ಕ್ಯಾಬ್ ಚಾಲಕನ ಮೇಲೆ ಯುವತಿ ಹಲ್ಲೆ- ಠಾಣೆ ಮೆಟ್ಟಿಲೇರಿದ್ರೆ ಚಾಲಕರ ಮೇಲೆಯೇ ಬಿತ್ತು ಕೇಸ್

ಬೆಂಗಳೂರು: ಜೂಮ್ ಕಾರಿನಲ್ಲಿ ಡ್ರೈವ್ ಮಾಡಿಕೊಂಡು ಬಂದು ಓಲಾ ಕಾರಿಗೆ ಡಿಕ್ಕಿ ಹೊಡೆದಿದ್ದನ್ನು ಪ್ರಶ್ನಿಸಿದ್ದಕ್ಕೆ ಚಾಲಕರ ವಿರುದ್ಧ ಕೇಸ್ ದಾಖಲಾಗಿದ್ದನ್ನು ಖಂಡಿಸಿ ಚಾಲಕರು ಬೆಳ್ಳಂದೂರು ಠಾಣೆಯ ಮುಂಭಾಗ ಪ್ರತಿಭಟನೆ ನಡೆಸಿದ್ದಾರೆ.

ಚಾಲಕರ ಆರೋಪ ಏನು?
ಶುಕ್ರವಾರ ಕುಡಿದ ಮತ್ತಿನಲ್ಲಿದ್ದ ಯುವತಿ ಜೂಮ್ ಕಾರಿನಲ್ಲಿ ಸೆಲ್ಫ್ ಡ್ರೈವ್ ಮಾಡಿಕೊಂಡು ಓಲಾ ಕಾರಿಗೆ ಬೆಳ್ಳಂದೂರಿನಲ್ಲಿ ಡಿಕ್ಕಿ ಹೊಡೆದಿದ್ದಾಳೆ. ಡಿಕ್ಕಿ ಹೊಡೆದಿದ್ದು ಯಾಕೆ ಎಂದು ಕ್ಯಾಬಿನ ಚಾಲಕರು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಯುವತಿಯರು ತಮ್ಮ ಸ್ನೇಹಿತರನ್ನು ಕರೆಸಿ ಚಾಲಕರ ಮೇಲೆ ರಾದ್ಧಾಂತ ನಡೆಸಿದ್ದಾರೆ. ಅಷ್ಟೇ ಅಲ್ಲದೆ ಯುವತಿ ನಡುರಸ್ತೆಯಲ್ಲಿ ರಾದ್ಧಾಂತ ಸೃಷ್ಟಿಸಿ ಅವಾಚ್ಯ ಶಬ್ಧಗಳಿಂದ ನಿಂದಿಸಿ ಕ್ಯಾಬ್ ಚಾಲಕನ ಮೇಲೆ ಹಲ್ಲೆ ಮಾಡಿದ್ದಾಳೆ.

ಯುವತಿ ಹಲ್ಲೆ ಮಾಡಿದಕ್ಕೆ ಚಾಲಕ ನ್ಯಾಯ ಕೇಳಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಆದರೆ ಚಾಲಕರ ಮೇಲೆಯೇ ಬೆಳ್ಳಂದೂರು ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ಪೊಲೀಸರು 10ಕ್ಕೂ ಹೆಚ್ಚು ಚಾಲಕರ ಮೇಲೆ ಕೇಸ್ ದಾಖಲಿಸಿಕೊಂಡಿದ್ದಾರೆ. ಸುರೇಶ್, ಶಂಕರ್, ಲಿಂಗಣ್ಣಗೌಡ ಸೇರಿದಂತೆ ಎಂಟು ಚಾಲಕರನ್ನು ಬಂಧಿಸಿದ್ದಾರೆ.

ಯುವತಿ ರಾದ್ಧಾಂತದ ಬಗ್ಗೆ ಸಾಕ್ಷಿ ಸಮೇತ ದೂರು ಕೊಟ್ಟರೂ ಚಾಲಕರದ್ದೇ ತಪ್ಪು ಎಂದು ಪೊಲೀಸರು ಹೇಳುತ್ತಿದ್ದಾರೆ. ಬೆಳ್ಳಂದೂರು ಪೊಲೀಸ್ ಠಾಣೆಯ ಎಎಸ್ ಐ ಮಂಜುನಾಥ್ ನಮ್ಮ ಮೇಲೆ ಮೇಲೆ ದಬ್ಬಾಳಿಕೆ ನಡೆಸಿದ್ದಾರೆ ಎಂದು ಆರೋಪಿಸಿ ಕ್ಯಾಬ್ ಚಾಲಕರು ನ್ಯಾಯಕ್ಕಾಗಿ ಪೊಲೀಸ್ ಠಾಣೆಯ ಮುಂಭಾಗದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.

Comments

Leave a Reply

Your email address will not be published. Required fields are marked *