ಗಣಪತಿ ವಿಸರ್ಜನೆ ವೇಳೆ 13ರ ಬಾಲಕ ಕೆರೆಗೆ ಬಿದ್ದು ದುರ್ಮರಣ

– ದಾವಣಗೆರೆಯಲ್ಲಿ ವಿದ್ಯುತ್ ತಂತಿ ತಗುಲಿ ಯುವಕ ಸಾವು

ಮಡಿಕೇರಿ/ದಾವಣಗೆರೆ: ಗಣಪತಿ ವಿಸರ್ಜನೆ ಕೆರೆಗೆ ಹೋಗಿದ್ದ 13 ವರ್ಷದ ಬಾಲಕನೊಬ್ಬ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಕೊಡಗು ಜಿಲ್ಲೆಯ ಕುಶಾಲನಗರ ಸಮೀಪದ ಸಿದ್ಧಲಿಂಗಪುರದ ಅರಶಿನಕುಪ್ಪೆಯಲ್ಲಿ ನಡೆದಿದೆ.

ಅನಂತಕುಮಾರ್ ಹಾಗೂ ಪದ್ಮ ದಂಪತಿಯ ಎರಡನೇ ಪುತ್ರ ಹೇಮಂತ್ (13) ಮೃತ ಬಾಲಕ. ಹೇಮಂತ್ ಸಿದ್ಧಲಿಂಗಪುರದ ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ. ಇಂದು 12 ಜನ ಬಾಲಕರ ತಂಡವು ಗಣಪತಿ ವಿಸರ್ಜನೆಗೆ ಕೆರೆಗೆ ತೆರಳಿದ್ದರು. ವಿಸರ್ಜನೆ ವೇಳೆ ಹೇಮಂತ್ ನೀರು ಪಾಲಾಗಿದ್ದಾನೆ. ಈ ಕುರಿತು ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಮುಸ್ಟೂರು ಗ್ರಾಮದ ವ್ಯಕ್ತಿಯೊಬ್ಬರು ಪೆಂಡಾಲ್ ಗೆ ವಿದ್ಯುತ್ ಸಂಪರ್ಕ ಕಲ್ಪಿಸುವಾಗ ವಿದ್ಯುತ್ ತಂತಿ ತಗುಲಿ ಸ್ಥಳದಲ್ಲಿ ಮೃತಪಟ್ಟಿದ್ದಾರೆ. ತಿಪ್ಪೇಸ್ವಾಮಿ (26) ಮೃತ ದುರ್ದೈವಿ. ಮೃತ ತಿಪ್ಪೇಸ್ವಾಮಿ ಮುಸ್ಟೂರು ಗ್ರಾಮದಲ್ಲಿ ಪ್ರತಿಷ್ಠಾಪಿಸಿದ್ದ ಸಾರ್ವಜನಿಕ ಗಣಪತಿ ಮಂಟಪ ಅಲಂಕರಿಸುತ್ತಿದ್ದರು. ಆಗ ಪೆಂಡಾಲ್ ಗೆ ಸೀರಿಯಲ್ ಸೆಟ್ ಹಾಕುವಾಗ ವಿದ್ಯುತ್ ತಗುಲಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಈ ಕುರಿತು ಜಗಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *