ಯಾವುದೇ ವಿಧಿವಿಧಾನವಿಲ್ಲದೇ ಅಂತ್ಯಕ್ರಿಯೆ: ಚಿಮೂ ಪುತ್ರ

ಬೆಂಗಳೂರು: ಹಿರಿಯ ಸಂಶೋಧಕ, ಕನ್ನಡ ಭಾಷೆ, ಗಡಿನಾಡಿನ ಬಗ್ಗೆ ಹೆಚ್ಚು ಸಂಶೋಧನೆ ಮಾಡಿದ್ದ ಚಿದಾನಂದ ಮೂರ್ತಿ ಅವರು ಶನಿವಾರ ಬೆಳಗ್ಗೆ 4 ಗಂಟೆ ಸುಮಾರಿಗೆ ಖಾಸಗಿ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ.

ಭಾನುವಾರ 11 ಗಂಟೆ ನಂತರ ಅವರ ಅಂತ್ಯಸಂಸ್ಕಾರ ನಡೆಯಲಿದೆ. ಆದರೆ ಅವರ ಕುಟುಂಬ ತೆಗೆದುಕೊಂಡ ನಿರ್ಧಾರ ಎಲ್ಲರಿಗೂ ಕುತೂಹಲ ಮೂಡಿಸಿದೆ.

ಮಾಧ್ಯಮಕ್ಕೆ ಮಾಹಿತಿ ನೀಡಿದ ಚಿಮೂ ಪುತ್ರ ವಿನಯ್ ಕುಮಾರ್, ನಮ್ಮ ತಂದೆ ನಿಧನರಾಗಿದ್ದು ಕೇವಲ ಸಂಸಾರದ ನಷ್ಟವಲ್ಲ. ರಾಷ್ಟ್ರದ ನಷ್ಟ. ಚಿದಾನಂದಮೂರ್ತಿ ನಮ್ಮ ದೇಶದ ಆಸ್ತಿ. ಕರ್ನಾಟಕ, ಕನ್ನಡ ಅದನ್ನು ಮೀರಿ ಭಾರತಿಯರಾಗಬೇಕು ಎನ್ನುವುದನ್ನು ಯಾವಾಗಲೂ ಹೇಳುತ್ತಿದ್ದರು. ಮಾತೃಭಾಷೆಯನ್ನು ಯಾರೂ ಬಿಡಬಾರದು ಎನ್ನುವುದು ಅವರ ಆಸೆಯಾಗಿತ್ತು. ಅವರ ಕಡೆ ಆಸೆಯಂತೆ ಅವರ ವಿಧಿವಿಧಾನ ನಡೆಸಲಾಗುತ್ತೆ ಎಂದರು.

ವೀರಶೈವರಾದರೂ ನಮ್ಮ ತಂದೆಯಾಗಲಿ ನಾವಾಗಲಿ ವಿಭೂತಿ ಸಹ ಹಚ್ಚಿರಲಿಲ್ಲ. ಅವರು ಸಹ ಹಾಗೆ ಬದುಕಿದ್ದರು. ಪೂಜೆ ಸಹ ಅವರು ಮಾಡುತ್ತಿರಲಿಲ್ಲ. ಕುಟುಂಬದಿಂದ ಪೂಜೆ ಎಂದು ಮಾಡಲ್ಲ. ಲಿಂಗಾಯತರಲ್ಲಿ ಹೂಳುವ ಪದ್ಧತಿ ಇದೆ ಯಾಕೆ ಸುಡುತ್ತೀರ ಎಂದು ಹಲವರು ಪ್ರಶ್ನಿಸುತ್ತಿದ್ದಾರೆ. ಆದರೆ ಅವರ ಆಸೆಯನ್ನು ನಾವು ನೆರವೇರಿಸಬೇಕಿದೆ. ಯಾವುದೇ ವಿಧಾನವನ್ನೂ ಅನುಸರಿಸಲ್ಲ. ಪೂಜೆಯನ್ನು ಸಹ ಮಾಡಲ್ಲ. ಸರ್ಕಾರಿ ಗೌರವ ಹೊರತುಪಡಿಸಿ ನಾವೇನೂ ವಿಧಾನವನ್ನು ಅನುಸರಿಸಲ್ಲ. ಹೂಳುವ ಪದ್ಧತಿ ಇದ್ರೂ ನಮ್ಮ ತಂದೆಯ ಇಚ್ಛೆಯಂತೆ ಸುಮ್ಮನಹಳ್ಳಿ ವಿದ್ಯುತ್ ಚಿತಾಗಾರದಲ್ಲಿ ಅವರ ಅಂತ್ಯಸಂಸ್ಕಾರ ನಡೆಸುವ ತೀರ್ಮಾನವನ್ನು ನಾವು ಮಾಡಿದ್ದೇವೆ ಎಂದು ಹೇಳಿದ್ದಾರೆ.

Comments

Leave a Reply

Your email address will not be published. Required fields are marked *