ಸಿಎಂ ಯೋಗಿ ಆದಿತ್ಯನಾಥ್ ಮನೆ ಮುಂದೆಯೇ ಯುವತಿ ಆತ್ಮಹತ್ಯೆಗೆ ಯತ್ನ!

ಲಕ್ನೋ: ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಲಕ್ನೋದರಲ್ಲಿರುವ ಮನೆ ಮುಂದೆ ಯುವತಿ ಹಾಗೂ ಆಕೆಯ ಕುಟುಂಬ ಆತ್ಮಹತ್ಯೆಗೆ ಯತ್ನಿಸಿರುವ ಆಘಾತಕಾರಿ ಘಟನೆಯೊಂದು ನಡೆದಿರುವ ಬಗ್ಗೆ ಇಂದು ಬೆಳಕಿಗೆ ಬಂದಿದೆ.

ಈ ಘಟನೆ ಭಾನುವಾರ ನಡೆದಿದೆ. ಬಿಜೆಪಿ ಶಾಸಕನೊಬ್ಬ ತನ್ನ ಮೇಲೆ ಅತ್ಯಾಚಾರವೆಸಗಿದ್ದಾನೆಂದು ದೂರು ನೀಡಿದ್ರೂ, ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಯುವತಿ ಮತ್ತು ಆಕೆಯ ಕುಟುಂಬ ಈ ನಿರ್ಧಾರಕ್ಕೆ ಬಂದಿರುವುದಾಗಿ ವರದಿಯಾಗಿದೆ.

ಘಟನೆ ವಿವರ: ಕಳೆದ ವರ್ಷ ಉನ್ನಾವೋ ಶಾಸಕ ಕುಲದೀಪ್ ಸಿಂಗ್ ಸೆಂಗಾರ್ ಹಾಗೂ ಆತನ ಸಹೋದರ ಕಳೆದ ವರ್ಷ ಜೂನ್ ತಿಂಗಳಿನಲ್ಲಿ ಅತ್ಯಾಚಾರವೆಸಗಿದ್ದರು. ಈ ಸಂಬಂಧ ಯುವತಿ ಹಾಗೂ ಕುಟುಂಬ ಎಫ್‍ಐಆರ್ ದಾಖಲಿಸಿತ್ತು. ಕೇಸ್ ದಾಖಲಿಸಿದ ಬಳಿಕ ಯುವತಿ ಹಾಗೂ ಆಕೆಯ ಕುಟುಂಬಕ್ಕೆ ಆರೋಪಿಗಳು ಬೆದರಿಕೆ ಹಾಕಿದ್ದರು. ಈ ಕುರಿತು ಶಾಸಕನ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಯುವತಿ ಈ ಮೊದಲೇ ಒತ್ತಾಯಿಸಿದ್ದರು.

`ನಾನು ಅತ್ಯಾಚಾರಕ್ಕೊಳಗಾಗಿದ್ದೇನೆ. ಈ ಸಂಬಂಧ ಕಳೆದ ಒಂದು ವರ್ಷದಿಂದ ನಾನು ಎಲ್ಲಾ ಅಧಿಕಾರಿಗಳಿಗೆ ದೂರು ನೀಡಿದ್ದೇನೆ. ಆದ್ರೆ ಯಾರೊಬ್ಬರು ಈ ಕುರಿತು ಕ್ಯಾರೇ ಎನ್ನುತ್ತಿಲ್ಲ. ಹೀಗಾಗಿ ಒಂದಾ ನನ್ನ ಕೂಗನ್ನು ಆಲಿಸದ ಎಲ್ಲರನ್ನೂ ಬಂಧಿಸಿ, ಇಲ್ಲವಾದಲ್ಲಿ ನಾನೇ ಆತ್ಮಹತ್ಯೆಗೆ ಶರಣಾಗುವುದಾಗಿ ಯುವತಿ ಸುದ್ದಿ ಸಂಸ್ಥೆಯೊಂದಕ್ಕೆ ಹೇಳಿದ್ದಾರೆ.

ಸದ್ಯ ಪ್ರಕರಣ ಸಂಬಂಧ ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಸಮಾಜವಾದಿ ಮತ್ತು ಬಹುಜನ ಸಮಾಜವಾದಿ ಪಕ್ಷದಲ್ಲಿಯೂ ಸೆಂಗಾರ್ ಗುರುತಿಸಿಕೊಂಡಿದ್ದು, ಇದೀಗ ತನ್ನ ಮೇಲಿನ ಆರೋಪವನ್ನು ತಳ್ಳಿ ಹಾಕಿದ್ದಾರೆ. ಇದೊಂದು ಪೂರ್ವನಿಯೋಜಿತ ಕೃತ್ಯ. ಹೀಗಾಗಿ ಈ ಸಂಬಂಧ ಶೀಘ್ರ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿದ್ದಾರೆ.

ಒಟ್ಟಿನಲ್ಲಿ ಇಡೀ ಪ್ರಕರಣವನ್ನು ಲಕ್ನೋ ಪೊಲೀಸರ ಕೈಗೆ ಒಪ್ಪಿಸಲಾಗಿದೆ. ಹೀಗಾಗಿ ತನಿಖೆ ನಡೆಸಿದ ಬಳಿಕ ಆರೋಪಗಳಿಗೆ ಸಾಕ್ಷಿ ಸಿಗಲಿದೆ ಅಂತ ಹಿರಿಯ ಪೊಲೀಸ್ ಅಧಿಕಾರಿ ರಾಜೀವ್ ಕೃಷ್ಣನ್ ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *