ನಿಖಿಲ್ ಗೆಲುವಿಗೆ ಮೇಕೆ ಬಿಟ್ಟು ಹರಕೆ ಹೊತ್ತುಕೊಂಡ ಅಭಿಮಾನಿಗಳು!

ಮಂಡ್ಯ: ಫಲಿತಾಂಶದ ದಿನ ಹತ್ತಿರವಾಗುತ್ತಿದ್ದಂತೆಯೇ ತಾವು ಬೆಂಬಲಿಸುವ ಅಭ್ಯರ್ಥಿಗಳ ಗೆಲುವಿಗಾಗಿ ಅಭಿಮಾನಿಗಳು ದೇವಾಲಯಗಳಲ್ಲಿ ಪೂಜೆ ಸಲ್ಲಿಸಿ, ಹರಕೆ ಹೊತ್ತುಕೊಳ್ಳುವುದು ಹೆಚ್ಚಾಗುತ್ತಿದೆ. ಸೋಮವಾರದಂದು ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರ ಅಭಿಮಾನಿ ಆಯ್ತು, ಇಂದು ಮೈತ್ರಿ ಪಕ್ಷದ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರ ಗೆಲುವಿಗಾಗಿ ಅಭಿಮಾನಿಗಳು ದೇವರ ಮೊರೆ ಹೋಗಿದ್ದಾರೆ.

ಸೋಮವಾರ ಸುಮಲತಾ ಅವರ ಅಭಿಮಾನಿಗಳು ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಕೆ.ಶೆಟ್ಟಹಳ್ಳಿಯಲ್ಲಿಯ ಶಿವ ದೇವಾಲಯದಲದಲ್ಲಿ ಪೂಜೆ ಸಲ್ಲಿಸಿ ಗೆಲುವಿಗಾಗಿ ಪ್ರಾರ್ಥಿಸಿದ್ದರು. ಹಾಗೆಯೇ ಇಂದು ನಿಖಿಲ್ ಅವರ ಅಭಿಮಾನಿಗಳಿಂದ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಆರತಿ ಉಕ್ಕಡದ ಅಹಲ್ಯದೇವಿ ಪೂಜೆ ಸಲ್ಲಿಸಲಾಗಿದೆ. ಜೊತೆಗೆ ತನ್ನ ನೆಚ್ಚಿನ ನಾಯಕನ ಗೆಲುವಿಗೆ ದೇವರಿಗೆ ಮೇಕೆ ಬಿಟ್ಟು ಅಭಿಮಾನಿಗಳು ಹರಕೆ ಹೊತ್ತುಕೊಳ್ಳುತ್ತಿದ್ದಾರೆ. ಅಲ್ಲದೆ ದೇವರಿಗೆ ಉರುಳು ಸೇವೆಯನ್ನು ಕೂಡ ಸಲ್ಲಿಸಿದ್ದಾರೆ.

ಚುನಾವಣೋತ್ತರ ಸಮೀಕ್ಷೆಯ ಆಧಾರದ ಮೇಲೆ ಗೆಲುವು ತಮ್ಮದೇ ಎಂದು ನಿಖಿಲ್ ಅವರ ಅಭಿಮಾನಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ. 10 ಎಕ್ಸಿಟ್ ಪೋಲ್ ಸಮೀಕ್ಷೆ ಪೈಕಿ 6 ರಲ್ಲಿ ನಿಖಿಲ್ ಕುಮಾರಸ್ವಾಮಿ ಗೆಲ್ಲುವ ಸಾಧ್ಯತೆ ಹೆಚ್ಚಿದೆ ಎಂದು ಬಂದಿದೆ. ಹೀಗಾಗಿ ಗೆಲುವು ನಮ್ಮದೇ ಅನ್ನೋದು ನಿಖಿಲ್ ಅಭಿಮಾನಿಗಳ ಅಭಿಪ್ರಾಯವಾಗಿದೆ. ಇತ್ತ ಸುಮಲತಾ ಅವರ ಅಭಿಮಾನಿಗಳು ಕೂಡ ಗೆಲುವು ನಮ್ಮದೇ ಎನ್ನುತ್ತಿದ್ದಾರೆ.

ಸಮೀಕ್ಷೆ ವರದಿ ಬಹಿರಂಗವಾದ ನಂತರ ಗೆಲುವು ನಮ್ಮದೇ ಎಂದು ಎರಡೂ ಅಭ್ಯರ್ಥಿಗಳ ಅಭಿಮಾನಿಗಳ ಹೇಳುತ್ತಿದ್ದಾರೆ. ಹೀಗಾಗಿ ಗೆಲುವಿಗೆ ದೇವರ ಆಶೀರ್ವಾದಕ್ಕಾಗಿ ಅಭಿಮಾನಿಗಳು ಹರಕೆಯ ಮೊರೆ ಹೋಗುತ್ತಿದ್ದಾರೆ. ಈ ನಡುವೆ ಜಿಲ್ಲೆಯಲ್ಲಿ ಯಾರು ಗೆಲ್ಲುತ್ತಾರೆ ಎಂಬ ಬೆಟ್ಟಿಂಗ್ ಕೂಡ ಜೋರಾಗಿಯೇ ನಡೆಯುತ್ತಿದೆ ಎನ್ನಲಾಗಿದೆ.

Comments

Leave a Reply

Your email address will not be published. Required fields are marked *