ನಿಮ್ಮ ಋಣವನ್ನ ಯಾವತ್ತೂ ಮರೆಯೋಕಾಗಲ್ಲ – ಡೆತ್‍ನೋಟ್ ಬರೆದು ನದಿಗೆ ಹಾರಿದ ಯುವತಿ

ಬಾಗಲಕೋಟೆ: ಡೆತ್ ನೋಟ್ ಬರೆದಿಟ್ಟು ಯುವತಿಯೊಬ್ಬಳು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಬೀಳಗಿ ತಾಲೂಕಿನ ಘಟಪ್ರಭಾ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಅನಗವಾಡಿ ಸೇತುವೆ ಬಳಿ ನಡೆದಿದೆ.

ಗಾಯತ್ರಿ ಮೃತ ಯುವತಿ. ಹುಬ್ಬಳ್ಳಿ-ಸೊಲ್ಲಾಪೂರ ರಾಷ್ಟ್ರೀಯ ಹೆದ್ದಾರಿ 218ರ ರಸ್ತೆಯ ಸೇತುವೆ ಇದಾಗಿದ್ದು, ಯುವತಿ ನೋಂದಣಿ ಇಲ್ಲದ ಸ್ಕೂಟಿಯಲ್ಲಿ ಬಂದು ಸೇತುವೆ ಮೇಲಿಂದ ನದಿಗೆ ಹಾರಲು ಯತ್ನಿಸಿದ್ದಾಳೆ. ಇದನ್ನು ನೋಡಿ ಜನರು ಗಾಬರಿಗೊಂಡು ಆಕೆಯನ್ನು ತಡೆಯಲು ಓಡಿ ಬಂದಿದ್ದಾರೆ. ಆದರೆ ಜನರು ಅಲ್ಲಿಗೆ ಬರುವಷ್ಟರಲ್ಲಿ ಯುವತಿ ನದಿಗೆ ಹಾರಿ ಮೃತಪಟ್ಟಿದ್ದಾಳೆ.

ಸ್ಥಳದಲ್ಲಿ ಯುವತಿ ಬರೆದಿಟ್ಟಿರುವ ಡೆತ್‍ನೋಟ್ ಪೊಲೀಸರ ಕೈಗೆ ಸಿಕ್ಕಿದೆ. “ಹಾಯ್, ಎಲ್ಲರೂ ನನ್ನನ್ನು ದಯವಿಟ್ಟು ಕ್ಷಮಿಸಿಬಿಡಿ. ನಿಮ್ಮ ಋಣವನ್ನು ಯಾವತ್ತೂ ಮರೆಯೋಕಾಗಲ್ಲ, ನನಗೆ ಬದುಕಲು ಆಗುತ್ತಿಲ್ಲ. ಕ್ಷಮಿಸಿ, ನನ್ನ ಸಾವಿಗೆ ನಾನೇ ಕಾರಣ. ಇಂತಿ ನಿಮ್ಮ ಪ್ರೀತಿಯ ಗಾಯತ್ರಿ” ಎಂದು ಯುವತಿ ಡೆತ್‍ನೋಟ್‍ನಲ್ಲಿ ಬರೆದಿದ್ದಾಳೆ.

ಯುವತಿ ಯಾರು, ಎಲ್ಲಿಯವಳು ಎನ್ನುವ ಮಾಹಿತಿ ಸದ್ಯಕ್ಕೆ ತಿಳಿದು ಬಂದಿಲ್ಲ. ಮಾಹಿತಿ ತಿಳಿದು ಸ್ಥಳಕ್ಕೆ ಬೀಳಗಿ ಪೊಲೀಸರು ಬಂದು ಯುವತಿಯ ಮೃತದೇಹಕ್ಕಾಗಿ ಶೋಧಕಾರ್ಯ ಶುರು ಮಾಡಿದ್ದಾರೆ.

Comments

Leave a Reply

Your email address will not be published. Required fields are marked *