ರಾಜಕೀಯ ಅಗ್ನಿಪರೀಕ್ಷೆ, ಮೊಮ್ಮಕ್ಕಳ ಭವಿಷ್ಯ- ಜನ್ಮದಿನದ ನೆಪದಲ್ಲಿ ಗೌಡ್ರ ಕುಟುಂಬ ತಿರುಪತಿಗೆ

ಬೆಂಗಳೂರು: ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ದೇವೇಗೌಡರಿಗಿಂದು 87 ನೇ ವರ್ಷದ ಹುಟ್ಟುಹಬ್ಬ. ಈ ಹಿನ್ನೆಲೆ ದೇವೇಗೌಡರು ಕುಟುಂಬ ಸಮೇತ ತಿರುಪತಿಗೆ ತೆರಳಿದ್ದಾರೆ.

ದೇವೇಗೌಡರ ಕುಟುಂಬ ಶುಕ್ರವಾರ ಸಂಜೆ ವಿಶೇಷ ವಿಮಾನದಲ್ಲಿ ತಿರುಪತಿಗೆ ತೆರಳಿತ್ತು. ದೇವೇಗೌಡರು, ಚೆನ್ನಮ್ಮ, ಸಿಎಂ ಕುಮಾರಸ್ವಾಮಿ, ಹೆಚ್.ಡಿ.ರೇವಣ್ಣ ಸೇರಿದಂತೆ 23 ಜನ ಕುಟುಂಬ ಸದಸ್ಯರು ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ. ಬೆಳಗ್ಗೆ 5 ಗಂಟೆಗೆ ದೇವೇಗೌಡರು ತಿರುಪತಿ ತಿಮ್ಮಪ್ಪನಿಗೆ ಸುಪ್ರಭಾತ ಸೇವೆ ಸಲ್ಲಿಸಿದರು.

ದೇವೇಗೌಡರು ಪ್ರತಿ ಹುಟ್ಟುಹಬ್ಬಕ್ಕೆ ತಿರುಪತಿಗೆ ತೆರಳಿ ಪೂಜೆ ಸಲ್ಲಿಸುತ್ತಾರೆ. ಅದರಲ್ಲೂ ಈ ಬಾರಿ ರಾಜಕೀಯ ಆಗ್ನಿಪರೀಕ್ಷೆ, ಮೊಮ್ಮಕ್ಕಳ ಭವಿಷ್ಯದ ನಿರ್ಧಾರಕ್ಕೆ 5 ದಿನ ಬಾಕಿ ಇರೋದು ವಿಶೇಷವಾಗಿದೆ. ಈ ಹಿನ್ನೆಲೆಯಲ್ಲಿ ತಿಮ್ಮಪ್ಪ ಕಡೆಯ ರಾಜಕೀಯ ಆಟದಲ್ಲಿ ಕಾಪಾಡಪ್ಪ ಎಂದು ದೇವೇಗೌಡರ ಪ್ರಾರ್ಥನೆ ಮಾಡಲಿದ್ದಾರೆ ಎನ್ನಲಾಗಿದೆ.

ದೇವೇಗೌಡರು ಮೇ 18, 1933 ರಂದು ಹಾಸನ ಜಿಲ್ಲೆಯ ಹೊಳೆನರಸಿಪುರ ತಾಲೂಕಿನ ಹರದನಹಳ್ಳಿಯಲ್ಲಿ ಜನಿಸಿದರು. ಸಿವಿಲ್ ಎಂಜಿನಿಯರಿಂಗ್‍ನಲ್ಲಿ ಡಿಪ್ಲೊಮಾ ಪಡೆದ ಬಳಿಕ, ದೇವೇಗೌಡ ಅವರು ಹಾಸನ ತಾಲೂಕಿನ ಮುತ್ತಿಗೆ ಹಿರೇಹಳ್ಳಿಯ ದೇವೇಗೌಡ ಅವರ ಮಗಳು ಚೆನ್ನಮ್ಮ ಅವರನ್ನು 1954ರಲ್ಲಿ ವಿವಾಹವಾದರು. ಈ ದಂಪತಿಗೆ ಇದೀಗ ನಾಲ್ಕು ಗಂಡು ಹಾಗೂ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಜನತಾ ದಳಕ್ಕೆ ರಾಜ್ಯ ಮಟ್ಟದಲ್ಲಿ ಅಧ್ಯಕ್ಷರಾದ ದೇವೇಗೌಡರು 1994 ರಲ್ಲಿ ಕರ್ನಾಟಕ ರಾಜ್ಯದ 14ನೇ ಮುಖ್ಯ ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು.

Comments

Leave a Reply

Your email address will not be published. Required fields are marked *