ಕುಚುಕು ಗೆಳೆಯನ ಪರವಾಗಿ ಪ್ರಚಾರಕ್ಕೆ ಬರ್ತಾರಂತೆ ಗಾಲಿ ಜರ್ನಾದನ ರೆಡ್ಡಿ

ಬಳ್ಳಾರಿ: 2018ರ ವಿಧಾನಸಭಾ ಚುನಾವಣೆಗೆ ಬಿಜೆಪಿಯಿಂದ ಮೊದಲ ಪಟ್ಟಿ ಈಗಾಗಲೇ ಬಿಡುಗಡೆಯಾಗಿದ್ದು, ಸಂಸದ ಶ್ರೀರಾಮುಲು ಅವರನ್ನು ಚಿತ್ರದುರ್ಗದ ಮೊಳಕಾಲ್ಮೂರು ಕ್ಷೇತ್ರದಿಂದ ಕಣಕ್ಕೆ ಇಳಿಸುತ್ತಿದೆ.

ಬಳ್ಳಾರಿ ಗ್ರಾಮೀಣ, ಕೂಡ್ಲಿಗಿ, ಸಂಡೂರು ಕ್ಷೇತ್ರದ ಆಕ್ಷಾಂಕಿಯಾಗಿದ್ದ ಶ್ರೀರಾಮುಲು ಅವರನ್ನು ಬಿಜೆಪಿ ಮೊಳಕಾಲ್ಮೂರು ಕ್ಷೇತ್ರದಿಂದಲೇ ಸ್ಪರ್ಧೆ ಮಾಡಲು ಸೂಚಿಸಿರುವುದಕ್ಕೆ ಬಿಜೆಪಿ ಹೈಕಮಾಂಡ್ ಲೆಕ್ಕಾಚಾರ ಬೇರೆಯದೇ ಆಗಿದೆ.

ಬಳ್ಳಾರಿ ಜಿಲ್ಲೆಯಲ್ಲಿ ಬಿಜೆಪಿಗೆ ಉತ್ತಮ ನೆಲೆಯಿದ್ದು, ಕಳೆದ ಭಾರಿ ಚಿತ್ರದುರ್ಗ ಜಿಲ್ಲೆಯಲ್ಲಿ ಬಿಜೆಪಿ ಕೇವಲ ಒಂದೇ ಕ್ಷೇತ್ರದಲ್ಲಿ ಗೆಲುವು ಕಂಡಿತ್ತು. ಪರಿಣಾಮ ಈಗ ಕೋಟೆ ನಾಡಿನಲ್ಲಿ ಬಿಜೆಪಿ ಕಹಳೆ ಊದಲು ಸಜ್ಜಾಗಿದೆ. ಈ ಹಿನ್ನೆಲೆಯಲ್ಲಿ ಈ ಹಿಂದೆ ಶ್ರೀರಾಮುಲು ಸ್ಥಾಪನೆ ಮಾಡಿದ್ದ ಬಿಎಸ್ ಆರ್ ಕಾಂಗ್ರೆಸ್ ತೆಕ್ಕೆಯಲ್ಲಿರುವ ಮೊಳಕಾಲ್ಮೂರು ಕ್ಷೇತ್ರದಲ್ಲಿ ರಾಮುಲು ಅವರನ್ನು ಕಣಕ್ಕೆ ಇಳಿಸುವ ಮೂಲಕ ಬಿಜೆಪಿ ಕೋಟೆನಾಡಿನಲ್ಲಿ ಕೇಸರಿ ಪತಾಕೆ ಹಾರಿಸಲು ಮುಂದಾಗಿದೆ.

ಅಲ್ಲದೇ ಶ್ರೀರಾಮುಲು ಅವರು ಬಿಜೆಪಿಯ ಸ್ಟಾರ್ ಪ್ರಚಾರಕರಾಗಿದ್ದು, ಅವರು ನಾಮಪತ್ರ ಸಲ್ಲಿಸಿದ ನಂತರ ರಾಜ್ಯದೆಲ್ಲೆಡೆ ಪ್ರಚಾರ ನಡೆಸುತ್ತಿದ್ದಾರೆ. ಅವರ ಕ್ಷೇತ್ರದ ಜವಾಬ್ದಾರಿಯನ್ನು ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ವಹಿಸಿಕೊಳ್ಳಲಿದ್ದಾರೆ.

ಈಗಾಗಲೇ ಚಿತ್ರದುರ್ಗ ಜಿಲ್ಲೆಯಲ್ಲಿ ಮೂರು ಮನೆ ಮಾಡಿರುವ ರೆಡ್ಡಿ, ರಾಮುಲು ಪರ ಪ್ರಚಾರ, ತಂತ್ರ ಪ್ರತಿತಂತ್ರಗಳನ್ನು ಹೂಡಲು ಸಜ್ಜಾಗಿದ್ದಾರೆ. ಜನಾರ್ದನ ರೆಡ್ಡಿ ಬಳ್ಳಾರಿಗೆ ಬರಲು ಅನುಮತಿ ಇಲ್ಲದ ಪರಿಣಾಮ ರೆಡ್ಡಿ, ಚಿತ್ರದುರ್ಗ ಜಿಲ್ಲೆಯಲ್ಲಿ ಕುಳಿತುಕೊಂಡು ಗಣಿ ನಾಡು ಹಾಗೂ ಕೋಟೆ ನಾಡಿನಲ್ಲಿ ಕೇಸರಿ ಪತಾಕೆ ಹಾರಿಸಲು ಮುಂದಾಗಿದ್ದಾರೆ ಎಂಬುದಾಗಿ ಪಕ್ಷದ ಮೂಲಗಳಿಂದ ತಿಳಿದುಬಂದಿದೆ.

Comments

Leave a Reply

Your email address will not be published. Required fields are marked *