ಎಪಿಎಂಸಿನಲ್ಲಿ ಖರೀದಿದಾರರಿಂದ ರೈತರಿಗೆ ಮಕ್ಮಲ್ ಟೋಪಿ

ಗದಗ: ಒಣ ಮೆಣಸಿನಕಾಯಿ ಖರೀದಿಯಲ್ಲಿ ಗೋಲ್ಮಾಲ್ ನಡೆದಿದೆ ಎಂದು ಆರೋಪಿಸಿ ಗದಗ ಎಪಿಎಂಸಿನಲ್ಲಿ ರೈತರು ರಾತ್ರಿ ಗಲಾಟೆ ಮಾಡಿದ್ದಾರೆ. ಇ-ಟೆಂಡರ್‍ನ ಬೆಲೆಗಿಂತ ಕಡಿಮೆ ಬೆಲೆ ನೀಡಲು ಖರೀದಿದಾರರು ಮುಂದಾಗಿದ್ದಾರೆ ಎಂದು ರೈತರು ಆರೋಪಿಸಿದ್ದಾರೆ.

ಗದಗ ಜಿಲ್ಲೆ ರೋಣ ತಾಲೂಕಿನ ಚಿಕ್ಕಮಣ್ಣೂರು ಗ್ರಾಮದ ಬಸವಲಿಂಗಪ್ಪ ಮೇಟಿ ಎಂಬ ರೈತನಿಗೆ ಖರೀದಾರನಿಂದ ಮೋಸವಾಗಿದೆ. ಇ-ಟೆಂಡರ್‍ನಲ್ಲಿ ಒಂದು ಕ್ವಿಂಟಾಲ್‍ಗೆ 13,175 ರೂ. ಆಗಿದೆ. ಆದರೆ ಕೇವಲ 12,170 ರೂಪಾಯಿ ಹಣ ನೀಡಲು ಬಂದಿದ್ದಾರೆ. ಅದೇ ರೀತಿ ಮತ್ತೊಂದು ಲಾಟ್ ನಲ್ಲಿ 11,250 ಇ-ಟೆಂಡರ್ ಬೆಲೆಯಾಗಿದೆ. ಆದರೆ ಖರೀದಿದಾರ ಕೇವಲ 7,200 ರೂಪಾಯಿ ಹಣವನ್ನ ರೈತನಿಗೆ ನೀಡಲು ಬಂದಿದ್ದರು. ಅದು ಇ-ಟೆಂಡರ್ ಪ್ರಿಂಟೆಡ್ ಚೀಟಿ ಆಗಿರಲಿಲ್ಲ. ತಾವೇ ಕೈನಲ್ಲಿ ಬರೆದುಕೊಂಡು ಬಂದ ಚೀಟಿಯಾಗಿತ್ತು. ಆಗ ರೈತನಿಗೆ ಅನುಮಾನ ಬಂದು ಪರಿಶೀಲನೆ ನಡೆಸಿದಾಗ, ಗೋಲ್ಮಾಲ್ ಪ್ರಕರಣ ಬೆಳಕಿಗೆ ಬಂದಿದೆ. ಈ ವೇಳೆ ಮೆಣಸಿನಕಾಯಿ ಮಾಲೀಕ ಹಾಗೂ ಖರೀದಿದಾರ ನಡುವೆ ಮಾತಿನ ಚಕಮಕಿ ನಡೆದಿದೆ. ಟೆಂಡರ್ ಆದ ಬೆಲೆಯ ಪಟ್ಟಿಯನ್ನ ಅಥವಾ ರಸೀದಿ ನೀಡುವಂತೆ ರೈತರ ಆಗ್ರಹವಾಗಿದೆ.

ಗದಗ ಎಪಿಎಂಸಿನಲ್ಲಿ ಹಗಲು ದರೋಡೆ ನಡೆಯುತ್ತಿದೆ. ಟೆಂಡರ್‍ನಲ್ಲಿ ಆದ ಬೆಲೆಯೇ ಬೇರೆಯಾಗಿರುತ್ತದೆ. ನಂತರ ರೈತರಿಗೆ ನೀಡುವ ಪಟ್ಟಿಯೇ ಬೇರೆಯಾಗಿರುತ್ತದೆ. ಅದಕ್ಕೆ ಸರಿಯಾದ ದಾಖಲೆ ನೀಡುವುದಿಲ್ಲ. ಜೊತೆಗೆ ತೂಕದಲ್ಲೂ ಗೋಲ್ಮಾಲ್ ಮಾಡುತ್ತಾರೆ. ಒಂದು ಚೀಲ 35 ಕೆ.ಜಿ ತೂಕಕ್ಕಿಂತ ಕಡಿಮೆ ಬಂದರೆ ಒಂದೂವರೆ ಕೆಜಿ ನಷ್ಟು ತೂಕ ಲೆಸ್ ಮಾಡುತ್ತಾರೆ. ಆಕಸ್ಮಾತ್ ಒಂದು ಚೀಲ 35 ಕೆ.ಜಿಗೂ ಮೇಲ್ಪಟ್ಟರೆ ಎರಡು ಕೆಜಿಯಷ್ಟು ಕಡಿತಗೊಳಿಸ್ತಾರೆ. ಇ-ಟೆಂಡರ್ ಆದ್ರೂ ನ್ಯಾಯಯುತ ಬೆಲೆಸಿಗುತ್ತಿಲ್ಲ. ಹೊರಗಿನ ಜಿಲ್ಲೆಯ ಖರೀದಿದಾರರಿಗೆ ಈ ಎಪಿಎಂಸಿನಲ್ಲಿ ಖರೀದಿ ಮಾಡಲು ಅನುಮತಿ ನೀಡ್ತಿಲ್ಲ. ಇದರಿಂದ ನಮಗೆ ಅನ್ಯಾಯವಾಗ್ತಿದೆ ಎಂದು ರೈತರು ಆರೋಪಿಸಿದ್ದಾರೆ.

ರಾತ್ರಿಯಾದ್ರೂ ಸಹ ರೈತರು ಅಂಗಡಿಗಳ ಮುಂದೆ ಗಲಾಟೆಗೆ ಮುಂದಾದರು. ನಂತರ ಬೆಟಗೇರಿ ಬಡಾವಣೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಸ್ಥಿತಿ ತಿಳಿಗೊಳಿಸಲು ಮುಂದಾದರು.

Comments

Leave a Reply

Your email address will not be published. Required fields are marked *