ಸಕಲೇಶಪುರದಲ್ಲಿ ಹಾನಿಯಾದ ಪ್ರದೇಶಗಳಿಗೆ ಎಚ್‍ಡಿಡಿ ಭೇಟಿ

– ಸಭೆ ನಡೆಸಿ ಮಾಹಿತಿ ಪಡೆದು ಪ್ರಧಾನಿ ಭೇಟಿ

ಹಾಸನ: ಜಿಲ್ಲೆಯ ಸಕಲೇಶಪುರ ತಾಲೂಕಿನಲ್ಲಿ ಅತಿವೃಷ್ಟಿಯಿಂದ ಹಾನಿಯಾಗಿರುವ ಪ್ರದೇಶಗಳಿಗೆ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ತಾಲೂಕಿನ ಮಾಗೇರಿ, ಹಿಜ್ಜನಹಳ್ಳಿ, ಮಾಗೇರಿ ಮೊದಲಾದ ಗ್ರಾಮಗಳಿಗೆ ಭೇಟಿ ನೀಡಿದ ಗೌಡರು, ಭೂ ಕುಸಿತದಿಂದ ಹಾನಿಯಾಗಿರುವ ಸಕಲೇಶಪುರ-ಸೋಮವಾರಪೇಟೆ ರಸ್ತೆ, ಮಣ್ಣುಪಾಲಾಗಿರುವ ನೂರಾರು ಎಕರೆ ಕಾಫಿ ತೋಟ ಹಾಗೂ ಬಿರುಕು ಬಿಟ್ಟಿರುವ ಮನೆಗಳು ಮತ್ತು ಪರಿಹಾರ ಕೇಂದ್ರದಲ್ಲಿ ಆಶ್ರಯ ಪಡೆದಿರುವ ಸಂತ್ರಸ್ತರನ್ನು ಭೇಟಿ ಮಾಡಿ ನೋವು-ಸಂಕಷ್ಟ ಆಲಿಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಗೌಡರು, ಜಿಲ್ಲೆಯಲ್ಲಿ ಬೆಳೆ ಸೇರಿದಂತೆ ಅಪಾರ ಪ್ರಮಾಣದ ಆಸ್ತಿಪಾಸ್ತಿ ನಷ್ಟವಾಗಿದೆ. ಈ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯಲು ಇದೇ ತಿಂಗಳ 25 ಮತ್ತು 26 ರಂದು ಜಿಲ್ಲೆಯಲ್ಲೇ ಉಳಿದು ನಷ್ಟದ ಎಲ್ಲಾ ಮಾಹಿತಿ ಪಡೆಯುವೆ. ಆಗಸ್ಟ್ 27 ರಂದು ಸಾಧ್ಯವಾದರೆ ಅಧಿಕಾರಿಗಳ ಸಭೆ ನಡೆಸಿ, ಎಲ್ಲಾ ಮಾಹಿತಿ ಪಡೆದ ನಂತರ ಪ್ರಧಾನಿ ಅವರನ್ನೂ ಭೇಟಿಯಾಗುವುದಾಗಿ ಹೇಳಿದರು.

ಸ್ಥಳೀಯ ಸಂಸ್ಥೆ ಚುನಾವಣೆ ನೆಪವೊಡ್ಡಿ ಸಂತ್ರಸ್ಥರ ಪರಿಹಾರ ಕಾರ್ಯಕ್ಕೆ ಯಾರೂ ಹಿಂದೇಟು ಹಾಕಬಾರದು. ಈ ಸಂಬಂಧ ನಾನು ರಾಜ್ಯ ಚುನಾವಣಾ ಆಯೋಗ ಹಾಗೂ ರಾಜ್ಯ ಮುಖ್ಯ ಕಾರ್ಯದರ್ಶಿ ಅವರೊಂದಿಗೆ ಮಾತನಾಡುವೆ. ಇದೇ ರೀತಿ ಕೊಡಗಿನಲ್ಲೂ ಪರಿಹಾರ ಕಾರ್ಯವನ್ನು ಯುದ್ಧೋಪಾದಿಯಲ್ಲಿ ಕೈಗೊಳ್ಳಬೇಕು. ಮೊದಲು ತಾತ್ಕಾಲಿಕ ವ್ಯವಸ್ಥೆ ಮಾಡಬೇಕು. ಈಗಾಗಲೇ ಸಿಎಂ ಹಾಗೂ ಅನೇಕ ಸಚಿವರು ಕೊಡಗಿಗೆ ಭೇಟಿ ನೀಡಿದ್ದಾರೆ ಎಂದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *