ಆರೋಗ್ಯ ಸಚಿವರು ಮಾಹಿತಿ ಕೊಡುತ್ತಿಲ್ಲ: ಸಿದ್ದರಾಮಯ್ಯ ಕಿಡಿ

ಬೆಂಗಳೂರು: ಕೊರೊನಾ ಮಾರಕ ವೈರಸ್ ಗೆ ಕಲಬುರಗಿಯಲ್ಲಿ ವ್ಯಕ್ತಿಯೊಬ್ಬರು ಬಲಿಯಾಗಿದ್ದು, ಈ ಹಿನ್ನೆಲೆಯಲ್ಲಿ ಆರೋಗ್ಯ ಸಚಿವ ಶ್ರೀರಾಮುಲು ವಿರುದ್ಧ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಿಎಂ, ವಯಸ್ಸಾದ ವ್ಯಕ್ತಿ ಕಲಬುರಗಿಯಲ್ಲಿ ಕೊರೊನಾ ಭೀಕರ ಕಾಯಿಲೆಯಿಂದ ಮೃತಪಟ್ಟಿದ್ದಾರೆ. ಈ ಬಗ್ಗೆ ಕಲಬುರಗಿ ಶಾಸಕ ಪ್ರಿಯಾಂಕ್ ಖರ್ಗೆ ಜೊತೆ ಮಾತಾಡಿದೆ. ಒಂದು ಸಾವಾಗಿರೋದು ಇಡೀ ರಾಜ್ಯ ದೇಶಕ್ಕೆ ಗೊತ್ತಾಗಿದೆ. ಆದರೆ ಆರೋಗ್ಯ ಸಚಿವರು ಮಾಹಿತಿ ಕೊಡುತ್ತಿಲ್ಲ ಎಂದು ಗರಂ ಆದರು.

ಪ್ರತೀ ನಿಮಿಷ ಇಲಾಖೆಯ ಅಧಿಕಾರಿಗಳು ಸಂಪರ್ಕ ಸಾಧಿಸಿ ಕೆಲಸ ಮಾಡಬೇಕು. ಆರೋಗ್ಯ ಸಚಿವರು ಮಾಹಿತಿ ಕೊಡ್ತಿಲ್ಲ. ಆರೋಗ್ಯ ಸಚಿವ ಹಾಗೂ ವೈದ್ಯಕೀಯ ಸಚಿವರಿಗೆ ಮಾಹಿತಿ ಇದೆಯೋ ಇಲ್ಲವೋ ಗೊತ್ತಿಲ್ಲ. ಅಧಿಕಾರಿಗಳು ಅವರಿಗೆ ಮಾಹಿತಿ ಕೊಡುತ್ತಿದ್ದಾರೋ, ಇಲ್ವೋ ಅದೂ ಗೊತ್ತಿಲ್ಲ. ಆದರೆ ಸಚಿವರು ಪ್ರತೀ ನಿಮಿಷ ಸಾರ್ವಜನಿಕರಿಗೆ ಮಾಹಿತಿ ತಲುಪಿಸುವ ಕೆಲಸ ಮಾಡಬೇಕು ಎಂದರು.

ಜನರಲ್ಲಿ ಭಯ ಹೋಗಲಾಡಿಸುವ ಕೆಲಸ ಮಾಡಬೇಕು. ಮುಂಜಾಗೃತಾ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸಬೇಕು. ಬಸ್ಸು, ರಸ್ತೆ, ವಿಮಾನ ನಿಲ್ದಾಣ ಎಲ್ಲಾ ಕಡೆ ಮುಂಜಾಗೃತಾ ಕ್ರಮದ ಬಗ್ಗೆ ಮಾಹಿತಿ ನೀಡಬೇಕು. ಪರೀಕ್ಷಾ ಕೇಂದ್ರಗಳನ್ನು ಹೆಚ್ಚು ಮಾಡಬೇಕು. ಸದನದಲ್ಲಿ ಈ ಬಗ್ಗೆ ಪ್ರಸ್ತಾಪ ಮಾಡುವುದಾಗಿ ತಿಳಿಸಿದರು.

Comments

Leave a Reply

Your email address will not be published. Required fields are marked *