ್ವಜನಿಕರು ಆತಂಕಗೊಂಡಿದ್ದು, ತಕ್ಷಣ ಆಕೆಯನ್ನು ಬಸ್‍ನಿಂದ ಇಳಿಸಿ ಅಂಬುಲೆನ್ಸ್‌ನಲ್ಲಿ ಆಸ್ಪತ್ರೆಗೆ ಕಳುಹಿಸಿದ ಘಟನೆ ಹಾಸನದ ಅರಕಲಗೂಡಿನಲ್ಲಿ ನಡೆದಿದೆ.

ದುಬೈನಿಂದ ಬೆಂಗಳೂರಿಗೆ ಬಂದು, ಬೆಂಗಳೂರಿನಿಂದ ಕೆಎಸ್‍ಆರ್ ಟಿಸಿ ಬಸ್‍ನಲ್ಲಿ ಅರಕಲಗೂಡು ಮಾರ್ಗವಾಗಿ ಯುವತಿ ಸೋಮವಾರಪೇಟೆಗೆ ಹೋಗುತ್ತಿದ್ದಳು. ಯುವತಿಯ ಕೈ ಮೇಲಿನ ಸೀಲ್ ನೋಡಿದ ಪ್ರಯಾಣಿಕರು ಆತಂಕಕ್ಕೆ ಒಳಗಾಗಿ, ಮನೆಯಲ್ಲೇ ಸ್ವಲ್ಪ ದಿನ ಎಚ್ಚರಿಕೆಯಿಂದ ಇರಬೇಕಾದ ನೀವು ಏಕೆ ಬಸ್‍ನಲ್ಲಿ ಓಡಾಡುತ್ತಿದ್ದೀರಿ ಎಂದು ಆಕ್ರೋಶ ಹೊರಹಾಕಿದ್ದಾರೆ. ಅಲ್ಲದೆ ತಕ್ಷಣ ಈ ವಿಷಯವನ್ನು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ತಿಳಿಸಿದ್ದಾರೆ.

ತಕ್ಷಣ ಅರಕಲಗೂಡು ಬಸ್ ನಿಲ್ದಾಣಕ್ಕೆ ಬಂದ ಆರೋಗ್ಯ ಇಲಾಖೆ ಅಧಿಕಾರಿಗಳು ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಈ ವೇಳೆ ಯುವತಿ ನನಗೆ ಏರ್‍ಪೋರ್ಟ್ ನಲ್ಲಿ ಚೆಕ್ ಮಾಡಿ ನೆಗೆಟೀವ್ ಇದೆ ಎಂದು ತಿಳಿಸಿದ್ದಾರೆ ಎಂದು ಮಾಹಿತಿ ನೀಡಿದ್ದಾಳೆ. ಯುವತಿಯನ್ನು ಜೊತೆಯಲ್ಲೇ ಕರೆದುಕೊಂಡು ಹೋದ ಆರೋಗ್ಯ ಇಲಾಖೆ ಅಧಿಕಾರಿಗಳು, ಮತ್ತೊಮ್ಮೆ ಪರಿಶೀಲನೆ ನಡೆಸಿ, ಮನೆಯಿಂದ ಸ್ವಲ್ಪ ದಿನ ಹೊರಗೆ ಓಡಾಡದಂತೆ ಸೂಚನೆ ನೀಡಿದ್ದಾರೆ.

Comments

Leave a Reply

Your email address will not be published. Required fields are marked *