– ಬೆಂಕಿ ನಂದಿಸಲು ನೀರು ತುಂಬಿರದ ವಾಹನ ತಂದಿದ್ದ ಸಿಬ್ಬಂದಿ
ಕಾರವಾರ: ಮನೆ ಹಾಗೂ ಕೊಟ್ಟಿಗೆಗೆ ಹೊತ್ತಿಕೊಂಡಿದ್ದ ಬೆಂಕಿಯನ್ನು ನಂದಿಸಲು ಬಂದಿದ್ದ ವಾಹನದಲ್ಲಿ ನೀರು ಇಲ್ಲದೆ ಅಗ್ನಿಶಾಮಕ ಸಿಬ್ಬಂದಿ ಪರದಾಡಿದ ಘಟನೆ ಉತ್ತರ ಕನ್ನಡ ಸಿದ್ದಾಪುರ ತಾಲೂಕಿನ ಬೇಡ್ಕಣಿ ಗ್ರಾಮದಲ್ಲಿ ನಡೆದಿದೆ.
ಬೇಡ್ಕಣಿ ಗ್ರಾಮದ ಗಣಪತಿ ಎಂ.ನಾಯ್ಕ ಎಂಬವರ ಮನೆಗೆ ನಿನ್ನೆ ತಡರಾತ್ರಿ ಬೆಂಕಿ ಬಿದ್ದಿತ್ತು. ಈ ಕುರಿತು ಮಾಹಿತಿ ಪಡೆದು ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಲು ನೀರು ಬಿಡಲು ಮುಂದಾಗಿದ್ದಾರೆ. ಆದರೆ ವಾಹನದಲ್ಲಿ ನೀರು ಖಾಲಿಯಾಗಿದ್ದರಿಂದ ಕೆಲ ಹೊತ್ತು ಪರದಾಡುವಂತಾಯಿತು. ಅಷ್ಟೇ ಅಲ್ಲದೆ ನೀರು ಪಂಪ್ ಮಾಡುವ ಮಷಿನ್ ಕೂಡ ದುರಸ್ತಿಯಾಗಿತ್ತು. ಇದರಿಂದಾಗಿ ಬೆಂಕಿ ಆರಿಸಲು ಸಾಧ್ಯವಾಗಲಿಲ್ಲ.

ಅಗ್ನಿಶಾಮಕ ದಳದ ಎಡವಟ್ಟಿನಿಂದಾಗಿ ಕೊಟ್ಟಿಗೆಯಲ್ಲಿದ್ದ ಮೇವು ಸಂಪೂರ್ಣ ನಾಶವಾಗಿದ್ದು, ಮನೆಯ ಮೇಲ್ಚಾವಣಿ ಸುಟ್ಟು ಭಸ್ಮವಾಗಿದೆ. ಆದರೆ ಕುಟುಂಬದ ಸದಸ್ಯರು ಮನೆಯಲ್ಲಿದ್ದ ಅಗತ್ಯ ವಸ್ತುಗಳನ್ನು ಅಂಗಳದಲ್ಲಿ ತಂದು ಇಟ್ಟು ಭಾರೀ ಹಾನಿಯನ್ನು ತಪ್ಪಿಸಿದ್ದಾರೆ. ಸುಮಾರು 5 ಲಕ್ಷ ರೂ.ಗಿಂತ ಅಧಿಕ ಹಾನಿಯಾಗಿದೆ ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ.
ಭಾರೀ ಹಾನಿಗೆ ಅಗ್ನಿಶಾಮಕ ದಳದ ನಿರ್ಲಕ್ಷ್ಯವೇ ಮುಖ್ಯ ಕಾರಣ. ವಾಹನದಲ್ಲಿ ನೀರು ಇಲ್ಲದೆ ಬೆಂಕಿ ನಂದಿಸಲು ಬಂದಿರುವುದು ಸಿಬ್ಬಂದಿಯ ಬೇಜವಾಬ್ದಾರಿ ತೋರಿಸುತ್ತದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಆದರೆ ಮನೆಯ ಮಾಲೀಕ ಗಣಪತಿ ನಾಯ್ಕ್ ಸಣ್ಣ ಪುಟ್ಟ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv

Leave a Reply