5 ವರ್ಷದ ಹಸುಳೆ ಮೇಲೆ ಕಾಮುಕರ ಅಟ್ಟಹಾಸ – ಐಸಿಯೂನಲ್ಲಿ ಕಂದಮ್ಮನಿಗೆ ಚಿಕಿತ್ಸೆ

ಬೆಂಗಳೂರು: ನಗರದಲ್ಲಿ ಕಾಮುಕರ ಅಟ್ಟಹಾಸ ಮೀತಿಮೀರಿದೆ. ಮೂವರು ಕಾಮುಕರು ಶುಕ್ರವಾರ ಮಧ್ಯರಾತ್ರಿ ಐದು ವರ್ಷದ ಪುಟ್ಟ ಬಾಲಕಿಯನ್ನು ನಿರ್ಜನ ಪ್ರದೇಶಕ್ಕೆ ಹೊತ್ತೊಯ್ದು ಗ್ಯಾಂಗ್ ರೇಪ್ ಎಸಗಿರುವ ಹೃದಯವಿದ್ರಾವಕ ಘಟನೆಯೊಂದು ನಡೆದಿದೆ.

ಬೆಂಗಳೂರಿನ ಕೆಜಿ ಹಳ್ಳಿಯ ವೈಯಾಲಿಕಾವಲ್ ಸೊಸೈಟಿ ಬಳಿ ಈ ಘಟನೆ ನಡೆದಿದೆ. ಮಗುವಿನ ಪೋಷಕರು ಮೂಲತಃ ಚಿತ್ರದುರ್ಗದವರಾಗಿದ್ದು, ಕೆಲಸದ ನಿಮಿತ್ತ ಬೆಂಗಲೂರಿನಲ್ಲಿ 3 ವರ್ಷಗಳಿಂದ ವಾಸವಿದ್ದಾರೆ.

ನಡೆದಿದ್ದೇನು?: ಎಂದಿನಂತೆ ತಾಯಿಯ ಜೊತೆ ಮಲಗಿದ್ದ ಬಾಲಕಿ ರಾತ್ರಿ ಬಹಿರ್ದೆಸೆಗೆಂದು ಹೊರಗೆ ಬಂದಿದೆ. ಆದ್ರೆ ಈ ಬಗ್ಗೆ ತಾಯಿಗೆ ಗೊತ್ತಿರಲಿಲ್ಲ. ಬಾಲಕಿ ಹೊರಗೆ ಬಂದಿದ್ದ ವೇಳೆ ಕಾಮುಕರು ಆಕೆಯನ್ನು ಕರೆದುಕೊಂಡು ನಿರ್ಜನ ಪ್ರದೇಶಕ್ಕೆ ತೆರಳಿ ಅಲ್ಲಿ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾರೆ. ಬಳಿಕ ಮನೆಯ ಬಳಿ ಬಾಲಕಿಯನ್ನು ಬಿಸಾಕಿ ಹೋಗಿದ್ದಾರೆ. ಇದರಿಂದ ತಲೆಗೆ ಗಂಭೀರ ಗಾಯಗೊಂಡಿದ್ದರಿಂದ ಅರೆಪ್ರಜ್ಞಾವಸ್ಥೆಯಲ್ಲಿದ್ದ ಬಾಲಕಿಯನ್ನು ಕಂಡು ಪೋಷಕರು ಕಂಗಾಲಾಗಿ ಬೌರಿಂಗ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಾಲಕಿ ಮಾತನಾಡುವ ಪರಿಸ್ಥಿತಿಗೆ ಬಂದ ಬಳಿಕ ಮತ್ತಷ್ಟು ಸ್ಪಷ್ಟತೆ ಸಿಗಲಿದೆ ಅಂತಾ ಡಿಸಿಪಿ ಅಜಯ್ ಹಿಲೋರಿ ಹೇಳಿದ್ದಾರೆ.

ನಿನ್ನೆ ಮೂರು ಗಂಟೆ ಸುಮಾರಿಗೆ ಆಸ್ಪತ್ರೆಗೆ ಮಗು ದಾಖಲಾಗಿದೆ. ಮಗು ಶಾಕ್‍ಗೆ ಒಳಗಾಗಿದೆ. ಆಸ್ಪತ್ರೆಗೆ ದಾಖಲಾದಾಗ ಅರೆಪ್ರಜ್ಞಾವಸ್ಥೆಯಲ್ಲಿ ಇತ್ತು. ಮಗುವಿನ ಕೈ ಬೆರಳು ಕಟ್ಟಾಗಿದೆ. ಸದ್ಯ ಬಾಲಕಿಗೆ ಐಸಿಯೂವಿನಲ್ಲಿ ಚಿಕಿತ್ಸೆ ಮುಂದುವರೆದಿದೆ ಅಂತಾ ಬೌರಿಂಗ್ ಆಸ್ಪತ್ರೆಯ ನಿರ್ದೇಶಕ ಹಾಗೂ ಡೀನ್ ಮಂಜುನಾಥ್ ಹೇಳಿದ್ದಾರೆ.

ಜಾರ್ಜ್ ಭೇಟಿ: ಪ್ರಕರಣ ಸಂಬಂಧ ಸಚಿವ ಕೆ ಜೆ ಜಾರ್ಜ್ ಆಸ್ಪತ್ರೆಗೆ ಭೇಟಿ ನೀಡಿ ಬಾಲಕಿಯ ಆರೋಗ್ಯ ವಿಚಾರಿಸಿದ್ದಾರೆ. ಅಲ್ಲದೇ ಬಾಲಕಿಯ ಪೋಷಕರ ಜೊತೆಗೂ ಮಾತುಕತೆ ನಡೆಸಿದ್ದಾರೆ. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದೊಂದು ಸಿರಿಯಸ್ ಕ್ರೈಂ. ಪ್ರಕರಣದಲ್ಲಿ ಯಾರೆ ತಪ್ಪು ಮಾಡಿದ್ರು ಕಠಿಣ ಶಿಕ್ಷೆ ಆಗಬೇಕು ಅಂತ ಹೇಳಿದ್ದಾರೆ.

ಘಟನೆಯಿಂದ ಮಗು ತಲೆಗೆ ಏಟಾಗಿದೆ. ಅದಕ್ಕೆ ಮೊದಲ ಆದ್ಯತೆ ಚಿಕಿತ್ಸೆ ನೀಡಲಾಗುತ್ತಿದೆ. ಅಲ್ಲದೇ ಪೊಲೀಸ್ರು ಪ್ರಕರಣವನ್ನು ಪಡೆದುಕೊಂಡು ತನಿಖೆ ಮಾಡುತ್ತಿದ್ದಾರೆ. ಪ್ರಕರಣದ ತನಿಖೆಯನ್ನು ಪೊಲೀಸರು ಸೀರಿಯಸ್ ಆಗಿ ಮಾಡಿ ಕೋರ್ಟ್‍ಗೆ ನೀಡ್ತಾರೆ. ಪೊಲೀಸ್ರಿಗೆ ಸಹಕಾರ ನೀಡಬೇಕು. ಸಮಾಜ ಇಂತಹವರ ವಿರುದ್ಧ ಒಟ್ಟಾಗಿ ಶಿಕ್ಷೆ ನೀಡಬೇಕು. ಇದು ಸಮಾಜ ಸಹಿಸಲಾಗದ ಪ್ರಕರಣವಾಗಿದೆ. ಇಂತಹ ಕೃತ್ಯವೆಸಗಿದ್ದಾರೆ ಅವರಿಗೆ ಶಿಕ್ಷೆ ನೀಡಬೇಕಿದೆ. ಈ ಬಗ್ಗೆ ಕಮಿಷನರ್ ಮತ್ತು ಡಿಸಿಪಿ ಜತೆ ಮಾತನಾಡಿದ್ದೇನೆ ಅಂತಾ ಜಾರ್ಜ್ ತಿಳಿಸಿದ್ದಾರೆ.

ಒಟ್ಟಿನಲ್ಲಿ ಪ್ರಕರಣ ದಾಖಲಿಸಿಕೊಂಡಿರೋ ಕೆಜಿ ಹಳ್ಳಿ ಪೊಲೀಸರು ಕಾಮುಕರಿಗಾಗಿ ಬಲೆ ಬೀಸಿದ್ದಾರೆ.

Comments

Leave a Reply

Your email address will not be published. Required fields are marked *