‘ನಾನು ಸುಮಲತಾಗೆ ಮತ ಹಾಕೋದು’ – ಗಡ್ಡಪ್ಪ ಭೇಟಿ ಮಾಡಿದ್ರು ಚಾಲೆಂಜಿಂಗ್ ಸ್ಟಾರ್ ದರ್ಶನ್!

ಮಂಡ್ಯ: ಲೋಕಸಭಾ ಕ್ಷೇತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಬ್ಬರದ ಪ್ರಚಾರ ಮುಂದುವರಿಸಿದ್ದು, ಇಂದು ತಿಥಿ ಸಿನಿಮಾದ ನಟ ಗಡ್ಡಪ್ಪರನ್ನು ಭೇಟಿ ಮಾಡಿದರು.

ಹೌದು. ನೊದೆಕೊಪ್ಪಲು ಗ್ರಾಮದಲ್ಲಿ ಗಡ್ಡಪ್ಪರನ್ನು ಭೇಟಿ ಮಾಡಿದ ನಟ, ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಗೆ ಮತ ಹಾಕುವಂತೆ ಮನವಿ ಮಾಡಿಕೊಂಡರು. ಅಲ್ಲದೆ ನೀವೇ ಸ್ಟಾರ್ ಎಂದು ಈಗ ಯಾವ ಸಿನಿಮಾ ಮಾಡುತ್ತಿದ್ದೀರಿ ಎಂದು ಕೇಳಿದ್ರು. ಜೊತೆಗೆ ಹಾರ ಹಾಕಿ ಸನ್ಮಾನ ಮಾಡಿದ್ರು.

ದರ್ಶನ್ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಗಡ್ಡಪ್ಪ, ದರ್ಶನ್ ಭೇಟಿ ಮಾಡಿದ್ದು ಬಹಳ ಸಂತೋಷ ತಂದಿದೆ. ಸುಮಲತಾ ಪರ ಮತ ಹಾಕಲು ದರ್ಶನ್ ಹೇಳಿದ್ರು. ನಾನು ಸುಮಲತಾ ಅವರಿಗೇ ಮತ ಹಾಕೋದು. ನಮ್ಮೂರಲ್ಲಿ ಮುಕ್ಕಾಲು ಭಾಗ ಸುಮಲತಾರಿಗೆ ಮತ ಹಾಕುತ್ತಾರೆ. ಉಪೇಂದ್ರ ಕೂಡ ನಮ್ಮೂರಿಗೆ ಬಂದಿದ್ದರು. ಆಗ ಅವರು ಕೂಡ ಮತ ಹಾಕುವಂತೆ ಕೇಳಿಕೊಂಡಿದ್ದರು. ಆದ್ರೆ ನಾವೆಲ್ಲ ಸುಮಲತಾರಿಗೆ ವೋಟು ಹಾಕೋದು ಅಂದ್ರು.

ಒಟ್ಟಿನಲ್ಲಿ ಪ್ರಚಾರಕ್ಕೆ ನಾಲ್ಕು ದಿನ ಬಾಕಿ ಇರುವಂತೆ ದರ್ಶನ್ ಅವರು ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಅಬ್ಬರದ ಪ್ರಚಾರ ಮುಂದುವರಿಸಿದ್ದಾರೆ. ಶ್ರೀರಂಗಪಟ್ಟಣ ತಾಲೂಕಿನ ರಾಗಿಮುದ್ದನಹಳ್ಳಿ, ಯಲಿಯೂರು, ಕೊತ್ತತ್ತಿ, ತಗ್ಗಹಳ್ಳಿ, ಕಿರಗಂದೂರು ಸೇರಿದಂತೆ 35 ಹಳ್ಳಿಗಳಲ್ಲಿ ದಚ್ಚು ರೋಡ್ ಶೋ ಕೈಗೊಂಡಿದ್ದಾರೆ. ಈ ವೇಳೆ ನೊದೆಕೊಪ್ಪಲು ಗ್ರಾಮದಲ್ಲಿ ತಿಥಿ ಸಿನಿಮಾ ಖ್ಯಾತಿಯ ಗಡ್ಡಪ್ಪರನ್ನು ನಟ ಭೇಟಿ ಮಾಡಿದ್ರು.

ಇತ್ತ ಎರಡು ದಿನಗಳ ಶೂಟಿಂಗ್ ವಿರಾಮ ಬಳಿಕ ರಾಕಿಂಗ್ ಸ್ಟಾರ್ ಯಶ್ ಮತ್ತೆ ಮಂಡ್ಯ ಅಖಾಡಕ್ಕೆ ಎಂಟ್ರಿ ಕೊಟ್ಟಿದ್ದಾರೆ. ನಾಗಮಂಗಲ ತಾಲೂಕಿನ ಕೀಳಘಟ್ಟ, ಚಿಕ್ಕೋನಹಳ್ಳಿ, ಕೊಪ್ಪ, ಹೊಸಗಾವಿ, ದೇವಲಾಪುರ ಸೇರಿದಂತೆ 20 ಹಳ್ಳಿಗಳಲ್ಲಿ ಯಶ್ ಭರ್ಜರಿ ರೋಡ್ ಶೋ ಕೈಗೊಂಡಿದ್ದಾರೆ. ರಾತ್ರಿ ಬಂದು ತಟ್ಟುವವರನ್ನ ಸೇರಿಸಬೇಡಿ, ನಾವು ಹಗಲು ನಿಮ್ಮ ಮನಮುಟ್ಟೋ ಕೆಲಸ ಮಾಡ್ತಿದ್ದೀವಿ. ದಯವಿಟ್ಟು ಆಶೀರ್ವಾದ ಮಾಡಿ ಎಂದು ಜೆಡಿಎಸ್-ಕಾಂಗ್ರೆಸ್ ಮೈತ್ರಿ ಅಭ್ಯರ್ಥಿಗೆ ಯಶ್ ಟಾಂಗ್ ಕೊಟ್ರು.

Comments

Leave a Reply

Your email address will not be published. Required fields are marked *