ಪ್ರಜ್ವಲ್ ಟಿಕೆಟ್ ಪಕ್ಕಾ ಆದ್ರೆ ಬಿಜೆಪಿಗೆ ಹೋಗೋ ಸುಳಿವು ನೀಡಿದ ಎ.ಮಂಜು?

– ವ್ಯಾಪ್ತಿ ಮೀರಿ ಸರ್ಕಾರಿ ಕಾರ್ ಬಳಸಿದ್ದಕ್ಕೆ ಭವಾನಿ ರೇವಣ್ಣಗೆ ಮಾಜಿ ಸಚಿವ ಟಾಂಗ್

ಮಡಿಕೇರಿ: ಲೋಕಸಭಾ ಚುನಾವಣೆಯಲ್ಲಿ ಹಾಸನ ಕ್ಷೇತ್ರದಿಂದ ಪ್ರಜ್ವಲ್ ರೇವಣ್ಣ ಅವರನ್ನು ಸ್ಪರ್ಧೆಗೆ ಇಳಿಸಿದ್ರೆ, ನಾನು ಬಿಜೆಪಿ ಸೇರುತ್ತೇನೆ ಎಂದು ಮಾಜಿ ಸಚಿವ ಎ.ಮಂಜು ಪರೋಕ್ಷವಾಗಿ ಕಾಂಗ್ರೆಸ್ ವರಿಷ್ಠರಿಗೆ ಸಂದೇಶ ರವಾನಿಸಿದ್ದಾರೆ.

ಕೊಡಗು ಜಿಲ್ಲೆಯ ಸೋಮವಾರಪೇಟೆಯಲ್ಲಿ ಮಾತನಾಡಿದ ಮಾಜಿ ಸಚಿವರು, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ಹಾಸನ ಕ್ಷೇತ್ರದಿಂದ ನಿಂತರೆ ಬೆಂಬಲಿಸುತ್ತೇನೆ. ಆದರೆ ಮೊಮ್ಮಗ ಪ್ರಜ್ವಲ್ ರೇವಣ್ಣ ಅವರನ್ನು ಅಭ್ಯರ್ಥಿಯಾಗಿಸಿದರೆ ಸಹಕಾರ ನೀಡುವುದಿಲ್ಲ ಎಂದು ಪುನರುಚ್ಛರಿಸಿದ್ದಾರೆ.

ಸಾಂಪ್ರದಾಯಿಕವಾಗಿ ನಾನು ಎಚ್.ಡಿ.ದೇವೇಗೌಡರ ಕುಟುಂಬದ ರಾಜಕೀಯ ವಿರೋಧಿಯಷ್ಟೇ. ವೈಯಕ್ತಿಕವಾಗಿ ಅವರ ಹಾಗೂ ನನ್ನ ಮಧ್ಯೆ ಯಾವುದೇ ವಿರೋಧವಿಲ್ಲ. ದೇವೇಗೌಡರು ಹಾಸನದಿಂದ ಸ್ಪರ್ಧಿಸಿದರೆ ಮೈತ್ರಿ ಸರ್ಕಾರದ ಸಂಪೂರ್ಣ ಬೆಂಬಲವಿದೆ. ಇದಕ್ಕೆ ನಾನು ಕೂಡ ಬದ್ಧನಾಗಿದ್ದೇನೆ. ಅವರನ್ನು ಬಿಟ್ಟು ಬೇರೆಯ ಅಭ್ಯರ್ಥಿಗಳು ಸ್ಪರ್ಧಿಸಿದರೆ ನಮ್ಮ ಸಹಕಾರವಿಲ್ಲ ಎಂದು ತಿಳಿಸಿದರು.

ನಾನು ಇಲ್ಲಿವರೆಗೂ ಬಿಜೆಪಿ ಸೇರುತ್ತೇನೆಂದು ಎಲ್ಲಿಯೂ ಹೇಳಿಲ್ಲ. ಆದರೆ ರಾಜಕೀಯ ನಿಂತ ನೀರಲ್ಲ. ಮುಂದೆ ಏನಾಗುತ್ತದೆ ಅಂತ ಕಾದು ನೋಡಬೇಕಿದೆ ಎಂದು ಹೇಳುವ ಮೂಲಕ ಮೈತ್ರಿ ಸರ್ಕಾರದ ನಾಯಕರಿಗೆ ಬಿಸಿ ಮುಟ್ಟಿಸಿದರು.

ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣರ ಪತ್ನಿ ಭವಾನಿ ರೇವಣ್ಣ ಅವರು ಸರ್ಕಾರಿ ಕಾರನ್ನ ವ್ಯಾಪ್ತಿ ಮೀರಿ ಬಳಸಿಕೊಂಡಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಮಾಜಿ ಸಚಿವರು, ಅಧಿಕಾರ ತಿಳುವಳಿಕೆ ಹೇಳುವುದರಿಂದ ಬರುವುದಿಲ್ಲ. ಪಾಲಿಸುವುದರಿಂದ ಬರುತ್ತದೆ. ಇದು ಸಿಎಂ ಕುಮಾರಸ್ವಾಮಿ, ಜಿಲ್ಲಾ ಉಸ್ತುವಾರಿ ಸಚಿವ ಎಚ್.ಡಿ.ರೇವಣ್ಣ ಅವರಿಗೆ ಮುಜುಗರಿಗೆ ತರುವ ವಿಚಾರ ಎಂದು ಕುಟುಕಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *