ಪ್ರಕಾಶ್ ರೈಗೆ ಕೆಲ್ಸ ಇಲ್ಲದ್ದಕ್ಕೆ ಮೋದಿ ವಿರುದ್ಧ ಮಾತನಾಡುತ್ತಾನೆ: ವೆಂಕಟ್ ಆಕ್ರೋಶ

ಮಡಿಕೇರಿ: ಪ್ರಕಾಶ್ ರೈಗೆ ಮಾಡುವುದಕ್ಕೆ ಬೇರೆ ಕೆಲಸ ಇಲ್ಲ. ಹಾಗಾಗಿ ಪ್ರಧಾನಿ ಮೋದಿ ವಿರುದ್ಧ ಮಾತನಾಡುತ್ತಾನೆ ಎಂದು ಫೈರಿಂಗ್ ಸ್ಟಾರ್ ವೆಂಕಟ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಏಕವಚನದಲ್ಲೇ ಪ್ರಕಾಶ್ ವಿರುದ್ಧ ಗುಡುಗಿದ ವೆಂಕಟ್, ಸಿನೆಮಾಗಳಿಗೆ ಡೈಲಾಗ್ ಹೊಡೆಯೋದು ಸುಲಭ, ಬೇರೆಯವರು ಡೈಲಾಗ್ ಬರೆದು ಕೊಟ್ಟಿರುತ್ತಾರೆ. ದೇಶದ ಆಡಳಿತ ನಡೆಸುವ ಕಷ್ಟ ಪ್ರಧಾನಿಗೆ ಗೊತ್ತು. ಪ್ರಕಾಶ್ ರೈಗೆ ಈಗ ಮಾಡುವುದಕ್ಕೆ ಸಿನಿಮಾ ಇಲ್ಲ. ಹೀಗಾಗಿ ಮೋದಿ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ ಎಂದು ಲೇವಡಿ ಮಾಡಿದರು.

ಮೋದಿ ಬಗ್ಗೆ ಮಾತನಾಡುವ ಯೋಗ, ಯೋಗ್ಯತೆ ಪ್ರಕಾಶ್ ರೈಗೆ ಇಲ್ಲ. ಮೊದಲು ದೇಶದ ಜನರನ್ನು ಪ್ರೀತ್ಸೋದಕ್ಕೆ ಕಲಿಯಲಿ. ಎಷ್ಟು ಜನರಿಗೆ ಸಹಾಯ ಮಾಡಿದ್ದಿಯಾ? ನಾನು ಎಷ್ಟು ಜನರಿಗೆ ಸಹಾಯ ಮಾಡಿದ್ದೇನೆ ಅನ್ನೋದನ್ನ ತೋರಿಸುತ್ತೇನೆ. ನೀನು ತೋರಿಸ್ತೀಯಾ ಎಂದು ಸವಾಲು ಹಾಕಿದರು.

ಪ್ರಚಾರದಲ್ಲಿ ಇದ್ದರೆ ಸಿನೆಮಾದಲ್ಲಿ ಹೆಚ್ಚು ಅವಕಾಶ ಸಿಗಬಹುದು ಎನ್ನುವ ಕಾರಣಕ್ಕೆ ಮೋದಿ ವಿರುದ್ಧ ಹೇಳಿಕೆ ನೀಡುತ್ತಿದ್ದಿ. ಸಿನೆಮಾದಲ್ಲಿ ವಿಲನ್ ಆಗಿದ್ದೀಯಾ, ಲೈಫಲ್ಲಿ ಆಗಬೇಡ. ನಾಯಿ ಕೂಡಾ ಬೊಗಳುತ್ತೆ ಆದರೆ ಅದು ನಿಯತ್ತಿನಿಂದ ಕಾವಲು ಕಾಯುತ್ತೆ ಎಂದು ಹೇಳಿದರು.

ಮೊದಲು ಪ್ರಧಾನಿಯ ಮೌಲ್ಯವನ್ನು ತಿಳಿಯಲಿ. ರಾಜ್ಯದಲ್ಲಿ ಪ್ರಕಾಶ್ ಮಾಡುತ್ತಿರುವ ಹೇಳಿಕೆಗಳು ಕೆಲಸ ಮಾಡುತ್ತಿಲ್ಲ. ಬೇರೆಯವರ ಡೈಲಾಗ್‍ನ ಹೇಳಲಿ. ಮೋದಿ ಬಗ್ಗೆ ಮಾತನಾಡಿದರೆ ಜನ ಸುಮ್ಮನೆ ಇರೋದಿಲ್ಲ. ಫೇಸ್ಬುಕಲ್ಲಿ ಕಾಮೆಂಟ್ ಮಾಡುವಾಗ ಹೆಲ್ಮೆಟ್ ಹಾಕಿಕೊಳ್ಳುವುದು ಸೂಕ್ತ ಎಂದು ಹೇಳಿದರು.

Comments

Leave a Reply

Your email address will not be published. Required fields are marked *