ಬೈಕ್‍ಗೆ ಲಾರಿ ಡಿಕ್ಕಿ – ಗುರುತು ಸಿಗದಂತೆ ಅಪ್ಪಚ್ಚಿಯಾದ ಸವಾರರು

ಗದಗ: ಬೈಕ್‍ಗೆ ಹಿಂಬದಿಯಿಂದ ಲಾರಿ ಡಿಕ್ಕಿ ಹೊಡೆದು ಸವಾರರಿಬ್ಬರು ಸ್ಥಳದಲ್ಲೆ ಸಾವನ್ನಪ್ಪಿರುವ ಘಟನೆ ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಕೊರ್ಲಹಳ್ಳಿ ಬಳಿ ನಡೆದಿದೆ.

ಮೃತರನ್ನು 27 ವರ್ಷದ ನಾಗರಾಜ್ ಹಾಗೂ 40 ವರ್ಷದ ಲಕ್ಷ್ಮಿಬಾಯಿ ಎಂದು ಗುರುತಿಸಲಾಗಿದೆ. ಮೃತ ನಾಗರಾಜ್ ಹೂವಿನ ಹಡಗಲಿ ತಾಲೂಕಿನ ನವಲಿ ಗ್ರಾಮದವರಾಗಿದ್ದು, ಲಕ್ಷ್ಮೀಬಾಯಿ ಸೋಗಿತಾಂಡ ಗ್ರಾಮದವರಾಗಿದ್ದಾರೆ. ನಾಗರಾಜ್ ಮುಂಡರಗಿ ನೀರಾವರಿ ಇಲಾಖೆಯಲ್ಲಿ ನೌಕರನಾಗಿದ್ದು, ಕರ್ತವ್ಯಕ್ಕೆ ಬರುತ್ತಿದ್ದರು ಎಂದು ತಿಳಿದು ಬಂದಿದೆ.

ಕೆಲಸಕ್ಕೆ ಬರುತ್ತಿದ್ದ ನಾಗರಾಜ್‍ನನ್ನು ಲಕ್ಷ್ಮಿಬಾಯಿ ಬನ್ನಿಕೊಪ್ಪ ದೇವರಿಗೆ ಹೋಗಬೇಕು ಎಂದು ಡ್ರಾಪ್ ಕೇಳಿದ್ದಾರೆ. ಇಬ್ಬರು ಬರುವ ವೇಳೆ ಲಾರಿ ಚಾಲಕ ಹಿಂಬದಿಯಿಂದ ಡಿಕ್ಕಿ ಹೊಡೆದು ಲಾರಿ ಸಮೇತ ಪರಾರಿಯಾಗಿದ್ದಾನೆ. ಪರಿಣಾಮ ಬೈಕ್ ಸವಾರರಿಬ್ಬರು ಗುರುತು ಸಿಗದಂತೆ ಅಪ್ಪಚ್ಚಿಯಾಗಿ ಕೈ, ಕಾಲುಗಳೆಲ್ಲಾ ಪೀಸ್ ಪೀಸ್ ಆಗಿವೆ.

ಸ್ಥಳಕ್ಕೆ ಮುಂಡರಗಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಪರಾರಿಯಾದ ಲಾರಿ ಚಾಲಕನ ಪತ್ತೆಗೆ ಬಲೆ ಬೀಸಿದ್ದಾರೆ. ಈ ಸಂಬಂಧ ಗದಗ ಜಿಲ್ಲೆ ಮುಂಡರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments

Leave a Reply

Your email address will not be published. Required fields are marked *