ಬೆಂಗ್ಳೂರಲ್ಲಿ ದಲಿತರ ಜಮೀನಲ್ಲಿ ಸಸಿ ನೆಡಲು ಮುಂದಾದ ಅರಣ್ಯ ಇಲಾಖೆ- ಮಹಿಳೆಯರಿಂದ ಆತ್ಮಹತ್ಯೆ ಬೆದರಿಕೆ

ಬೆಂಗಳೂರು: ದಲಿತರಿಗೆ ಸೇರಿದ ಜಾಗಗದಲ್ಲಿ ಯಾವುದೇ ನೋಟಿಸ್ ನೀಡದೆ ಗಿಡ ನೆಡಲು ಅರಣ್ಯ ಇಲಾಖೆ ಮುಂದಾಗಿದ್ದು, ಇದಕ್ಕೆ ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನ ಕೆಆರ್ ಪುರಂನ ಕೊತ್ತನೂರಿನಲ್ಲಿರುವ 10 ದಲಿತ ಕುಟುಂಬಕ್ಕೆ ಸೇರಬೇಕಿದ್ದ 17 ಎಕರೆ 30 ಗುಂಟೆ ಜಾಗದಲ್ಲಿ ಯಲಹಂಕ ವಲಯದ ಅರಣ್ಯಾಧಿಕಾರಿಗಳು ಗಿಡ ನೆಡಲು ಮುಂದಾಗಿದ್ದಾರೆ. ಇದರಿಂದ ಸಿಟ್ಟಿಗೆದ್ದ ಮಹಿಳೆಯರು ಗಿಡ ನೆಟ್ಟರೆ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುವದಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೊತ್ತನೂರಿನ ಸರ್ವೆ ನಂ.47ರ ಜಾಗವನ್ನು ಜಿಲ್ಲಾಡಳಿತ ಅರಣ್ಯ ಇಲಾಖೆಗೆ ನೀಡಿದೆ ಎಂದು ಅರಣ್ಯ ಇಲಾಖೆ ಗಿಡ ನೆಡಲು ಮುಂದಾಗಿದೆ. ಆದರೆ ಜಿಲ್ಲಾಧಿಕಾರಿ ವಿ.ಶಂಕರ್ ದಲಿತರ ಕುಟುಂಬಗಳಿಗೆ ಜಾಗ ಪರೀಶಿಲನೆ ಮಾಡುವುದಾಗಿ ನೋಟಿಸ್ ನೀಡಿದ್ದಾರೆ. ಜಾಗ ಪರಿಶೀಲನೆಗೂ ಮುಂಚೆ ಇಲಾಖೆ ಗಿಡ ನೆಡಲು ಮುಂದಾಗಿದೆ. ಇತ್ತ ದಲಿತರು ಇದು ನಮ್ಮದೆ ಜಾಗ ಅನ್ನುವುದಕ್ಕೆ ನಮ್ಮ ಹೆಸರಿನಲ್ಲಿ ಪಾಣಿ ಇದೆ ಅಂತಾ ವಾದ ಮಾಡುತ್ತಿದ್ದಾರೆ.

ಅರಣ್ಯ ಇಲಾಖೆ ಗಿಡ ನೆಡಲು ಮುಂದಾದ ಜಾಗದಲ್ಲಿ 19 ದಲಿತ ಕುಟುಂಬದ ಮಹಿಳೆಯರು ಸೀಮೆಎಣ್ಣೆ ಕ್ಯಾನ್ ಹಿಡಿದು ಗಿಡ ನೆಡದಂತೆ ತಡೆಯುತ್ತಿದ್ದಾರೆ. ಅಲ್ಲದೇ ದಲಿತರಿಗೆ ನ್ಯಾಯ ಸಿಗದಿದ್ರೆ ಅರೆಬೆತ್ತಲೆ ಪ್ರತಿಭಟನೆ ಮಾಡೋದಾಗಿ ಎಚ್ಚರಿಕೆ ನೀಡಿದ್ದಾರೆ.

ಈ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.

Comments

Leave a Reply

Your email address will not be published. Required fields are marked *