ಡಿಕೆಶಿ ದೆಹಲಿ ಪ್ರವಾಸ ದಿಢೀರ್ ರದ್ದು

ಬೆಂಗಳೂರು: ಹೈಕಮಾಂಡ್ ಭೇಟಿಗೆ ಇಂದು ದೆಹಲಿಗೆ ಹೋಗಬೇಕಿದ್ದ ಮಾಜಿ ಸಚಿವ ಡಿ.ಕೆ ಶಿವಕುಮಾರ್ ತಮ್ಮ ದೆಹಲಿ ಪ್ರವಾಸವನ್ನು ದಿಢೀರ್ ರದ್ದು ಮಾಡಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಬಹುತೇಕ ಡಿ.ಕೆ ಶಿವಕುಮಾರ್ ಹೆಸರು ಅಂತಿಮವಾಗಿದೆ. ಕೆಪಿಸಿಸಿ ಅಧ್ಯಕ್ಷರ ಆಯ್ಕೆಯಲ್ಲಿ ಯಾವುದೇ ಗೊಂದಲ ಇಲ್ಲ. ಆ ವಿಷಯದಲ್ಲಿ ಹೈಕಮಾಂಡ್ ನಿರ್ಧಾರ ಸ್ಪಷ್ಟ. ಅದಕ್ಕಾಗಿ ದೆಹಲಿಗೆ ಬರುವುದು ಬೇಡ ಎಂದು ಎಐಸಿಸಿ ಹಿರಿಯ ನಾಯಕರೊಬ್ಬರು ಡಿಕೆಶಿಗೆ ಸ್ಪಷ್ಟ ಪಡಿಸಿದ್ದಾರೆ. ಖಚಿತ ಮಾಹಿತಿ ಹಿನ್ನೆಲೆಯಲ್ಲಿ ಡಿಕೆಶಿ ಹೈಕಮಾಂಡ್ ಭೇಟಿಗೆ ತೆರಳದಿರಲು ತೀರ್ಮಾನಿಸಿ ಪ್ರವಾಸ ರದ್ದು ಮಾಡಿದ್ದಾರೆ.

ಮಾಜಿ ಸಿಎಂ ಸಿದ್ದರಾಮಯ್ಯ ಅವರು ಇಂದು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಭೇಟಿ ಮಾಡಲಿದ್ದಾರೆ. ಆದರೆ ವಿಪಕ್ಷ ನಾಯಕನ ಸ್ಥಾನ ಹಾಗೂ ಸಿಎಲ್‍ಪಿ ನಾಯಕನ ಸ್ಥಾನದ ಬಗ್ಗೆಯಷ್ಟೇ ಸಿದ್ದರಾಮಯ್ಯ ಜೊತೆ ಹೈಕಮಾಂಡ್ ಚರ್ಚೆ ನಡೆಸಲಿದೆ.

ನಾಳೆಯಿಂದ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ 10 ದಿನಗಳ ಕಾಲ ಇಟಲಿ ಪ್ರವಾಸ ಹಿನ್ನೆಲೆಯಲ್ಲಿ ಎಲ್ಲಾ ಸ್ಥಾನಮಾನಗಳ ಘೋಷಣೆ ತಡವಾಗುವ ಸಾಧ್ಯತೆ ಇದೆ. ಸೋನಿಯಾ ಗಾಂಧಿ ಇಟಲಿ ಪ್ರವಾಸ ಮುಗಿದ ನಂತರವೇ ವಿಪಕ್ಷ ನಾಯಕನ ಆಯ್ಕೆ, ಸಿಎಲ್‍ಪಿ ನಾಯಕನ ಆಯ್ಕೆ ಹಾಗೂ ಕೆಪಿಸಿಸಿ ಅಧ್ಯಕ್ಷ ಸ್ಥಾನ ಎಲ್ಲ ಒಟ್ಟಿಗೆ ಪ್ರಕಟವಾಗುವ ಸಾಧ್ಯತೆ ಇದೆ. ಈ ಕಾರಣಕ್ಕೆ ಡಿಕೆಶಿ ಕೂಡ ದೆಹಲಿ ಫ್ಲೈಟ್ ಹತ್ತದೆ ಸೈಲೆಂಟಾಗಿದ್ದಾರೆ.

Comments

Leave a Reply

Your email address will not be published. Required fields are marked *