ಸಿದ್ದರಾಮಯ್ಯ ಇನ್ನೂ ಯಂಗ್ ಆಗಿದ್ದಾರೆ ಅಂದ್ರು ಜಿ.ಟಿ.ದೇವೇಗೌಡ

ಶಿವಮೊಗ್ಗ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರ ಮೇಲೆ ಸಚಿವ ಜಿ.ಟಿ.ದೇವೇಗೌಡ ಮುನಿಸು ಮರೆತಂತೆ ಕಾಣಿಸುತ್ತಿದೆ. ಶನಿವಾರ ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರಿಗೆ ವಯಸ್ಸಾಗಿದೆಯಾ..? ಅವರು ಮುದುಕನಾ..? ಅವರು ಇನ್ನೂ ಯಂಗ್ ಆಗಿಯೇ ಇದ್ದಾರೆ ಎಂದರು.

ಸಿದ್ದರಾಮಯ್ಯ ಮತ್ತೆ ಸಿಎಂ ಆಗಬಾರದು ಅಂತಾ ಇದೆಯಾ..? ದೇವೇಗೌಡರು ಇವತ್ತಿಗೂ ಈ ವಯಸ್ಸಿನಲ್ಲಿ ಮತ್ತೊಮ್ಮೆ ಪ್ರಧಾನಿ ಆಗಬೇಕು ಅಂತಾರೆ. ಚುನಾವಣೆಗೂ ಮುಂಚೆ ನಡೆದಿದ್ದು ಬೇರೆ. ರಾಜಕಾರಣದಲ್ಲಿ ಯಾರೂ ಶಾಶ್ವತ ಮಿತ್ರರೂ ಅಲ್ಲ, ಶತ್ರುಗಳೂ ಅಲ್ಲ. ಸಿದ್ದರಾಮಯ್ಯರನ್ನ ಮತ್ತೆ ಸೋಲಿಸುವ ಸನ್ನಿವೇಶ ಸೃಷ್ಟಿಯಾಗಲ್ಲ. ಏಕೆಂದರೆ ನಾವು ಈಗ ಒಂದಾಗಿಬಿಟ್ಟಿದ್ದೇವೆ ಅಲ್ವಾ ಎಂದು ನಕ್ಕರು.

ಕೇಂದ್ರ ಸರ್ಕಾರದ ಆದೇಶದ ಮೇಲೆ ಆಯೋಗ ಚುನಾವಣೆ ಘೋಷಣೆ ಮಾಡಿದೆಯಾ? ಮೇ ತಿಂಗಳಲ್ಲಿ ಸಂಸದರು ರಾಜೀನಾಮೆ ಕೊಟ್ಟಿದ್ದಾರೆ. ನವೆಂಬರ್ ನಲ್ಲಿ ಚುನಾವಣೆ ನಡೆಸ್ತಿದ್ದಾರೆ ಅಂದ್ರೆ ಈ ಚುನಾವಣೆ ಘೋಷಣೆ ಮಾಡಿರುವ ಉದ್ದೇಶ ಏನು ಎಂದು ಪ್ರಶ್ನಿಸಿದ್ದಾರೆ.

ಪ್ರಜಾಪ್ರಭುತ್ಚದ ಕಗ್ಗೊಲೆಯನ್ನು ಚುನಾವಣಾ ಆಯೋಗ ಮಾಡಿದೆ. ಈಗ ಲೋಕಸಭೆ ಉಪಚುನಾವಣೆಯಲ್ಲಿ ಗೆದ್ದವರಿಗೆ ಐದು ವರ್ಷ ಅಧಿಕಾರ ನೀಡುವ ನಿರ್ಣಯ ಚುನಾವಣಾ ಆಯೋಗ ಮಾಡಲಿ. ಹಾಗಾದರೆ ಆಯೋಗಕ್ಕೆ ನೀತಿ, ಸತ್ಯ ಇದೆ ಎನ್ನಬಹುದು. ಮೋದಿ ಯಾವ ಉದ್ದೇಶದಿಂದ ಮಾಡಿಸಿದ್ದಾರೋ ಗೊತ್ತಿಲ್ಲ. ಈ ಪ್ರಯೋಗ ನಮಗೆ ಹೊಂದಾಣಿಕೆ ಮಾಡಿಕೊಳ್ಳಲು ನೀವೇ ಅನುವು ಮಾಡಿಕೊಟ್ಟಿದ್ದೀರಿ. ಕಾಂಗ್ರೆಸ್-ಜೆಡಿಎಸ್ ಎರಡೂ ಮುಖಂಡರು ಒಗ್ಗಟ್ಟಾಗಿ ಕೆಲಸ ಮಾಡಲು ಈ ಚುನಾವಣೆ ಪೂರಕ ವೇದಿಕೆಯಾಗಿದೆ. ಕುಮಾರಣ್ಣನ ಸರ್ಕಾರ 5 ವರ್ಷ ಗಟ್ಟಿಯಾಗಿ ಇರಲು ಉಪಚುನಾವಣೆ ಸಹಕಾರಿಯಾಗುತ್ತೆ ಅಂದ್ರು.

ನಮ್ಮ ಸರ್ಕಾರ ಈಗತಾನೇ ಅಂಬೆಗಾಲು ಇಡುತ್ತಿದೆ. ಒಂದು ಕಡೆ ಯುದ್ದ ಮಾಡಿ ವಿರುದ್ಧವಾಗಿದ್ದವರು ಒಂದಾಗುವುದಕ್ಕೆ ಸ್ವಲ್ಪ ಕಾಲ ಬೇಕಲ್ಲವಾ? ನಮ್ಮ ಸರ್ಕಾರ ಬಂದು ಐದು ತಿಂಗಳಾಗಿದೆ. ಹೀಗಾಗಿ ಎಲ್ರೂ ಜೊತೆಗೂಡುವುದಕ್ಕೆ ಸ್ವಲ್ಪ ಟೈಮ್ ಬೇಕು. ಈಗ ಎಲ್ಲರನ್ನೂ ಜೊತೆಗೂಡಿಸುವ ಶಕ್ತಿ ಕುಮಾರಸ್ವಾಮಿಗೆ ಇದೆ ಅಂತ ಅವರು ಹೇಳಿದ್ರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *