ಹಾಸನದಲ್ಲಿಂದು ಎಸ್‍ಎಂಕೆ ಪ್ರಚಾರ – ಗದ್ದುಗೆ ತಪ್ಪಿಸಿದ್ದ ಗೌಡರ ವಿರುದ್ಧ ಮೊಳಗುತ್ತಾ ರಣಕಹಳೆ?

ಹಾಸನ: ಹೇಳಿ ಕೇಳಿ ಹಾಸನ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡರ ಅಡ್ಡ. ಒಕ್ಕಲಿಗರ ಪ್ರಶ್ನಾತೀತ ನಾಯಕರಲ್ಲಿ ಅವರು ಒಬ್ಬರು ಅನ್ನೋದು ಗೊತ್ತಿರುವ ಸಂಗತಿ. ಇದೀಗ ಗೌಡರ ಅಡ್ಡಾದಲ್ಲಿ ಮತ್ತೊಬ್ಬ ಒಕ್ಕಲಿಗರ ಪ್ರಬಲ ನಾಯಕ ಅಂತಲೇ ಗುರುತಿಸಿಕೊಳ್ಳುವ ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಇಂದು ಪ್ರಚಾರದ ಅಖಾಡಕ್ಕೆ ಇಳಿಯುತ್ತಿದ್ದಾರೆ.

ಬಿಜೆಪಿ ಪರ ಪ್ರಚಾರ ನಡೆಸಲಿರೋ ಕೃಷ್ಣ ಎಂಟ್ರಿ ಜೆಡಿಎಸ್‍ನಲ್ಲಿ ಕುತೂಹಲ ಮೂಡಿಸಿದೆ. ಅಂದಹಾಗೆ ಕೃಷ್ಣ ಹಾಗೂ ದೇವೇಗೌಡರ ರಾಜಕೀಯ ಪೈಪೋಟಿಗೆ ಪ್ರಚಾರ ಕಣ ಸಾಕ್ಷಿಯಾಗಲಿದೆ.

ಲೋಕಸಭಾ ಚುನಾವಣೆ ದಿನಾಂಕ ಪ್ರಕಟವಾದ ನಂತರ ಪ್ರಚಾರಕ್ಕೆ ಇದೇ ಮೊದಲ ಬಾರಿಗೆ ಎಸ್ ಎಂ ಕೆ ಹಾಸನಕ್ಕೆ ಭೇಟಿ ನೀಡುತ್ತಿದ್ದಾರೆ. ಬೆಳಗ್ಗೆ ಹೆಲಿಕಾಪ್ಟರ್ ಮೂಲಕ ಬೂವನಹಳ್ಳಿಯ ಹೆಲಿಪ್ಯಾಡ್ ಗೆ ಆಗಮಿಸಲಿರೋ ಕೃಷ್ಣ, ಜಿಲ್ಲೆಯ ಅರಸೀಕೆರೆಯ ಗಂಡಸಿ ಮತ್ತು ಬೇಲೂರು ತಾಲೂಕಿನ ಹಗರೆಯಲ್ಲಿ ಪ್ರಚಾರ ಮಾಡಲಿದ್ದಾರೆ. ಇದನ್ನೂ ಓದಿ: ಕೈ ತೊರೆದಿದ್ದು ಯಾಕೆ? ರಾಜ್ಯಪಾಲರನ್ನಾಗಿ ನೇಮಿಸಿದ್ದು ಯಾಕೆ? – ಮಾಧ್ಯಮಗಳ ಜೊತೆ ಎಸ್‍ಎಂಕೆ ಮಾತು

ಬಳಿಕ ರಾತ್ರಿ ಚಿಕ್ಕಮಗಳೂರು ತಾಲೂಕಿನ ಚೀಕನಹಳ್ಳಿಯಲ್ಲಿ ರಾತ್ರಿ ವಾಸ್ತವ್ಯ ಹೂಡಲಿದ್ದಾರೆ. ವಿಶೇಷ ಅಂದ್ರೆ ಇತ್ತೀಚೆಗಷ್ಟೇ ಸುದ್ದಿಗೋಷ್ಠಿಯಲ್ಲಿ ತಮಗೆ 2ನೇ ಬಾರಿ ಸಿಎಂ ಹುದ್ದೆ ತಪ್ಪಲು ದೇವೇಗೌಡರೇ ಕಾರಣ ಅಂತ ಕೃಷ್ಣ ವಾಗ್ದಾಳಿ ನಡೆಸಿದ್ದರು. ಇದಕ್ಕೆ ದೇವೇಗೌಡ ಕೂಡ ತಿರುಗೇಟು ಕೊಟ್ಟಿದ್ದರು. ಹೀಗಾಗಿ ಗೌಡರ ಮೊಮ್ಮಗ ಪ್ರಜ್ವಲ್ ರನ್ನು ಸೋಲಿಸುವ ಮೂಲಕ ತಮಗೆ ಸಿಎಂ ಸ್ಥಾನ ತಪ್ಪಿಸಿದ್ದ ಗೌಡರ ವಿರುದ್ಧ ಸೇಡು ತೀರಿಸಿಕೊಳ್ಳಲು ಕೃಷ್ಣ ಮುಂದಾಗಿದ್ದಾರೆ ಎನ್ನಲಾಗಿದೆ.

Comments

Leave a Reply

Your email address will not be published. Required fields are marked *