ಕೆಸಿ ವ್ಯಾಲಿ ಮೂಲಕ ಕೋಲಾರಕ್ಕೆ ಬೆಂಗ್ಳೂರಿನ ನೊರೆ ನೀರು!

ಕೋಲಾರ: ಬರದ ನಾಡಿಗೆ ಕೋರಮಂಗಲ -ಚಲ್ಲಘಟ್ಟ ಕಣಿವೆ(ಕೆಸಿ ವ್ಯಾಲಿ) ಮೂಲಕ ಜೂನ್ ತಿಂಗಳಿನಲ್ಲಿ ನೀರು ಹರಿದು ಬಂದಾಗ ರೈತರು ಸಂಭ್ರಮಿಸಿದ್ದರು. ಆದರೆ ಈ ಸಂಭ್ರಮ ಒಂದೇ ತಿಂಗಳಿನಲ್ಲಿ ಕಮರಿ ಹೋಗಿದ್ದು ಬಂದ ಬೆಳ್ಳಂದೂರು-ವರ್ತೂರು ಕೆರೆಯಲ್ಲಿ ಸೃಷ್ಟಿಯಾಗಿದ್ದ ನೊರೆ ಈಗ ಲಕ್ಷ್ಮೀಸಾಗರ ಕೆರೆಯಲ್ಲೂ ಕಾಣಿಸಿದೆ.

ಕೋಲಾರ ತಾಲೂಕು ಲಕ್ಷ್ಮೀಸಾಗರ ಕೆರೆ ಹಾಗೂ ಸುತ್ತಮುತ್ತಲ ಗಾಳಿಯಲ್ಲಿ ನೊರೆ ಹಾರಾಡುತ್ತಿದೆ. ಬೆಂಗಳೂರಿನ ತ್ಯಾಜ್ಯ ನೀರನ್ನು ಎರಡು ಹಂತದಲ್ಲಿ ಸಂಸ್ಕರಣ ಮಾಡದೇ ಹರಿಸದ ಕಾರಣ ನೊರೆ ಬಂದಿದೆ ಎಂದು ಸ್ಥಳೀಯರು ಹೇಳಿದ್ದಾರೆ.

ಕೋಲಾರಕ್ಕೆ ಕೆ.ಸಿ.ವ್ಯಾಲಿ ಯೋಜನೆಯ ಮೂಲಕ ಹರಿಸಲಾಗುತ್ತಿರುವ ಮಾರಕ ನೊರೆ ಮಿಶ್ರಿತ ನೀರನ್ನು ಅಧಿಕಾರಿಗಳು ತಕ್ಷಣವೇ ನಿಲ್ಲಿಸಿದ್ದಾರೆ. ಸದ್ಯ ಮಲಿನವಾದ ನೊರೆ ನೀರನ್ನು ಹರಿಸುತ್ತಿರುವ ಪರಿಣಾಮ ಕೋಲಾರ ಜಿಲ್ಲೆಯ ಅಂತರ್ಜಲ ಹಾಗೂ ಕೆರೆಯ ನೀರು ಹಾಳಾಗುವ ಆತಂಕ ಎದುರಾಗಿದೆ.

ಅಧಿಕಾರಿಗಳ ವಿರುದ್ಧ ಸ್ಥಳೀಯರು ಆಕ್ರೋಶ ಹೊರಹಾಕುತ್ತಿದ್ದು, ಈ ಕೆಸಿ ವ್ಯಾಲಿ ತ್ಯಾಜ್ಯ ನೀರು ಬೇಡವೇ ಬೇಡ. ಈ ನೀರಿನಿಂದ ಕೆರೆಯ ಜಲಚರಗಳು ಹಾಗೂ ಪ್ರಾಣಿಗಳು ಸಾಯುವ ಆತಂಕ ಸೃಷ್ಟಿಯಾಗಿದೆ. ನಮಗೆ ಯಾವುದಾದರೂ ನದಿ ಮೂಲದ ನೀರನ್ನು ಕೊಡಿ ಎಂದು ಒತ್ತಾಯಿಸುತ್ತಿದ್ದಾರೆ.

1400 ಕೋಟಿ ರೂ. ವೆಚ್ಚದಲ್ಲಿ ಕೋಲಾರ ಜಿಲ್ಲೆಯ 130 ಕೆರೆಗಳನ್ನು ತುಂಬಿಸುವ ಯೋಜನೆ ಸಿಕೆ ವ್ಯಾಲಿ ಆಗಿದ್ದು, ಕಳೆದ ಒಂದುವರೆ ವರ್ಷದ ಹಿಂದೆ ಮಾಜಿ ಸಿಎಂ ಸಿದ್ದರಾಮಯ್ಯ ಯೋಜನೆಗೆ ಅಡಿಗಲ್ಲು ಹಾಕಿ, ಒಂದು ವರ್ಷದಲ್ಲಿ ಯೋಜನೆ ಪೂರ್ಣಗೊಳಿಸುವ ಭರವಸೆ ನೀಡಿದ್ರು. ಜೂನ್ 2 ರಂದು ಕೆಸಿ ವ್ಯಾಲಿ ಯೋಜನೆಯ ನೀರು ಲಕ್ಷ್ಮೀ ಸಾಗರ ಕೆರೆಯನ್ನು ಪ್ರವೇಶಿಸಿತ್ತು.

Comments

Leave a Reply

Your email address will not be published. Required fields are marked *