ಸಿಗರೇಟ್ ತರಲ್ಲ ಅಂದಿದ್ದಕ್ಕೆ ಚಾಕುವಿನಿಂದ ಇರಿದು ಗೆಳೆಯನನ್ನು ಕೊಂದೇ ಬಿಟ್ರು!

ಬೆಂಗಳೂರು: ಸಿಗರೇಟ್ ತರಲ್ಲ ಅಂತಾ ಹೇಳಿದಕ್ಕೆ ಗೆಳೆಯನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ನಗರದ ಹಳೆ ಬಾಗಲೂರು ಲೇಔಟ್ ನಲ್ಲಿ ಶನಿವಾರ ತಡರಾತ್ರಿ ನಡೆದಿದೆ.

ಮೊಹಮ್ಮದ್ ಅಲಿ (30) ಸ್ನೇಹಿತರಿಂದಲೇ ಕೊಲೆಯಾದ ವ್ಯಕ್ತಿ. ಕೆಲ ವರ್ಷಗಳ ಹಿಂದೆ ಆಟೋ ಚಾಲಕನಾಗಿ ಕೆಲಸ ಮಾಡುತ್ತಿದ್ದ ಮೊಹಮ್ಮದ್ ತನ್ನ ಹಳೆಯ ಗೆಳೆಯರಾದ ವಾಹಿದ್, ಮುಜಾಮಿಲ್ ಮತ್ತು ಸಬಾರಕ್ ಎಂಬವರನ್ನು ಶನಿವಾರ ರಾತ್ರಿ ಭೇಟಿಯಾಗಿದ್ದರು.

ಎಲ್ಲರೂ ಒಂದೆಡೆ ಸೇರಿ ಪಾರ್ಟಿ ಮಾಡಿದ್ದಾರೆ. ಈ ವೇಳೆ ಮೊಹಮ್ಮದ್‍ಗೆ ಗೆಳೆಯರು ಸಿಗರೇಟ್ ತರಲು ಹೇಳಿದ್ದಾರೆ. ಸಿಗರೇಟ್ ತರಲು ಮೊಹಮ್ಮದ್ ಒಪ್ಪದೇ ಇದ್ದಾಗ ಗೆಳೆಯರ ನಡುವೆ ಮಾತಿನ ಚಕಮಕಿ ನಡೆದಿದೆ. ಇದರಿಂದ ಕೋಪಗೊಂಡ ಸ್ನೇಹಿತರು ಮೊಹಮ್ಮದ್‍ಗೆ ಚಾಕುವಿನಿಂದ ಇರಿದಿದ್ದಾರೆ.

ಮೊಹಮ್ಮದ್ ಕೂಗಾಟ ಕೇಳಿದ ಸ್ಥಳೀಯರು ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಬೆಳಗಿನ ಜಾವ 4 ಗಂಟೆಗೆ ಮೊಹಮ್ಮದ್ ಅಲಿ ಸಾವನ್ನಪ್ಪಿದ್ದಾರೆ. ಘಟನೆಯ ನಂತರ ಆಟೋ ಡ್ರೈವರ್‍ಗಳಾದ ವಾಹಿದ್, ಮುಜಾಮಿಲ್, ಸಬಾರಕ್ ನಾಪತ್ತೆಯಾಗಿದ್ದಾರೆ. ಈ ಸಂಬಂಧ ಕೆ.ಜಿ.ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments

Leave a Reply

Your email address will not be published. Required fields are marked *