ಬಜೆಟ್‍ನಲ್ಲಿ ಕಟೀಲ್‍ಗೆ ಸೆಡ್ಡು ಹೊಡೆದ ಸಿಎಂ: ಮಾಜಿ ಸಚಿವ ಸೊರಕೆ

ಉಡುಪಿ: ಬಜೆಟ್‍ನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರಿಗೆ ಸಿಎಂ ಸೆಡ್ಡು ಹೊಡೆದಿದ್ದಾರೆ. ಅಂದು ಎತ್ತಿನಹೊಳೆ ಯೋಜನೆ ವಿರೋಧಿಸಿ ಪ್ರತಿಭಟಿಸಿದ್ದ ನಳೀನ್ ಕುಮಾರ್ ಕಟೀಲ್ ಇಂದು ಬಿಜೆಪಿ ರಾಜ್ಯಾಧ್ಯಕ್ಷರಾಗಿರುವಾಗ ಬಜೆಟ್‍ನಲ್ಲಿ ಯೋಜನೆಗೆ ಬಂಪರ್ ಕೊಡುಗೆ ಕೊಟ್ಟಿದ್ದಾರೆ ಎಂದು ಮಾಜಿ ಸಚಿವ ವಿನಯಕುಮಾರ್ ಸೊರಕೆ ವ್ಯಂಗ್ಯವಾಡಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಳೀನ್ ಕುಮಾರ್ ಕಟೀಲ್ ಅವರ ನೇತೃತ್ವದಲ್ಲೇ ಹಲವು ನೇತ್ರಾವತಿ ತಿರುವು ವಿರುದ್ಧ ಸಾಕಷ್ಟು ಹೋರಾಟಗಳು ನಡೆದಿತ್ತು. ಅದು ಯಡಿಯೂರಪ್ಪನವರಿಗೆ ಗೊತ್ತಿತ್ತು. ಈಗ ಸಮಯ ಬಳಸಿಕೊಂಡು ತನ್ನ ರಾಜ್ಯಾಧ್ಯಕ್ಷರಿಗೆ ಸಿಎಂ ಯಡಿಯೂರಪ್ಪ ನೇರ ಸೆಡ್ಡು ಹೊಡೆದಿದ್ದಾರೆ. ಎತ್ತಿನಹೊಳೆ ಯೋಜನೆಗೆ 1500 ಕೋಟಿ ಬಿಡುಗಡೆ ಮಾಡಿದ್ದಾರೆ ಎಂದು ಸೊರಕೆ ಛೇಡಿಸಿದರು.

ಕೊರೊನಾ ತಡೆಗಟ್ಟುವ ಮುನ್ನೆಚ್ಚರಿಕಾ ಕ್ರಮ ಬಜೆಟ್‍ನಲ್ಲಿ ಇರಲಿಲ್ಲ. ಆರ್ಥಿಕ ಚೇತರಿಕೆ ಕೊಡದ ಬಜೆಟ್ ಮಂಡನೆಯಾಗಿದೆ. ದೇಶ, ವಿಶ್ವ ಚಿಂತಿಸುವಾಗ ಸಿಎಂ ಯಡಿಯೂರಪ್ಪನಿಗೆ ಕೊರೊನಾ ಚಿಂತೆಯೇ ಇಲ್ಲ ಎಂದರು.

ಕರಾವಳಿ ಸಮಸ್ಯೆಯನ್ನು ಸಿಎಂ ಉಲ್ಲೇಖ ಮಾಡಿಲ್ಲ. ಉದ್ಯೋಗ ಸೃಷ್ಟಿಯ ಯಾವುದೇ ಕಾರ್ಯಕ್ರಮ ಇಲ್ಲ. ಯಡಿಯೂರಪ್ಪ ಬಜೆಟ್ ಪುನರುಜ್ಜೀವನ ಕೊಡುವಲ್ಲಿ ವಿಫಲವಾಗಿದೆ. ಯಡಿಯೂರಪ್ಪರದ್ದು ನಿರಾಶಾದಾಯಕ ಬಜೆಟ್. ಕೇಂದ್ರದ ಅನುದಾನ ಬಂದಿಲ್ಲವೆಂದು ಸಿಎಂ ಬಜೆಟ್ ಭಾಷಣದಲ್ಲೇ ಒಪ್ಪಿಕೊಂಡಿರುವುದು ಅವರ ಅಸಹಾಯಕತೆಯ ಪ್ರದರ್ಶನ ಎಂದರು.

Comments

Leave a Reply

Your email address will not be published. Required fields are marked *