ಊರಿನ ರಸ್ತೆ ಆಗುವರೆಗೂ ಮದುವೆಯಾಗುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ ಯುವತಿ

ದಾವಣಗೆರೆ: ಸ್ವಾತಂತ್ರ್ಯ ಬಂದು 7 ದಶಕಗಳೇ ಕಳೆದಿವೆ, ಅದರೂ ಕೂಡ ದಾವಣಗೆರೆ ಜಿಲ್ಲೆಯ ಮಾಯಕೊಂಡ ಕ್ಷೇತ್ರದ ಹೆಚ್ ರಾಮಪುರ ಗ್ರಾಮಕ್ಕೆ ಇಂದಿಗೂ ಸರ್ಕಾರಿ ಬಸ್ ವ್ಯವಸ್ಥೆ ಇಲ್ಲ. ಹೀಗೆ ಹಲವಾರು ಸಮಸ್ಯೆಯನ್ನು ಕಂಡು ಬೇಸತ್ತ ಈ ಗ್ರಾಮದ ಯುವತಿಯೊಬ್ಬಳು ದಿಟ್ಟತನ ಪ್ರದರ್ಶನ ಮಾಡಿದ್ದು, ಪ್ರಧಾನಿ, ಮುಖ್ಯಮಂತ್ರಿಗೆ ಪತ್ರ ಬರೆದು ನಮ್ಮ ಊರಿನ ರಸ್ತೆ ಆಗುವವರೆಗೂ ನಾನು ಮದುವೆಯಾಗುವುದಿಲ್ಲ ಎಂದು ಶಪತ ಮಾಡಿದ್ದಾಳೆ.

ರಾಂಪುರ ಜಿಲ್ಲಾ ಕೇಂದ್ರದಿಂದ ಕೇವಲ 30 ಕಿಲೋ ಮೀಟರ್ ದೂರವಿದ್ದರೆ, ಮಾಯಕೊಂಡ ವಿಧಾನಸಭಾ ಕ್ಷೇತ್ರದಿಂದ 6 ಕಿಲೋ ಮೀಟರ್ ದೂರವಷ್ಟೇ ಇದೆ. ಆದರೂ ಈ ಊರು ಇಂದಿಗೂ ಮೂಲಭೂತ ಸೌಕರ್ಯದಿಂದ ವಂಚಿತಗೊಂಡಿದೆ. ಈ ಊರಲ್ಲಿ ಯುವತಿಯರು ಶಾಲಾ-ಕಾಲೇಜ್‍ಗೆ ಹೋಗಬೇಕೆಂದರೆ ನಡೆದುಕೊಂಡೆ ಹೋಗಬೇಕು. ಮಳೆಗಾಲದಲ್ಲಿ ಮಣ್ಣಿನ ರಸ್ತೆಯಲ್ಲಿ ನಡೆದು ಶಾಲಾ-ಕಾಲೇಜ್‍ಗೆ ತೆರಳಬೇಕಾದ ಪರಿಸ್ಥಿತಿ ಇದೆ. ಸ್ವಾತಂತ್ರ್ಯ ಬಂದು 7 ದಶಕಗಳಾದರೂ ಈ ಗ್ರಾಮಕ್ಕೆ ಇನ್ನೂ ಸರ್ಕಾರಿ ಸಾರಿಗೆ ವ್ಯವಸ್ಥೆ ಇಲ್ಲ. ಬಸ್ ಇಲ್ಲದ ಕಾರಣ ಗ್ರಾಮದಲ್ಲಿ ಎಷ್ಟೋ ಯುವತಿಯರು ವಿದ್ಯಾಭ್ಯಾಸವನ್ನೇ ಮೊಟುಕುಗೊಳಿಸಿದ್ದಾರೆ. ಇದರಿಂದ ಬಾಲ್ಯ ವಿವಾಹ ಕೂಡ ಹೆಚ್ಚಾಗುತ್ತಿವೆ. ವಿಪರ್ಯಾಸವೆಂದರೆ ಓದುವ ಆಸೆಯಿದ್ದರು ಸರಿಯಾದ ಬಸ್ ವ್ಯವಸ್ಥೆ ಇಲ್ಲ ಎಂಬ ಕಾರಣ ಮಹಿಳೆಯರು ಮನೆಯಲ್ಲೇ ಕೂರುವಂತಾಗಿದೆ. ಇದರಿಂದ ಈ ಊರಲ್ಲಿ ಹೆಣ್ಣು ಮಕ್ಕಳು ಹೆಚ್ಚಿನ ವಿದ್ಯಾಭ್ಯಾಸ ಮಾಡಿಲ್ಲ ಎಂದು ಮದುವೆಯಾಗಲು ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ನಾಪತ್ತೆಯಾಗಿದ್ದ ಬಾಲಕ ಶವವಾಗಿ ಕೆರೆಯಲ್ಲಿ ಪತ್ತೆ

ಈ ಎಲ್ಲಾ ಸಮಸ್ಯೆಗಳನ್ನ ಗ್ರಾಮದ ಬಿಂದು ಎಂಬ ಯುವತಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಮೂಲಭೂತ ಸೌಕರ್ಯ ಒದಗಿಸುವಂತೆ ಪತ್ರ ಬರೆದಿದ್ದಾರೆ. ತಮ್ಮ ಗ್ರಾಮದ ಸಮಸ್ಯೆ ಬಗೆಹರಿಸಿಕೊಡಿ ಎಂದು ಮನವಿ ಮಾಡಿಕೊಂಡಿದ್ದು, ಅಲ್ಲದೆ ಗ್ರಾಮಕ್ಕೆ ರಸ್ತೆ ಆಗುವರೆಗೂ ತಾನು ಮದುವೆಯಾಗುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದಾಳೆ.

ರಾಜಕಾರಣಿಗಳು ಚುನಾವಣೆ ಮಾತ್ರ ಬರುತ್ತಾರೆ ನಂತರ ಯಾರು ಬರಲ್ಲ ಎಂದು ಅಳಲು ತೋಡಿಕೊಂಡಿರುವ ಗ್ರಾಮಸ್ಥರು, ಮಕ್ಕಳನ್ನ ಹೆಚ್ಚು ಓದಿಸಬೇಕೆಂದು ಆಸೆ ಇದೆ ಆದರೆ, ಬಸ್ ಹಾಗೂ ರಸ್ತೆ ವ್ಯವಸ್ಥೆ ಇಲ್ಲ ಎಂಬ ಕಾರಣ ವಿದ್ಯಾಭ್ಯಾಸವನ್ನು ಮೊಟುಕುಗೊಳಿಸಬೇಕಾದ ಅನಿವಾರ್ಯವಿದೆ ಮೊಬೈಲ್ ಟವರ್, ಸರಿಯಾದ ರಸ್ತೆ, ಬಸ್ ವ್ಯವಸ್ಥೆ ಇದಲ್ಲದೆ ಸರ್ಕಾರ ನೀಡುವ ಪಡಿತರ ಅಕ್ಕಿಯನ್ನು ಪಡೆಯಲು 12 ಕಿಲೋಮೀಟರ್ ಹೋಗಿ ಬರಬೇಕಾದ ಪರಿಸ್ಥಿತಿ ಇದೆ. ಯಾವುದೇ ಮೂಲಭೂತ ಸೌಕರ್ಯಗಳಿಲ್ಲದ ಈ ಊರಿಗೆ ಬೇರೆ ಗ್ರಾಮದಿಂದ ಯಾರು ಕೂಡ ಹುಡುಗರಿಗೆ ಮದುವೆಯಾಗಲು ಹೆಣ್ಣು ಕೊಡುತ್ತಿಲ್ಲ, ಹಾಗೂ ಇಲ್ಲಿಂದ ಹೆಣ್ಣನ್ನು ಮದುವೆ ಮಾಡಿಕೊಂಡು ಹೋಗುತ್ತಿಲ್ಲ. ಅಷ್ಟರ ಮಟ್ಟಿಗೆ ಇಲ್ಲಿ ಮೂಲಭೂತ ಸೌಕರ್ಯಗಳಿಲ್ಲದೆ ಗ್ರಾಮದ ಜನರು ತೊಂದರೆ ಅನುಭವಿಸುತ್ತಿದ್ದಾರೆ.

ಬಿಂದು ತಮ್ಮ ಊರಿನ ಸಮಸ್ಯೆಗಳ ಬಗ್ಗೆ ಪ್ರಧಾನಿ ಹಾಗೂ ಸಿಎಂಗೆ ಬರೆದ ಪತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ನಡುವೆ ಸಿಎಂ ಕೂಡ ಅವರ ಪತ್ರಕ್ಕೆ ಸ್ಪಂದಿಸಿದ್ದು ರಸ್ತೆ ಮಾಡಿಸಿಕೊಡುವುದಾಗಿ ಭರವಸೆ ನೀಡಿದ್ದಾರೆ. ಇದನ್ನೂ ಓದಿ: ಸಿಎಂ ಅಧಿಕೃತ ಹೆಲಿಕಾಪ್ಟರ್‌ನಲ್ಲಿ ಪ್ರಯಾಣಿಸಿದ ಬುಡಕಟ್ಟು ಜನಾಂಗದ ನಾಲ್ವರು

Comments

Leave a Reply

Your email address will not be published. Required fields are marked *