ಮಾಜಿ ಸಚಿವರ ಮಗನ ಆರತಕ್ಷತೆಗಾಗಿ ಬೇರೆ ಮಾರ್ಗ ನೋಡ್ಕೊಳ್ಳಿ ಅಂದ್ರು ಟ್ರಾಫಿಕ್ ವಿಭಾಗದ ಹೆಚ್ಚುವರಿ ಆಯುಕ್ತ!

ಬೆಂಗಳೂರು: ಇಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಮಾಜಿ ಸಚಿವ ಹೆಚ್.ಡಿ.ರೇವಣ್ಣರ ಮಗ ಸೂರಜ್‍ಗೌಡ ಆರತಕ್ಷತೆ ಇದೆ. ಹೀಗಾಗಿ ಟ್ರಾಫಿಕ್ ವಿಭಾಗದ ಹೆಚ್ಚುವರಿ ಆಯುಕ್ತ ಆರ್. ಹಿತೇಂದ್ರ ಟ್ವಿಟ್ಟರ್ ಮೂಲಕ ಸಾರ್ವಜನಿಕರು ಸಂಚಾರಕ್ಕೆ ಬೇರೆ ಮಾರ್ಗ ನೋಡಿಕೊಳ್ಳಿ ಅಂತ ಹೇಳಿದ್ದಾರೆ.

ಪ್ಯಾಲೇಸ್ ಗ್ರೌಂಡ್ ನಲ್ಲಿ ಹೈ ಪ್ರೋಫೈಲ್ ಆರತಕ್ಷತೆ ಕಾರ್ಯಕ್ರಮವಿದೆ. ಸಂಜೆ 6 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಟ್ರಾಫಿಕ್ ಸಮಸ್ಯೆಯುಂಟಾಗುತ್ತದೆ. ಹಾಗಾಗಿ ವಾಹನ ಸವಾರರು ಮಾರ್ಗ ಬದಲಾವಣೆ ಮಾಡಿಕೊಂಡರೆ ಸೂಕ್ತ ಅಂತ ಆರ್. ಹಿತೇಂದ್ರ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.

ಆರ್.ಹಿತೇಂದ್ರ ಟ್ವೀಟ್ ಮಾಡುತ್ತಿದ್ದಂತೆ ಸಾರ್ವಜನಿಕರು ಟ್ವಿಟ್ಟರ್ ನಲ್ಲಿಯೇ ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಅರಮನೆ ಮೈದಾನದ ರಸ್ತೆ ನೇರವಾಗಿ ವಿಮಾನ ನಿಲ್ದಾಣಕ್ಕೆ ಸಂಪರ್ಕಿಸುವುದರಿಂದ ಮಾರ್ಗ ಬದಲಾವಣೆ ಅಸಾಧ್ಯವಾಗುತ್ತದೆ. ಜನಸಾಮಾನ್ಯರ ಮದುವೆಗೆ ಈ ರೀತಿ ಮಾಡ್ತೀರಾ..? ಕೇವಲ ದೊಡ್ಡವರ ಆರತಕ್ಷತೆಗೆ ಸಾಮಾನ್ಯ ಜನರು ಯಾಕೆ ಪರದಾಡಬೇಕು? ವೀಕೆಂಡ್‍ನಲ್ಲೂ ಟ್ರಾಫಿಕ್ ಬಿಸಿ ಬೇಕಾ? ಅಂತ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇತ್ತ ಜನರು ಟ್ವಿಟ್ಟರ್ ನಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಂತೆ ಪ್ರತಿಕ್ರಿಯಿಸಿರುವ ಆರ್ ಹಿತೇಂದ್ರ, ಸಾಮನ್ಯವಾಗಿ ಅರಮನೆ ಮೈದಾನದಲ್ಲಿ ಹೈ-ಪ್ರೋಫೈಲ್ ಜನರ ಮದುವೆ ಕಾರ್ಯಕ್ರಮಗಳು ನಡೆಯುತ್ತವೆ. ಹೀಗಾಗಿ ಹೆಚ್ಚಾಗಿ ಟ್ರಾಫಿಕ್ ಸಮಸ್ಯೆಯುಂಟಾಗುವ ಸಾಧ್ಯತೆಗಳಿರುತ್ತವೆ. ಇದು ಕೇವಲ ನಾವು ನಿಮಗೆ ಸಲಹೆಯನ್ನು ನೀಡಿದ್ದೇವೆ. ನಾವು ಸಹ ಟ್ರಾಫಿಕ್ ಮುಕ್ತ ಸಂಚಾರ ಒದಗಿಸಲು ಪ್ರಯತ್ನಿಸುತ್ತವೆ ಅಂತಾ ಉತ್ತರಿಸಿದ್ದಾರೆ.

Comments

Leave a Reply

Your email address will not be published. Required fields are marked *