ನನ್ನ, ಆನಂದ್ ಸಿಂಗ್ ಗಲಾಟೆಯಿಂದ ಮೂರನೇಯವರಿಗೆ ಲಾಭ: ಕಂಪ್ಲಿ ಗಣೇಶ್

ಬಳ್ಳಾರಿ: ನನ್ನ ಅಮಾನತು ವಾಪಸ್ ಪಡೆಯೋದು ಕಾಂಗ್ರೆಸ್ ಪಕ್ಷಕ್ಕೆ ಬಿಟ್ಟಿದ್ದು, ಒಂದು ವೇಳೆ ಅಮಾನತು ವಾಪಸ್ ಪಡೆಯದಿದ್ದರೆ ಕ್ಷೇತ್ರದ ಮುಖಂಡರ, ಕಾರ್ಯಕರ್ತರ ಮತ್ತು ಜನರ ನಿರ್ಧಾರಕ್ಕೆ ಬದ್ಧ ಎಂದು ಹೇಳುವ ಶಾಸಕ ಜೆ.ಎನ್.ಗಣೇಶ್ ಹೊಸಬಾಂಬ್ ಸಿಡಿಸಿದ್ದಾರೆ. ಅಲ್ಲದೇ ನನ್ನ ಹಾಗೂ ಆನಂದ್ ಸಿಂಗ್ ಗಲಾಟೆಯಿಂದ ಮೂರನೇಯವರಿಗೆ ಲಾಭ ಆಗಿದೆ ಎಂದು ಹೇಳಿದ್ದಾರೆ.

ಕಂಪ್ಲಿ ತಾಲೂಕಿನ ರಾಮಸಾಗರ ಗ್ರಾಮದ 4ನೇ ವಾರ್ಡಿನಲ್ಲಿಂದು ಅಂಗನವಾಡಿ ಕೇಂದ್ರದ ಕಟ್ಟಡ ಉದ್ಘಾಟಿಸಿ ಮಾತನಾಡಿದ ಶಾಸಕ ಗಣೇಶ್, ಲೋಕಸಭಾ ಚುನಾವಣೆಯಲ್ಲಿ ದೂರ ಉಳಿದಿದ್ದಾಗ ಕಂಪ್ಲಿ ಕ್ಷೇತ್ರದಲ್ಲಿ ಮತದಾರರು ಕಾಂಗ್ರೆಸ್‍ಗೆ ಲೀಡ್ ಕೊಟ್ಟಿದ್ದಾರೆ. ನಮ್ಮ ಬಗ್ಗೆ ಏನೇ ಹೇಳಿದ್ದರೂ ಚುನಾವಣೆ ಸಂದರ್ಭದಲ್ಲಿ ಮತದಾರರು ನಮ್ಮ ಕೈಹಿಡಿದಿದ್ದಾರೆ. ಹೀಗಾಗಿ ಕಂಪ್ಲಿ ಕ್ಷೇತ್ರದ ಜನರ ಋಣ ತೀರಿಸಬೇಕಾಗಿದೆ ಎಂದರು. ಇದನ್ನೂ ಓದಿ: ಈಗಲ್ಟನ್ ರೆಸಾರ್ಟಿನಲ್ಲಿ ರಾತ್ರಿ ನಡೆದಿದ್ದೇನು? ಎಳೆ ಎಳೆಯಾಗಿ ಬಿಚ್ಚಿಟ್ಟ ಶಾಸಕ ಗಣೇಶ್

ನಾವು ಕ್ಷೇತ್ರದಲ್ಲಿ ಇಲ್ಲದೇ ಇದ್ದರೂ ಕಾಂಗ್ರೆಸ್‍ಗೆ ಲೀಡ್ ನೀಡುವ ಮೂಲಕ ಕಂಪ್ಲಿ ಕ್ಷೇತ್ರದಲ್ಲಿ ಮತದಾರರು ಶ್ರಮವಹಿಸಿದ್ದಾರೆ. ಶಾಸಕ ಆನಂದ್ ಸಿಂಗ್ ಹಾಗೂ ನಾನು 25 ವರ್ಷಗಳಿಂದ ಅಣ್ಣ ತಮ್ಮಂದಿರಂತೆ ಇದ್ದೇವೆ. ಆದರೆ ಯಾವುದೋ ಒಂದು ಕೆಟ್ಟ ಗಳಿಗೆಯಿಂದ ಗಲಾಟೆ ನಡೆದಿದೆ. ಈಗಲೂ ಆನಂದ್ ಸಿಂಗ್ ಅವರ ಜೊತೆ ಸಂಪರ್ಕದಲ್ಲಿದ್ದೇವೆ. ಈಗಲ್ ಟನ್ ರೆಸಾರ್ಟ್ ನಲ್ಲಿ ಮೂರನೇ ವ್ಯಕ್ತಿಯ ಲಾಭಕ್ಕಾಗಿ ಗಲಾಟೆ ನಡೆದಿದೆ ಎನ್ನುವುದು ನನ್ನ ಅನಿಸಿಕೆ ಎಂದು ಹೇಳಿದ್ದಾರೆ.

ಅಮಾನತನ್ನು ವಾಪಸ್ ಪಡೆಯುವಂತೆ ನಾನು ಕೇಳುವುದಿಲ್ಲ. ಅಮಾನತು ವಾಪಸ್ ವಿಷಯ ಕಾಂಗ್ರೆಸ್ ಪಕ್ಷಕ್ಕೆ ಬಿಟ್ಟಿದ್ದು. ಇದೇ ಅಮಾನತು ಮುಂದುವರಿದರೆ, ಹಿರಿಯರ, ಕಾರ್ಯಕರ್ತರ ಹಾಗೂ ಕ್ಷೇತ್ರ ಜನರ ಮುಂದಿನ ನಿರ್ಧಾರಕ್ಕೆ ಬದ್ಧರಾಗಿರುವೆ. ಕ್ಷೇತ್ರದ ಅಭಿವೃದ್ಧಿಗೆ ಮೊದಲ ಆಧ್ಯತೆ ನೀಡಲಾಗುವುದು ಎಂದು ಪರೋಕ್ಷವಾಗಿ ಕಾಂಗ್ರೆಸ್‍ಗೆ ಟಾಂಗ್ ನೀಡಿದರು.

Comments

Leave a Reply

Your email address will not be published. Required fields are marked *