ಎರಡೂವರೆ ವರ್ಷದ ಬಾಲಕಿ ಅನುಮಾನಾಸ್ಪದ ಸಾವು – ತಂದೆಯೇ ಕೊಲೆ ಮಾಡಿರುವ ಶಂಕೆ

ಬಾಗಲಕೋಟೆ: ಎರಡೂವರೆ ವರ್ಷದ ಬಾಲಕಿ ಅನುಮಾನಾಸ್ಪದವಾಗಿ ಸಾವಿಗೀಡಾಗಿರುವ ಘಟನೆ ಬಾಗಲಕೋಟೆ ಜಿಲ್ಲೆಯ ತೇರದಾಳ ಪಟ್ಟಣದಲ್ಲಿ ನಡೆದಿದೆ.

ಎರಡೂವರೆ ವರ್ಷದ ವೈಷ್ಣವಿ ಅನುಮಾನಾಸ್ಪದವಾಗಿ ಮೃತಪಟ್ಟ ಬಾಲಕಿ. ವೈಷ್ಣವಿ ತಂದೆಯೇ ಆಕೆಯನ್ನು ಕೊಲೆ ಮಾಡಿದ್ದಾರೆ ಎಂದು ಮಗುವಿನ ತಾಯಿಯ ಮನೆಯವರು ತೇರದಾಳ ಪೊಲೀಸ್ ಠಾಣೆಯಲ್ಲಿ ದೂರು ಕೊಟ್ಟಿದ್ದಾರೆ. ತಂದೆ ಧರೆಪ್ಪ ತರದಾಳ ಮೇಲೆ ಕೊಲೆ ಆರೋಪ ಮಾಡಿರುವ ಬಾಲಕಿ ಮನೆಯವರು ವೈಷ್ಣವಿ ಸಾವಿನಲ್ಲಿ ಸಂಶಯವಿದೆ ಎಂದು ದೂರು ನೀಡಿದ್ದಾರೆ.

ಆರೋಪಿ ಧರೆಪ್ಪ ಒಂದೂವರೆ ವರ್ಷದ ಹಿಂದೆ ಪತ್ನಿ ವಂದನಾ ಮೇಲೆ ಅನೈತಿಕ ಸಂಬಂಧ ಆರೋಪ ಮಾಡಿದ್ದನು. ಅಲ್ಲದೆ ಈ ವಿಷಯಕ್ಕಾಗಿ ತನ್ನ ಪತ್ನಿ ವಂದನಾ ಕೊಲೆ ಮಾಡಿ ಜೈಲು ಸೇರಿದ್ದನು. ನಂತರ ಪತ್ನಿ ಪೋಷಕರು ಹಾಗೂ ಧರೆಪ್ಪ ಹೊಂದಾಣಿಕೆ ಮೇಲೆ ಕೇಸ್ ಮುಕ್ತಾಯಗೊಳಿಸಿದ್ದರು.

ಜೈಲಿನಿಂದ ಹೊರ ಬಂದ ಬಳಿಕ ಮಗಳು ನನಗೆ ಬೇಕು ಎಂದು ಧರೆಪ್ಪ ಬೆಳಗಾವಿ ಜಿಲ್ಲೆ ರಾಯಭಾಗದ ಜೆಎಮ್‍ಎಫ್‍ಸಿ ಕೋರ್ಟಿನಲ್ಲಿ ಧಾವೆ ಹೂಡಿದ್ದನು. ಕೋರ್ಟ್ ಆದೇಶದ ಮೇರೆಗೆ ಮಗಳನ್ನು ಮೂರು ತಿಂಗಳು ತನ್ನ ಮನೆಗೆ ಕರೆದೊಯ್ದಿದ್ದನು. ಈಗ ಬಾಲಕಿ ಸಾವನ್ನಪ್ಪಿದ್ದು ಧರೆಪ್ಪ ಮೇಲೆ ಬಾಲಕಿ ತಾಯಿಯ ಮನೆಯವರು ಸಂಶಯ ವ್ಯಕ್ತಪಡಿಸಿದ್ದಾರೆ.

ಮೊದಲಿನಿಂದಲೂ ಮಗು ನನ್ನದಲ್ಲ ಎಂದು ಧರೆಪ್ಪ ಸಂಶಯಪಡುತ್ತಿದ್ದ, ಈಗ ಅವನೇ ಕೊಲೆ ಮಾಡಿರಬಹುದು ಎಂದು ಆರೋಪಿಸಲಾಗುತ್ತಿದೆ.

Comments

Leave a Reply

Your email address will not be published. Required fields are marked *