ಒಂದೇ ಸಾರಿ 10 ಕೋಟಿ ನೋಡಿದ್ರೆ ನಂಗೆ ಹೃದಯಾಘಾತ ಆಗ್ಬಹುದು: ಸೊಗಡು ಶಿವಣ್ಣ

ತುಮಕೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಕೇಂದ್ರಕ್ಕೆ ಹಣ ಸಂದಾಯ ಮಾಡಿದ್ದಾರೆ ಎಂದು ಹೇಳಲಾದ ಡೈರಿಯೊಂದನ್ನು ಕಾಂಗ್ರೆಸ್ ಬಿಡುಗಡೆ ಮಾಡಿತ್ತು. ಆ ಡೈರಿಯಲ್ಲಿ ಮಾಜಿ ಸಚಿವ ಸೊಗಡು ಶಿವಣ್ಣ ಹೆಸರು ಕೂಡ ಉಲ್ಲೇಖವಾಗಿದೆ. ಈ ಬಗ್ಗೆ ಅವರೆ ಸ್ಪಷ್ಟನೆ ಕೊಟ್ಟಿದ್ದಾರೆ.

ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಸೊಗಡು ಶಿವಣ್ಣ, ಆ ಡೈರಿಗೂ ನನಗೂ ಯಾವುದೇ ಸಂಬಂಧ ಇಲ್ಲ. ನಾವು ಡೈರಿಯನ್ನು ಯಾವತ್ತೂ ಬರೆದಿಲ್ಲ. ಮಾಧ್ಯಮಗಳಲ್ಲಿ ಡೈರಿ ಬಗ್ಗೆ ಬಂದ ಸುದ್ದಿ ತಿಳಿದು ನನಗೆ ಆಶ್ಚರ್ಯವಾಯಿತು. ಇದೊಂದು ಕೆಟ್ಟಕಾಲವಾಗಿದೆ. ಬೇಕಾದರೆ ಮಂಪರು ಪರೀಕ್ಷೆ ಮಾಡಲಿ. ನನ್ನಿಂದಲೇ ಮಂಪರು ಪರೀಕ್ಷೆ ಶುರುವಾಗಲಿ ಎಂದು ಹೇಳಿದ್ದಾರೆ.


ನನ್ನ ಜೀವನದಲ್ಲೇ ನಾನು 10 ಕೋಟಿ ರೂ. ನೋಡಿಲ್ಲ. ಈಗ ನನ್ನ ಹೃದಯ ಚೆನ್ನಾಗಿದೆ. ಒಂದು ವೇಳೆ ಒಂದೇ ಬಾರಿಗೆ 10 ಕೋಟಿ ರೂ. ನೋಡಿದರೆ ನನಗೆ ಹೃದಯಾಘಾತ ಆಗಬಹುದು. ನಾನು 20 ವರ್ಷ ಎಂಎಲ್‍ಎ ಆಗಿದ್ದಾಗ, 6-8 ತಿಂಗಳ ಮಂತ್ರಿ ಆಗಿದ್ದಾಗ ನಾನು ಹಣವನ್ನೇ ನೋಡಿಲ್ಲ ಎಂದರು.

ಮೂರು ಚುನಾವಣೆಗೆ ನನ್ನ ಬಳಿ ಹಣವೇ ಇರಲಿಲ್ಲ. ಆ ಡೈರಿಯ ಬಗ್ಗೆ ಹೇಳುವುದಕ್ಕೂ ನನಗೆ ನಾಚಿಕೆಯಾಗುತ್ತದೆ. ನನ್ನ ಹೆಸರು ಮತ್ತು ಪಕ್ಷದ ಹೆಸರನ್ನು ಹಾಳು ಮಾಡಲು ದೇಶ ದ್ರೋಹಿಗಳು ಅಪಪ್ರಚಾರ ಮಾಡುತ್ತಿದ್ದಾರೆ. ನಕಲಿ ದಾಖಲೆ ಸೃಷ್ಟಿಸಲಾಗಿದೆ. ಚುನಾವಣಾ ಸಂದರ್ಭದಲ್ಲಿ ಬಿಜೆಪಿ ಹೆಸರಿಗೆ ಮಸಿ ಬಳಿಯಲು ಈ ರೀತಿ ಅಪಪ್ರಚಾರ ಮಾಡಲಾಗುತ್ತಿದೆ ಎಂದು ಸೊಗಡು ಶಿವಣ್ಣ ಹೇಳಿದರು.

Comments

Leave a Reply

Your email address will not be published. Required fields are marked *