ನಾಲ್ಕನೇ ಹೆಣ್ಣುಮಗು ಜನಿಸಿದ್ದಕ್ಕೆ ಮೂವರು ಹೆಣ್ಣು ಮಕ್ಕಳನ್ನು ಬಾವಿಗೆ ತಳ್ಳಿ ಆತ್ಮಹತ್ಯೆಗೆ ಶರಣಾದ

ಗಾಂಧಿನಗರ: ನಾಲ್ಕನೇ ಮಗುವೂ ಹೆಣ್ಣು ಹುಟ್ಟಿದ್ದಕ್ಕೆ ಮೂವರು ಹೆಣ್ಣು ಮಕ್ಕಳನ್ನು ಬಾವಿಯಲ್ಲಿ ಹಾಕಿ, ತಂದೆ ಮರಕ್ಕೆ ನೇಣು ಬಿಗಿದುಕೊಂಡಿರುವ ಆಘಾತಕಾರಿ ಘಟನೆ ನಡೆದಿದೆ.

ಗುಜರಾತಿನ ರಾಜಕೋಟ್ ಜಿಲ್ಲೆಯ ಜುನಾಗಢದಲ್ಲಿ ಘಟನೆ ನಡೆದಿದ್ದು, ಸಂತ್ರಸ್ತನನ್ನು ಗ್ರಾಮ ರಕ್ಷಕ ದಳ(ಜಿಆರ್ ಡಿ)ದಲ್ಲಿ ಕಾರ್ಯನಿರ್ವಹಿಸುತ್ತಿದ್ದ ರಸಿಕ್ ಸೋಳಂಕಿ ಎಂದು ಗುರುತಿಸಲಾಗಿದೆ. ರಸಿಕ್‍ನ ಗಂಡು ಮಗು ಬೇಕೆಂಬ ಹಪಾಹಪಿಯೇ ಆತ್ಮಹತ್ಯೆಗೆ ಕಾರಣ ಎಂದು ಹೇಳಲಾಗಿದೆ.

ರಸಿಕ್ ಸೋಳಂಕಿ ಹಾಗೂ ಪತ್ನಿ 10 ವರ್ಷಗಳ ಹಿಂದೆ ವಿವಾಹವಾಗಿದ್ದರು. ದಂಪತಿಗೆ ಮೂವರು ಹೆಣ್ಣುಮಕ್ಕಳಿದ್ದಾರೆ. ಆದರೆ ಸೋಳಂಕಿಗೆ ಗಂಡು ಮಗು ಬೇಕೆಂಬ ಆಸೆಯಿತ್ತು. ಸುಮಾರು ಎರಡು ವಾರಗಳ ಹಿಂದೆ ರಸಿಕ್ ಪತ್ನಿ ನಾಲ್ಕನೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ಇದರಿಂದ ಸಿಟ್ಟಿಗೆದ್ದು ರಸಿಕ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಎರಡು ದಿನಗಳ ಹಿಂದೆ ಮಗುವನ್ನು ಕರೆದುಕೊಂಡು ಪತ್ನಿ ತವರು ಮನೆಗೆ ಹೋಗಿದ್ದಳು. ಪತ್ನಿ ಊರಿಗೆ ತೆರಳುತ್ತಿದ್ದಂತೆ ಮಧ್ಯಾಹ್ನದ ಹೊತ್ತಿಗೆ ರಸಿಕ್ ತನ್ನ ಮೂವರು ಹೆಣ್ಣು ಮಕ್ಕಳನ್ನು ಬೈಕ್ ಮೇಲೆ ಲಾಲ್ ಜೀ ಭುವ ಅವರ ಹೊಲಕ್ಕೆ ಕರೆದುಕೊಂಡು ಹೋಗಿದ್ದಾನೆ. ಆಗ ತನ್ನ ಮೂವರು ಹೆಣ್ಣು ಮಕ್ಕಳಾದ ರಿಯಾ, ಅಂಜಲಿ ಹಾಗೂ ಜಲ್ಪಾರನ್ನು ಹೊಲದಲ್ಲಿದ್ದ ಬಾವಿಗೆ ತಳ್ಳಿದ್ದಾನೆ. ನಂತರ ಅಲ್ಲಿಯೇ ಇದ್ದ ಮರಕ್ಕೆ ರಸಿಕ್ ಸಹ ನೇಣು ಬಿಗಿದುಕೊಂಡಿದ್ದಾನೆ.

ಹೊಲದಲ್ಲಿ ಕೆಲಸ ಮಾಡುತ್ತಿದ್ದ ಕರ್ಮಿಕರೊಬ್ಬರು ನೇಣು ಬಿಗಿದುಕೊಂಡಿರುವುದನ್ನು ಕಂಡಿದ್ದಾರೆ. ನಂತರ ರಸಿಕ್ ಸಹೋದರ ವಲ್ಜಿಗೆ ಮಾಹಿತಿ ನೀಡಿದ್ದಾರೆ. ಮೂವರು ಮಕ್ಕಳನ್ನು ಕರೆದುಕೊಂಡು ರಸಿಕ್ ಬೈಕ್ ಮೇಲೆ ಹೊರಟಿದ್ದನ್ನು ವಲ್ಜಿ ನೋಡಿದ್ದ. ಸುದ್ದಿ ತಿಳಿದ ನಂತರ ಮೂವರು ಮಕ್ಕಳ ಬಗ್ಗೆ ಚಿಂತಿಸಿದ್ದಾರೆ. ತಕ್ಷಣ ಸ್ಥಳಕ್ಕೆ ಧಾವಿಸಿದ್ದು, ಆಗ ರಸಿಕ್ ಮರಕ್ಕೆ ನೇಣು ಬಿಗಿದುಕೊಂಡಿರುವುದನ್ನು ಕಂಡಿದ್ದಾರೆ.

ನಂತರ ಬಾವಿಯನ್ನು ಪರಿಶೀಲಿಸಿದ್ದು, ಮೂವರು ಮಕ್ಕಳ ಹೆಣಗಳು ನೀರಿನಲ್ಲಿ ತೇಲುತ್ತಿರುವುದನ್ನು ಕಂಡಿದ್ದಾರೆ. ನಂತರ ಸ್ಥಳೀಯರು ಮೂರು ಮೃತದೇಹಗಳನ್ನು ಹೊರ ತೆಗೆದಿದ್ದಾರೆ.

ಈ ಕುರಿತು ಭೇಸನ್ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಮಾಹಿತಿ ನೀಡಿ, ಮೂವರೂ ಹೆಣ್ಣು ಮಕ್ಕಳಾಗಿದ್ದಕ್ಕೆ ರಸಿಕ್ ಆತಂಕಕ್ಕೊಳಗಾಗಿದ್ದ. ಇದೇ ಚಿಂತೆಯಲ್ಲಿ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಹೇಳಿದ್ದಾರೆ.

ಹಿರಿಯ ಪೊಲೀಸ್ ಅಧಿಕಾರಿ ಪ್ರದೀಪ್ ಸಿಂಗ್ ಈ ಕುರಿತು ಮಾತನಾಡಿ, ಪ್ರಾಥಮಿಕ ತನಿಖೆಯ ಪ್ರಕಾರ ರಸಿಕ್ ಆರ್ಥಿಕ ಬಿಕ್ಕಟ್ಟಿನಿಂದ ಸೊರಗಿ ಹೋಗಿದ್ದ. ಇದೀಗ ನಾಲ್ಕನೇ ಮಗುವೂ ಹೆಣ್ಣಾಗಿದ್ದರಿಂದ ಬೇಸರಗೊಂಡು ಆತ್ಮಹತ್ಯೆಯ ನಿರ್ಧಾರ ಕೈಗೊಂಡಿರಬಹುದು ಎಂದು ಶಂಕಿಸಿದ್ದಾರೆ.

Comments

Leave a Reply

Your email address will not be published. Required fields are marked *