ಕೇವಲ 500 ರೂ.ಗೆ ಸ್ನೇಹಿತನ ಪತ್ನಿಯನ್ನೇ ಹೊತ್ತೊಯ್ದ ಭೂಪ!

ಬೆಳಗಾವಿ: ಕೇವಲ 500 ರೂಪಾಯಿ ಹಣ ವಾಪಸ್ ಕೊಡಲಿಲ್ಲ ಎಂಬ ಕಾರಣಕ್ಕೆ ಸ್ನೇಹಿತನ ಪತ್ನಿಯನ್ನೇ ಹೊತ್ತುಕೊಂಡು ಹೋಗಿ ಮದುವೆಯಾಗಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

ಬಸವರಾಜ್ ಕೊನನ್ನವರ್ ನೊಂದ ಪತಿ. ರಮೇಶ್ ಹುಕ್ಕೇರಿ ಸ್ನೇಹಿತನ ಪತ್ನಿಯನ್ನೇ ಹೊತ್ತುಕೊಂಡು ಹೋಗಿ ಮದುವೆಯಾಗಿರುವ ಸಾಲ ಕೊಟ್ಟ ಸ್ನೇಹಿತ. ಬೈಲಹೊಂಗಲ ತಾಲೂಕಿನ ಮುರಕಿಬಾವಿ ನಿವಾಸಿ ಬಸವರಾಜ್ ಕೋನನ್ನವರ್ 2011ರಲ್ಲಿ ಮೀನಾಕ್ಷಿ (ಹೆಸರು ಬದಲಾಯಿಸಲಾಗಿದೆ)ಯನ್ನು ಮದುವೆಯಾಗಿದ್ದರು. ಕೆಲ ವರ್ಷಗಳ ಹಿಂದೆ ಬೆಳಗಾವಿಗೆ ಬಂದು ಖಡೇ ಬಜಾರ್ ಬಳಿ ಹೋಟೆಲ್ ವೊಂದರಲ್ಲಿ ಕೆಲಸ ಮಾಡಿಕೊಂಡು ಇದ್ದರು. ಇದೇ ಹೋಟೆಲಿನಲ್ಲಿ ಗೋಕಾಕ್ ತಾಲೂಕಿನ ಮಿಡಕನಟ್ಟಿಯ ರಮೇಶ್ ಹುಕ್ಕೇರಿ ಎಂಬಾತನೂ ಕೆಲಸ ಮಾಡುತ್ತಿದ್ದನು.

ಹೀಗೆ ಇವರಿಬ್ಬರ ನಡುವೆ ಸ್ನೇಹ ಬೆಳೆದು ರಮೇಶ್ ಬಳಿ ಬಸವರಾಜ್ 500 ರೂಪಾಯಿ ಸಾಲ ತಗೊಂಡಿದ್ದರು. ಆದರೆ ತುಂಬಾ ಸಮಯ ಕಳೆದರು ಸಾಲ ವಾಪಸ್ ಕೊಡಲಿಲ್ಲ ಎಂದು ಬಸವರಾಜ್ ಪತ್ನಿಯನ್ನು ಕರೆದೊಕೊಂಡು ಹೋಗಿ ರಮೇಶ್ ಮದುವೆಯಾಗಿದ್ದಾನೆ. ಬಸವರಾಜ್‍ಗೆ ಓರ್ವ ಮಗಳಿದ್ದು, ಪತ್ನಿಗಾಗಿ ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ. ಆದರೆ ಪೊಲೀಸರು ಮಾತ್ರ ದೂರು ದಾಖಲಿಸಿಕೊಳ್ಳದೆ ಸತಾಯಿಸುತ್ತಿದ್ದಾರೆ.

ರಮೇಶ್ ಹುಕ್ಕೇರಿಗೆ ಈಗಾಗಲೇ ಮದುವೆಯಾಗಿದ್ದು, ಪತ್ನಿಯನ್ನು ತವರು ಮನೆಗೆ ಕಳುಹಿಸಿ ಇದೀಗ ಮೀನಾಕ್ಷಿಯ ಜತೆಗೆ ನನ್ನ ಗ್ರಾಮದಲ್ಲಿ ನೆಲೆಸಿದ್ದಾನೆ. ನನ್ನ ಪತ್ನಿಯನ್ನು ವಾಪಸ್ ಕಳುಹಿಸುವಂತೆ ನಾನು ಅನೇಕ ಬಾರಿ ರಮೇಶ್ ಹುಕ್ಕೇರಿಗೆ ಫೋನ್ ಮಾಡಿದ್ದೇನೆ. ಆದರೆ ನನಗೆ ರಮೇಶ್ ಹುಕ್ಕೇರಿ ಅನೇಕ ಬಾರಿ ಅವಾಜ್ ಹಾಕಿದ್ದಾನೆ. ನಿನ್ನ ಪತ್ನಿಯನ್ನು ನಾನು ಮದುವೆಯಾಗಿದ್ದೇನೆ. ಅದೇನು ಮಾಡಿಕೊಳ್ಳುತ್ತೀಯೋ..? ಮಾಡಿಕೋ..? ಎಂದು ಧಮ್ಕಿ ಹಾಕಿದ್ದಾನೆ ಅಂತ ನೊಂದ ಪತಿ ಬಸವರಾಜ್ ಹೇಳಿದ್ದಾರೆ.

ಕೇವಲ 500 ರೂಪಾಯಿಗಾಗಿ ಸ್ನೇಹಿತನೇ ಪತ್ನಿಯನ್ನು ಕರೆದುಕೊಂಡು ಮದುವೆಯಾಗಿದ್ದು. ಪತ್ನಿಯನ್ನು ವಾಪಸ್ ಪಡೆಯಲು ನೊಂದ ಪತಿ ಹೋರಾಟ ಮಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಆದರೆ ಈ ಬಗ್ಗೆ ಪೊಲೀಸರು ದೂರು ದಾಖಲಿಸಲು ನಿರಾಕರಿಸಿದ್ದು, ಪೊಲೀಸರು ನೊಂದ ಪತಿಗೆ ನ್ಯಾಯ ಕೊಡಿಸಬೇಕಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *