ಕೃಷಿ ಹೊಂಡದಲ್ಲಿ ಬಿದ್ದು ಬಾಲಕಿ ಸಾವು

ಚಿಕ್ಕಬಳ್ಳಾಪುರ: ಕ್ರಿಸ್ಮಸ್ ಹಬ್ಬದ ರಜೆ ಹಿನ್ನೆಲೆಯಲ್ಲಿ ತಮ್ಮನ ಜೊತೆ ತೋಟದ ಬಳಿ ಹೋಗಿದ್ದ ಬಾಲಕಿ ಕೃಷಿ ಹೊಂಡದಲ್ಲಿ ಕಾಲು ಜಾರಿ ಬಿದ್ದು ಮೃತಪಟ್ಟಿರುವ ದಾರುಣ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಚೌಟತಿಮ್ಮನಹಳ್ಳಿಯಲ್ಲಿ ನಡೆದಿದೆ.

ಬೃಂದಾ (7) ಮೃತಪಟ್ಟ ಬಾಲಕಿ. ಮ್ಮನಹಳ್ಳಿ ಗ್ರಾಮದ ರಾಜಾರೆಡ್ಡಿ ಹಾಗೂ ಚಂದ್ರಕಲಾ ದಂಪತಿಯ ಪುತ್ರಿಯಾದ ಬೃಂದಾ, ಗುಡಿಬಂಡೆ ಪಟ್ಟಣದ ಸಹ ವಿದ್ಯಾನೀಕೇತನ ಶಾಲೆಯಲ್ಲಿ ಎರಡನೇ ತರಗತಿ ಓದುತ್ತಿದ್ದಳು.

ಇಂದು ಕ್ರಿಸ್ಮಸ್ ರಜೆ ಇರುವ ಹಿನ್ನೆಲೆಯಲ್ಲಿ ಬೃಂದಾ ತನ್ನ ತಂದೆ ಹಾಗೂ ತಮ್ಮ ಅಭಿನವ್ ಜೊತೆ ತೋಟದ ಬಳಿ ತೆರಳಿದ್ದಳು. ಈ ವೇಳೆ ಕೃಷಿ ಕಾಯಕದಲ್ಲಿ ತಂದೆ ನಿರತರಾಗಿದ್ದರೆ ಇತ್ತ ತಮ್ಮ ಅಭಿನವ್ ಹಾಗೂ ಮೃತ ಬಾಲಕಿ ಬೃಂದಾ ಕೃಷಿ ಹೊಂಡದ ಬಳಿ ಆಟವಾಡಲು ಹೋಗಿದ್ದರು.

ಆಟವಾಡುವಾಗ ಆಕಸ್ಮಿಕವಾಗಿ ಕಾಲು ಜಾರಿ ಬೃಂದಾ ಕೃಷಿ ಹೊಂಡಕ್ಕೆ ಬಿದ್ದಿದ್ದಾಳೆ. ಅಭಿನವ್ ಕೂಡಲೇ ಕಿರುಚಿಕೊಂಡು ತಂದೆಗೆ ವಿಷಯ ತಿಳಿಸಿದ್ದಾನೆ. ವಿಷಯ ತಿಳಿದ ತಕ್ಷಣ ತಂದೆ ಬಾಲಕಿಯನ್ನು ರಕ್ಷಣೆ ಮಾಡಿ ಮೇಲೆ ತಂದರು. ಬಳಿಕ ಚಿಕ್ಕಬಳ್ಳಾಪುರ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅಷ್ಟರಲ್ಲೇ ಬಾಲಕಿ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.

ಈ ಬಗ್ಗೆ ಗುಡಿಬಂಡೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments

Leave a Reply

Your email address will not be published. Required fields are marked *