ಮೀನುಗಾರರ ಸಮಯ ಪ್ರಜ್ಞೆಯಿಂದ ಉಳಿಯಿತು ಗೃಹಿಣಿ ಪ್ರಾಣ!

– ನಡುನೀರಲ್ಲಿ ಬಿದ್ದಿದ್ರೂ ಬದುಕುಳಿದ ಮಹಿಳೆ

ಯಾದಗಿರಿ: ಕೌಟುಂಬಿಕ ಸಮಸ್ಯೆಯಿಂದ ಮನನೊಂದು ಗೃಹಿಣಿಯೊಬ್ಬಳು ನದಿಗೆ ಹಾರಿದ ಘಟನೆ ಜಿಲ್ಲೆಯ ಶಹಾಪುರ ತಾಲೂಕಿನ ಗೂಗಲ್ ಸೇತುವೆಯಲ್ಲಿ ನಡೆದಿದೆ.

ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಕದರಾಪುರ ಗ್ರಾಮದ ನಿವಾಸಿ ಗೃಹಿಣಿ ಆತ್ಮಹತ್ಯೆಗೆ ಯತ್ನಿಸಿ, ಗೂಗಲ್ ಸೇತುವೆಯಿಂದ ಕೃಷ್ಣಾ ನದಿಗೆ ಹಾರಿದ್ದಾಳೆ. ನಾವಿಕರ ಸಮಯ ಪ್ರಜ್ಞೆಯಿಂದ ಗೃಹಿಣಿ ಬದುಕುಳಿದಿದ್ದು, ಆಕೆಯನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.

ರಕ್ಷಣ ಕಾರ್ಯ ಹೇಗಿತ್ತು?:
ಗೃಹಿಣಿ ಸೇತುವೆಯಿಂದ ಬಿದ್ದಿದ್ದನ್ನು ನೋಡಿದ ವ್ಯಕ್ತಿಯೊಬ್ಬರು ನದಿಯಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ಮೀನುಗಾರರ ಕೂಗಿ ಹೇಳಿದ್ದಾರೆ. ನೀರಿಗೆ ಬಿದ್ದಿದ್ದ ಗೃಹಿಣಿ ತನ್ನ ಪಕ್ಕದಲ್ಲಿದ್ದ ಕಟ್ಟೆಯನ್ನು ಹಿಡಿದುಕೊಂಡು ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಳು. ಮೀನುಗಾರಿಕೆ ಬಿಟ್ಟು ಸೇತುವೆ ಬಳಿಗೆ ಧಾವಿಸಿದ ಮೀನುಗಾರರು ಗೃಹಿಣಿಯನ್ನು ರಕ್ಷಿಸಿ ತೆಪ್ಪದಲ್ಲಿ ಹಾಕಿಕೊಂಡು ದಡಕ್ಕೆ ತಂದು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡೆಸಿದ್ದಾರೆ. ಬಳಿಕ ವಡಗೇರಾ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.

ಪೊಲೀಸರ ವಿಚಾರಣೆಗೆ ಒಳಪಡಿಸಿದಾಗ, ಕೌಟುಂಬಿಕ ಸಮಸ್ಯೆಯಿಂದಾಗಿ ಆತ್ಮಹತ್ಯೆಗೆ ಯತ್ನಿಸಿದ್ದಾಗಿ ಗೃಹಿಣಿ ತಪ್ಪೊಪ್ಪಿಕೊಂಡಿದ್ದಾಳೆ. ಈ ಕುರಿತು ವಡಗೇರಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *